Mankuthimmana kagga (ಮಂಕುತಿಮ್ಮನ ಕಗ್ಗ ) with meanings 41-50

 ರಸಧಾರೆ – 041

ಕದಕಗಳಿಯನು ಬಿಗಿದು ಬೊಮ್ಮ ಗುಡಿಯಲಿರಲಿ

ಅದರ ಕೀಲ್ಕುಂಚಿಕೆಯ ಹೊರಕೆಸೆಯೇ ಸಾಕು

ಪದವಾಕ್ಯವಿದರಾಗ ವಾದಗಡಣೆಯ ಬಿಟ್ಟು

ಒದವಿಪರು ದಿಟದರಿವ – ಮಂಕುತಿಮ್ಮ?

ಕದ – ಬಾಗಿಲು, ಅಗಳಿ = ಚಿಲಕ, ಕೀಲ್ಕುಂಚಿಕೆ = ಬೀಗದ ಕೈ, ಪದವಾಕ್ಯವಿದರು = ಪದ, ವಾಕ್ಯ, ವ್ಯಾಕರಣ ಇತ್ಯಾದಿಗಳನ್ನರಿತ ಪಂಡಿತರು, ವಾದ = ಚರ್ಚೆ, ಗಡಣೆ = ಆಡಂಬರ, ಒದವಿಪರು = ಸಹಾಯಮಾಡುತ್ತಾರೆ, ದಿಟದರಿವ = ಸತ್ಯವನ್ನು ಅರಿಯುವ.

ಕದಕೆ + ಅಗಳಿಯನು = ಕದಕಗಳಿಯನು, ಪದ + ವಾಕ್ಯ + ವಿದರು + ಆಗ = ಪದವಾಕ್ಯವಿದರಾಗ,

ಆ ದೇವರನ್ನು ಗುಡಿಯಲಿ ಬಿಟ್ಟು, ಬಾಗಿಲನ್ನು ಹಾಕಿ, ಚಿಲಕ ಹಾಕಿ, ಬೀಗ ಜಡಿದು ಬೀಗದ ಕೈಯನ್ನು ಎಸೆದುಬಿಟ್ಟರೆ, ಆಗ ಪಂಡಿತರು ಮತ್ತು ವಿಧ್ವಾಂಸರು ಆ ದೇವರನ್ನು ಕುರಿತ, ತಮ್ಮ ಪಾಂಡಿತ್ಯವನ್ನು ಪ್ರದರ್ಶಿಸುವ ವ್ಯರ್ಥವಾದವನ್ನು ಬಿಟ್ಟು, ಆ ದೇವರನ್ನು ಕುರಿತಾದ ಸತ್ಯವನ್ನು ಅರಿಯಲು ಸಹಾಯಮಾಡುವರು ಎಂಬುದು ಈ ಕಗ್ಗದ ವಾಚ್ಯಾರ್ಥವು.

ಸಾಮನ್ಯವಾಗಿ ಎಲ್ಲರೂ ದೇವಸ್ಥಾನಗಳಿಗೆ ಹೋಗುತ್ತಾರೆ. ಅದು ಮಂದಿರಗಳಾಗಿರಬಹುದು, ಮಸೀದಿಗಳಾಗಿರಬಹುದು ಇಗರ್ಜಿಗಳಾಗಿರಬಹುದು, ಅಥವಾ ಬೇರೆ ಯಾವುದೇ ಮತಕ್ಕೆ ಸೇರಿದ ಪೂಜಾ ಮಂದಿರವಾಗಿರಬಹುದು. ಕೆಲವರು ಪ್ರತಿನಿತ್ಯ ಹೋಗುತ್ತಾರೆ. ಕೆಲವರು ವಾರಕ್ಕೊಮ್ಮೆ ಹೋಗುತ್ತಾರೆ. ಕೆಲವರು ವಿಶೇಷದಿನಗಳಲ್ಲಿ ಹೋಗುತ್ತಾರೆ, ಕೆಲವರು ಒಂದು ವಾರದಲ್ಲಿ ಬೇರೆ ಬೇರೆ ದಿನಗಳಲ್ಲಿ, ಬೇರೆ ಬೇರೆ ದೇವಸ್ಥಾನಗಳಿಗೆ ಹೋಗುತ್ತಾರೆ, ಕೆಲವರು ಹೋಗುವುದೇ ಇಲ್ಲ. ಕೆಲವರು ಭಕ್ತಿಯಿಂದ ಹೋಗುತ್ತಾರೆ, ಕೆಲವರು ಶ್ರದ್ಧೆಯಿಂದ ಹೋಗುತ್ತಾರೆ, ಕೆಲವರು ಕೇವಲ ಅಭ್ಯಾಸಬಲದಿಂದ ಹೋಗುತ್ತಾರೆ, ಮತ್ತೆ ಕೆಲವರು ಕಾಟಾಚಾರಕ್ಕೆ ಹೋಗುತ್ತಾರೆ. ಹೇಗೆ ದೇವಾಲಯಗಳಿಗೆ ಹೋಗುವುದು ಸರಿಯೇ ತಪ್ಪೇ? ಅದು ಅವರವರ ಅಭಿಮತಕ್ಕೆ ಬಿಟ್ಟದ್ದು. ಆದರೆ ಹೀಗೆ ದೇವಸ್ಥಾನಕ್ಕೆ ಹೋಗುವುದು ಅಧ್ಯಾತ್ಮ ಪ್ರಯಾಣದ ಒಂದು ಹಂತ. ಮೂರ್ತಿ ಪೂಜೆ ಒಂದು ಹಂತ. ಅದೇ ಪರಿಪೂರ್ಣವೂ ಅಲ್ಲ ಮತ್ತು ಪರಮಾರ್ಥವೂ ಅಲ್ಲ.

ಅದು ಒಂದು ಹಂತವೆಂದರೆ ಅದಕ್ಕಿಂತ ಮೇಲಿನ ಸ್ಥರಕ್ಕೆ ಹೋಗುವುದು ಸರಿಯಲ್ಲವೇ? ಎಂದರೆ, ಹೌದು ಅದೇ ಸರಿಯಾದ ಅಧ್ಯಾತ್ಮ ಚಿಂತನೆ. ಯಾವುದೋ ಒಂದೇ ಒಂದು ಗುಣವಿರುವ ವಸ್ತುವಿನ ಗುಣವನ್ನು ಆ ವಸ್ತುವಿನಲ್ಲೇ ನೋಡುವುದು ಸಹಜ. ಅನ್ಯ ಮಾರ್ಗವಿಲ್ಲ. ಆದರೆ ಅನಂತ ಕಲ್ಯಾಣ ಗುಣಗಳನ್ನು ಹೊಂದಿರುವ ಆ ಪರಮಾತ್ಮ, ಸಕಲ ಚರಾಚರಗಳ ಒಡೆಯ, ಎಲ್ಲಕ್ಕೂ ಮೂಲ ಮತ್ತು ಗಮ್ಯನಾದ ಆ ಪರಮಾತ್ಮ, ಎಲ್ಲ ಜೀವಿಗಳಲ್ಲೂ ಚೇತನ ಸ್ವರೂಪನಾಗಿ ಇರುವಂತಾ ಪರಮಾತ್ಮ, ಒಂದು ಭೃಹತ್ ವ್ಯಾಪಕತ್ವವನ್ನು ಹೊಂದಿರುವ ಆ ಪರಮಾತ್ಮನನ್ನು ಒಂದು ಚಿತ್ರಪಟದಲ್ಲೋ ಅಥವಾ ಒಂದು ವಿಗ್ರಹದಲ್ಲೋ ಅಥವಾ ಒಂದು ದೇವಸ್ಥಾನದಲ್ಲೋ ಸೀಮಿತಗೊಳಿಸಲು ಸಾಧ್ಯವೇ?. ಹಾಗೆ ಮಾಡಿದರೆ, ನಮ್ಮ ದೃಷ್ಟಿಕೋಣವೂ ಕಿರಿದಾಗಿ ಸತ್ಯದ ಅರಿವು ಸಂಪೂರ್ಣವಾಗುವುದಿಲ್ಲ. ಹಾಗಾಗಿ ಆ ದೇವರನ್ನು ಆ ದೇವಸ್ಥಾನದಲ್ಲಿ ಇರಿಸಿ, ಬಾಗಿಲಿಗೆ ಬೀಗಹಾಗಿ, ಕೀಲಿಯನ್ನು ಬಿಸುಟು, ಎಂದರೆ ಆ ದೇವರನ್ನು ಆ ದೇವಸ್ತಾನದಲ್ಲಿರುವ ವಿಗ್ರಹಕ್ಕೆ ಸೀಮಿತಗೊಳಿಸದೆ, ಪರಮಾತ್ಮನ ಒಂದು ವಿಸ್ತಾರವಾದ ಚಿತ್ರವನ್ನು ಕಾಣಬೇಕು ಎನ್ನುವುದು ಈ ಕಗ್ಗದ ಗೂಡಾರ್ಥ.

ಎಲ್ಲಿಯತನಕ ಸೀಮಿತ ವಿಚಾರಗಳು ಇರುತ್ತವೆಯೋ, ಪಂಡಿತರು ಅದನ್ನೇ ಮಂಡಿಸುತ್ತಾ, ವಿಧ್ವಾಂಸರು ತಮ್ಮ ಪಾಂಡಿತ್ಯವನ್ನು ಪ್ರದರ್ಶಿಸುತ್ತಾ ಜನರನ್ನು ತಪ್ಪುದಾರಿಗೆ ಕೊಂಡೊಯ್ಯುವ ವ್ಯರ್ಥವಾದವನ್ನು ಮಾಡುತ್ತಾರೆ, ಎಂದು ಹೇಳುತ್ತಾ, ಎಲ್ಲರೂ ಪರಮಾತ್ಮನ ಒಂದು ವಿಶಾಲ ರೂಪವನ್ನು ನೋಡಲು ಪ್ರಯತ್ನಿಸಿದರೆ, ಆಗ ಆ ವಿದ್ವಾಂಸರೂ ಸಹ ವ್ಯರ್ಥವಾದವನ್ನು ಬಿಟ್ಟು ಸತ್ಯದ ಅರಿವುನ್ತಾಗಿಸಲು ಸಹಾಯ ಮಾಡಬಹುದು ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದ ಮೂಲಕ.

ವಿಗ್ರಹಾರಾಧನೆ, ದೇವಸ್ತಾನಕ್ಕೆ ಹೋಗುವುದು,ಸರಿಯಲ್ಲ ಎಂದು ಅಲ್ಲ. ಆದರೆ ಅದೇ ಪರಮಾರ್ಥವಲ್ಲ. ಅದಕ್ಕಿಂತ ಬೆಳೆದು ವಿಸ್ತಾರವಾದ ರೂಪ ಮತ್ತು ಗಹನವಾದ ತತ್ವ ಮತ್ತು ಸತ್ಯವನ್ನು ಅರಿತುಕೊಳ್ಳುವುದು ಎಲ್ಲ ಅಧ್ಯಾತ್ಮಾಧ್ಯಾಯಿಗಳ ಕರ್ತವ್ಯ. ಮಹಡಿಯಮೇಲೆ ಹೋಗಲು ಮೆಟ್ಟಿಲುಗಳು ಬೇಕು. ಮೆಟ್ಟಿಲೇ ಮಹಡಿಯಾಗಲು ಸಾಧ್ಯವೇ? ನಮ್ಮ ಆಚಾರ ವಿಚಾರ ಮತ್ತು ಸಂಪ್ರದಾಯಗಳೆಲ್ಲ ಉನ್ನತ ಸತ್ಯದ ಅರಿವಿಗಾಗಿ ಇರುವ ಮೆಟ್ಟಿಲುಗಳು ಅಥವಾ ಉಪಕರಣಗಳು ಅಷ್ಟೇ. ಅವೇ ಪರಮಾರ್ಥವಲ್ಲ. ಅವುಗಳು ಬೇಕು. ಅವುಗಳ ಮೂಲಕ ಎಲ್ಲರೂ ಉನ್ನತ ಸತ್ಯದ ದರ್ಶನ ಮಾಡಿಕೊಳ್ಳಬೇಕು. ಈ ರೀತಿಯ ಉಪಕರಣಗಳನ್ನು ಉಪಯೋಗಿಸುತ್ತಾ ಮತ್ತು ಅವಗಳನ್ನು ಬಿಟ್ಟು, ಅವುಗಳನ್ನು ಮೀರಿ ಉನ್ನತ ಸ್ಥಾನಕ್ಕೆ ಬೆಳೆದಾಗ, ಸತ್ಯವಾಗಲೂ ನಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗುತ್ತದೆ.

ರಸಧಾರೆ – 042

ಆಹ! ಈ ಮೋಹಗಳೋ, ನೇಹಗಳೋ, ದಾಹಗಳೋ

ಊಹಿಪೆಯ ಸೃಷ್ಟಿಯಲಿ ಹೃದಯವಿಹುದೆಂದು ?

ಹೋಹೊ ಹಾಹಾ ಎಂದು ನಮ್ಮ ಬಾಯ್ಬಿಡಿಸುವುದೆ

ಈ ಹರಿಬದೊಳಗುಟ್ಟು ? ಮಂಕುತಿಮ್ಮ.

ನೇಹಗಳು = ಸ್ನೇಹಗಳು. ಊಹಿಪೆಯ = ಊಹಿಸುತ್ತೀಯಾ. ಹರಿಬ = ವ್ಯಾಪಾರ.

ಆಹಾ ಈ ಬಂಧನಗಳು ಸ್ನೇಹಗಳು ಮತ್ತು ಬಯಕೆಗಳು ಇವುಗಳ ಮಧ್ಯೆ ಈ ಜಗತ್ತಿನ ಎಲ್ಲರಲ್ಲೂ ಹೃದಯವಿದೆಯೆಂದು ನೀನು ಅಂದುಕೊಂಡಿದ್ದೀಯಾ. ಪರಸ್ಪರ ಮಾತುಗಳ ಅಟ್ಟಹಾಸದಿಂದ ನಿಮ್ಮನ್ನೂ ಅಂತಹ ಅಟ್ಟಹಾಸಕ್ಕೆ ಪ್ರತಿಕ್ರಿಯಿಸಿಸಿವುದೇ ಈ ಜಗದ್ವ್ಯಾಪಾರದ ಗುಟ್ಟು ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಜಗತ್ತಿನ ಪರಸ್ಪರ ಸಂಬಂಧಗಳಲ್ಲಿರುವ ಪೊಳ್ಳುತನವನ್ನು ಕುಹಕವಾಡುತ್ತಾರೆ, ಡಿ.ವಿ.ಜಿ.ಯವರು. ಎಲ್ಲ ಸಂಬಂಧಗಳೂ ಕೇವಲ ವ್ಯಾವಹಾರಿಕವಾಗಿದೆಯೇ ಹೊರತು ಹೃದಯದ ಸಂಬಂಧಗಳು ನಶಿಸಿಹೋಗಿವೆ. ಬೂಟಾಟಿಕೆಯ ಸ್ನೇಹ, ತೋರಿಕೆಯ, ಅಟ್ಟಹಾಸದ ಸಂಬಂಧಗಳು ಮತ್ತು ಈ ಸಂಬಂಧಗಳಲ್ಲಿನ ಪೊಳ್ಳುತನ, ಇವುಗಳೇ ಈ ಕಗ್ಗದ ಹೂರಣ. ಅಂದು ಅವರಿಗೆ ಹಾಗೆ ಅನ್ನಿಸಿರಬೇಕಾದರೆ, ಇಂದು ಅವರಿಗೆ ಏನು ಅನ್ನಿಸುತ್ತಿತ್ತೋ ಕಾಣೆ.

ಇಂದು ನಾವೆಲ್ಲಾ ಕಾಣುವ, ನಮ್ಮ ಸಮಾಜದ ವಿಷಯವನ್ನೇ ನೋಡೋಣ.

ಒಂದು ಮನೆ. ಆ ಮನೆಯಲ್ಲಿ ಗಂಡ ಹೆಂಡತಿಯರ ಸಂಬಂಧ ಕೇವಲ ಒಡಂಬಡಿಕೆಯಾಗಿ ಉಳಿದಿದೆ.ಪರಸ್ಪರ ಸ್ನೇಹ ಪ್ರೀತಿ,ತ್ಯಾಗ ನಂಬಿಕೆಗಳ ಆಧಾರದಮೇಲೆ ನಿಲ್ಲಬೇಕಾದ ಈ ನಂಟು ಇಂದು ಕೇವಲ ಒಡಂಬಡಿಕೆಯಾಗಿದೆ. ಇನ್ನು ಆ ಮನೆಯಲ್ಲಿ ತಂದೆ ತಾಯಿಗಳ ಜೊತೆಗೆ ಮಕ್ಕಳ ಸಂಬಂಧ, ಮಕ್ಕಳಲ್ಲೇ ಪರಸ್ಪರ ಸಂಭಂಧ ಎಲ್ಲವೂ ಹೃದಯವಂತಿಕೆಯಿಲ್ಲದೆ, ಗಟ್ಟಿ ಇಲ್ಲದೆ ಟೊಳ್ಳಾಗಿದೆ. ಅವರವರ ಅವಶ್ಯಕತೆಗಳನ್ನು ಪೂರೈಸುವತನಕ ಎಲ್ಲರೂ ಬೇಕು. ಇದರಲ್ಲಿ ಒಂದು ಚೂರು ಬೆಳ್ಳಿಗೆರೆಯಂದರೆ ಆ ತಾಯಿಗೆ ಮಕ್ಕಳೊಡನೆ ಇರುವ ಸಂಬಂಧ. ಇದರಲ್ಲಿ ಇನ್ನೂ ಸ್ವಲ್ಪ ಸತ್ವವನ್ನು ನಾವು ಕಾಣುತ್ತೇವೆ. ಆದರೆ ತಾಯಿ ಏನೋ ಸುದ್ಧ ಮಮತೆ, ಪ್ರೀತಿ ಅನುರಾಗ ಎಲ್ಲವನ್ನೂ ಹರಿಸುತ್ತಾಳೆ. ಆದರೆ ಮಕ್ಕಳೇ ರೆಕ್ಕೆ ಮೂಡಿದಮೇಲೆ ತಮ್ಮದೇ ಲೋಕದಲ್ಲಿ ವಿಹರಿಸುತ್ತಾ, ಆ ತಾಯಿಯನ್ನೇ ಕಡೆಗಣಿಸುತ್ತಾರೆ. ಹಾಗೆ ಮಾಡೆದೆ ಇರುವ ಮಕ್ಕಳಿದ್ದರೆ, ಆ ತಾಯಿ ಪುಣ್ಯವಂತೆ.

ಇನ್ನು ಒಂದು ಸಮಾಜ. ಸ್ವಾರ್ಥಪೂರಿತ ಜನರೇ ತುಂಬಿರುವ ಈ ಸಮಾಜದಲ್ಲಿ ಹೃದಯವಂತಿಕೆಯನ್ನು ದುರ್ಬೀನು ಹಾಕಿಕೊಂಡು ನೋಡಿದರೂ ಕಾಣಸಿಗದು. ಅಕಸ್ಮಾತ್ ಯಾರಾದರೂ ಇದ್ದರೆ, ಅವರನ್ನು ದುರುಪಯೋಗ ಪಡಿಸಿಕೊಂಡು, ಹಿಂಡಿ ಹಿಪ್ಪೆ ಮಾಡಿ ಬಿಡುತ್ತಾರೆ, ಈ ಲೋಕದ ಜನರು. ಅಥವಾ ಅವನಿಗೆ “ಸ್ವಲ್ಪ ಹುಚ್ಚ” ಎಂದು ಹಣೆಪಟ್ಟಿ ಕಟ್ಟುತ್ತಾರೆ.

ಏಕೆ ಹೀಗಾಗಿದೆ? ಕೇವಲ ಸ್ವಾರ್ಥ. ಚೆನ್ನ ಎನ್ನುವ ಪದಕ್ಕೆ ಅರ್ಥ ತಿಳಿಯದಿದ್ದರೂ, ” ನಾನು-ನಾನೊಬ್ಬನೇ ಚೆನ್ನಾಗಿರಬೇಕು” ಎನ್ನುವ ದುರ್ಭಾವ. ” ನಾನು” ಎನ್ನುವ ಅಹಂಕಾರ. ಸಂಸ್ಕಾರದ ಕೊರತೆ, ಸಂಸ್ಕೃತಿಯ ನಾಶ, ಅವಿದ್ಯೆಯ ಕಲಿಕೆ, ವಿದ್ಯೆಗೆ ತಿರಸ್ಕಾರ ಮತ್ತು ತಾತ್ಸಾರ. ಹಿರಿಯರಲ್ಲಿ ಗೌರವವಿಲ್ಲ. ಅವರಿಂದ ಕಲಿಯಬೇಕು ಎನ್ನುವ ಆಸೆಯಿಲ್ಲ. ಒಟ್ಟಾರೆ ಹೇಳಬೇಕೆಂದರೆ ಅಧಃಪಥನ. ಹೃದಯವಂತಿಕೆಯ ಕೊರತೆಯಿಂದಲೇ, ಎಲ್ಲ ಸಮಸ್ಯೆಗಳು. ಇರುವವರ ಮತ್ತು ಇಲ್ಲದವರ ನಡುವಿನ ಅಗಾಧ ಅಂತರ. ತತ್ಕಾರಣ ಪರಸ್ಪರ ದ್ವೇಷಾಸೂಯೆಗಳು. ಅಯ್ಯೋ ಹೇಳುತ್ತಾ ಹೋದರೆ ಕೊನೆ ಮೊದಲಿಲ್ಲ!!!. ಒಟ್ಟಿನಲ್ಲಿ ಹೃದಯವಂತಿಕೆಯ ಕೊರತೆಯಿಂದ ಮನುಷ್ಯರ ಪರಸ್ಪರ ಸಂಬಂಧಗಳು ಹಾಳಾಗಿವೆ, ಟೊಳ್ಳಾಗಿದೆ, ಪೊಳ್ಳಾಗಿದೆ. ಸಮಸ್ಯೆ ಏನೆಂದು ಗೊತ್ತು. ಪರಿಹಾರವನ್ನು ನಾವುಗಳೇ ಕಂಡು ಹಿಡಿದು ಕೊಂಡು ಸಾಧ್ಯವಾದಷ್ಟುಮಟ್ಟಿಗೆ ನಮ್ಮ ಸಮಾಜವನ್ನು ಮತ್ತು ಒಟ್ಟು ಪರಿಸರವನ್ನು ಸರಿಪಡಿಸಿಕೊಳ್ಳುವುದೇ, ಈಗ ಆಗಬೇಕಾಗಿರುವ ಕೆಲಸ. ಪ್ರಯತ್ನ ಪಟ್ಟರೆ ಅಸಾಧ್ಯವಾದುದ್ದೇನಲ್ಲ

ರಸಧಾರೆ – 043

ಮೇಲೆ ಕೆಳಗೊಳಗೆ ಬಳಿ ಸುತ್ತಲೆತ್ತತ್ತಲುಂ |

ಮೂಲೆಮೂಲೆಯೆಲಿ ವಿದ್ಯುಲ್ಲಹರಿಯೊಂದು ||

ಧೂಲಿಕಣ ಭೂಗೋಳ ರವಿ ಚಂದ್ರ ತಾರೆಗಳ |

ಚಾಲಿಪುದು ಬಿಡು ಕೊಡದೆ – ಮಂಕುತಿಮ್ಮ. ||

ಮೇಲೆ, ಕೆಳಗೆ, ಒಳಗೆ, ಮೇಲೆ, ಸುತ್ತಲು, ಎತ್ತೆತ್ತಲುಂ, ಮೂಲೆ ಮೂಲೆಯಲಿ ವಿದ್ಯುಲ್ಲಹರಿಯೊಂದು ಧೂಲಿಕಣ ಭೂಗೋಳ ರವಿ ಚಂದ್ರ ತಾರೆಗಳ ಚಾಲಿಪುದು ಬಿಡುಕೊಡದೆ – ಮಂಕುತಿಮ್ಮ.

ಪರಮ ಶಕ್ತಿಯ ಉಲ್ಲೇಖ ಈ ಕಗ್ಗದೊಳಗೆ. ಈ ಹಿಂದೆಯೂ ಈ ವಿಷಯದ ಬಗ್ಗೆ ಅವರೂ ಉಲ್ಲೇಖಿಸಿದ್ದಾರೆ, ಮತ್ತೆ ನಾನೂ ಬರೆದಿದ್ದೇನೆ. ಸಕಲ ಜೀವರಾಶಿಗಳ ಅಸ್ತಿತ್ವಕ್ಕೆ ಕಾರಣೀಭೂತವಾದ ಆ ಪರಮ ಶಕ್ತಿಯನ್ನು ಎಲ್ಲ ಸಾಧಕರೂ, ಸಿದ್ಧರೂ, ಸತ್ಪುರುಷರೂ, ಭಕ್ತರೂ ತಮ್ಮ ಭಕ್ತಿ ಪಾರವಶ್ಯದಲ್ಲಿ ಅನುಭವಿಸಿದ್ದಾರೆ. ಮೇಲೆ, ಕೆಳಗೆ, ಒಳಗೆ, ಹತ್ತಿರ, ದೂರ, ಸುತ್ತಲು, ಮತ್ತು ಎತ್ತೆತ್ತಲೂ ಆ ವಿದ್ಯುಲ್ಲಹರಿಯು ಎಲ್ಲವನ್ನು ” ಬಿಡು ಕೊಡದೆ” ಎಂದರೆ ನಿರಂತರವಾಗಿ, ಒಂದು ಕ್ಷಣವೂ ವಿರಾಮವಿಲ್ಲದೇ ನಡೆಸುತ್ತಿದೆ ಎಂದು ಈ ಕಗ್ಗದ ಅಂತರ್ಯ.

ಆದಿ ಕಾವ್ಯ ಋಗ್ವೇದದ, ಪುರುಷ ಸೂಕ್ತದಲ್ಲಿ” ಸ ಭೂಮಿಂ ವಿಶ್ವತೋ ವೃತ್ವಾ ಅತ್ತ್ಯತಿಷ್ಟತ್ ದಶಾಂಗುಲಂ”ಎಂದು ಬರುತ್ತದೆ. ಅಂದರೆ ಯಾವುದೇ ಒಂದು ವಸ್ತುವು ಮಿಕ್ಕೆಲ್ಲ ವಸ್ತುಗಳನ್ನೂ ತನ್ನ ಅಧೀನದಲ್ಲಿಟ್ಟುಕೊಂಡಿರಬೇಕಾದರೆ, ತಾನು ಅದೆಲ್ಲದರಕ್ಕಿಂತ ಮೇಲೆ ಇರಬೇಕು. ಹೌದಲ್ಲವೇ? ಹಾಗೆಯೇ, ಎಲ್ಲ ಸೃಷ್ಟಿಯನ್ನು ತನ್ನ ಅಧೀನದಲ್ಲಿಟ್ಟುಕೊಂಡಿರುವ ಆ ಪರಮ ಶಕ್ತಿಯು,ಈ, ನಾವಿರುವ ಭೂಮಿಯನ್ನೂ ಸೇರಿ ಇಡೀ ವಿಶ್ವವನ್ನೇ ತನ್ನ ಅಧೀನದಲ್ಲಿಟ್ಟುಕೊಂಡಿರುವುದರಿಂದ ಅದು ” ಅತ್ತ್ಯತಿಷ್ಟತ್ ದಶಾಂಗುಲಂ” ಇವೆಲ್ಲವನ್ನೂ ಮೀರಿ ಹತ್ತು ಅಂಗುಲ ಮೇಲಿದೆ ಎಂದು ಅರ್ಥ. ಅಷ್ಟೇ ಅಲ್ಲ ಅದು ತಾನೇ ಸೃಷ್ಟಿಸಿರುವ, ತನ್ನ ಅಧೀನದಲ್ಲಿರುವ, ಇಡೀ ಸೃಷ್ಟಿಯನ್ನು ತನ್ನ ಶಕ್ತಿಯಿಂದಲೇ ನಡೆಸಿಕೊಂಡು ಹೋಗುತ್ತದೆ ಎಂದು ಈ ಕಗ್ಗದ ಅಂತರ್ಯ. ಇರಲಿ, ಇದನ್ನು ಬಹಳ ಜನ ಅರಿತುಕೊಂಡಿದ್ದಾರೆ ಮತ್ತು ಒಪ್ಪಿಕೊಂಡಿದ್ದಾರೆ.

ಆದರೆ ನಾವು ನೋಡಬೇಕಾದ ಒಂದು ಅಂಶವಿದೆ. ಸಕಲ ಪ್ರಾಣಿಗಳಿಗೂ, ಅಂದರೆ ಆಕಾಶದಲ್ಲಿ ಹಾರುವ ಎಲ್ಲ ಪಕ್ಷಿಗಳಿಗೂ, ಭೂಮಿಯಮೇಲಿರುವ ಎಲ್ಲ ಪ್ರಾಣಿಗಳಿಗೂ, ಕೀಟಗಳಿಗೂ, ಕ್ರಿಮಿಗಳಿಗೂ, ಮತ್ತು ಎಲ್ಲ ಜಲಚರಗಳಿಗೂ ಒಂದು ಸಮಾನವಾದ ಅಂಶವುಂಟು. ಅದೇನೆಂದರೆ, ಎಲ್ಲಕ್ಕೂ ಒಂದು ದೇಹ, ಒಂದು ಮನಸ್ಸು, ಒಂದು ಬುದ್ಧಿ ಮತ್ತು ಒಂದು ಚೇತನ ಉಂಟು. ಈ ನಾಲ್ಕೂ ಬೇಕಾದ ಪ್ರಮಾಣದಲ್ಲಿ ಇರುವುದರಿಂದ ಈ ಎಲ್ಲ ಪ್ರಾಣಿಗಳ ಅಸ್ತಿತ್ವ. ದೈಹಿಕ ರೂಪ ಮತ್ತು ಅದರ ಮಿತಿ ಮತ್ತು ಪರಿಮಿತಿಗಳು, ಮನಸ್ಸು ಬುದ್ಧಿಗಳ ವಿಕಾಸದ ಸ್ಥರಗಳ ಅನ್ವಯ, ಆಯಾಯಾ ಪ್ರಾಣಿಗಳ ಸ್ವಭಾವಗಳು, ಕ್ರಿಯೆಗಳು ಇರುತ್ತವೆ. ಈ ಎಲ್ಲ ಪ್ರಾಣಿ ಪಕ್ಷಿಗಳೂ ಭೂಮಿಗೆ ಸಮಾನಾಂತರವಾಗಿದ್ದರೆ, ಮನುಷ್ಯ ಮಾತ್ರ ಲಂಬವಾಗಿದ್ದಾನೆ. ಹಾಗಾಗಿ ಮನುಷ್ಯ ಊರ್ದ್ವಮುಖನಾಗಿ ಯೋಚಿಸಲು ಸಾಮರ್ಥ್ಯವನ್ನು ಪಡೆದುಕೊಂಡು ಅನ್ಯ ಪ್ರಾಣಿಗಳಿಗಿಂತ ಭಿನ್ನವಾಗಿದ್ದಾನೆ. ಸರಿ ಹಾಗಿದ್ದರೆ ಅನ್ಯ ಪ್ರಾಣಿಗಳಿಗೆ ಹೋಲಿಸಿದರೆ, ಮಾನವರ ಜಗತ್ತಿನಲ್ಲಿ ಮಾತ್ರ ಏಕೆ ಇಷ್ಟೊಂದು ಹಿಂಸೆ ದ್ವೇಷ ಮುಂತಾದ ಕುಬುದ್ಧಿಗಳೇ ತುಂಬಿದೆ ಎಂದರೆ, ಆ ಪರಮಾತ್ಮ ಎಲ್ಲ ಮನಸ್ಸು ಬುದ್ಧಿ ದೇಹಾತ್ಮಗಳನ್ನು ಒಂದುಗೂಡಿಸಿ, ಅಷ್ಟಕ್ಕೇ ಬಿಟ್ಟಿದ್ದಾರೆ ಸಾಕಿತ್ತು. ಆದರೆ ಇವೆಲ್ಲವನ್ನೂ ಸೇರಿ ಒಂದು ಚೂರು ” ಅಹಂಕಾರ” ವನ್ನೂ ಇಟ್ಟ. ಅನ್ಯ ಪ್ರಾಣಿಗಳಲ್ಲಿ ಅದು ಕೇವಲ ತನ್ನ ಆಹಾರ ಹುಡುಕುವುದು ಮತ್ತುತನ್ನನ್ನು ತಾನು ರಕ್ಷಿಸಿಕೊಳ್ಳುವುದಕ್ಕೆ ಮಾತ್ರ ಉಪಯೋಗಿಸಿದರೆ, ಈ ಮನುಷ್ಯ ಮಾತ್ರ ಸ್ವಾರ್ಥದಿಂದ ಅಹಂಕಾರವನ್ನು ಪರ ಹಿಂಸೆಗೆ, ದುರಾಸೆಗೆ, ಲೂಟಿಗೆ, ಹೀಗೆ ಮಾನವಕುಲಕ್ಕೆ ಮಾರಕವಾದ ಎಲ್ಲ ಕಾರ್ಯಗಳಿಗೂ ಉಪಯೋಗಿಸುತ್ತಾ ಇಡೀ ಪ್ರಪಂಚವನ್ನು ಒಂದು ಮಹಾ ರಣರಂಗವನ್ನಾಗಿ ಪರಿವರ್ತಿಸಿದ್ದಾನೆ.

ಎಲ್ಲ ಜೀವಿಗಳಲ್ಲೂ ಎಲ್ಲ ಸೃಷ್ಟಿಗೂ ಕಾರಣನಾದವನು ಮತ್ತು ನಡೆಸುವವನೂ ಪರಮಾತ್ಮನೇ ಆದಾಗ, ಇಂದಿನ ಪರಿಸ್ತಿತಿಗೂ ಆ ಪರಮಾತ್ಮನೇ ಕಾರಣವೆನ್ನುವವರು ಬಹಳ ಮಂದಿ. ಒಂದು ಉಸಿರು ಒಳಗೆ ಹೋದದ್ದು ಹೊರಗೆ ಬಾರದಿದ್ದರೋ ಅಥವಾ ಹೊರಗೆ ಬಂದ ಒಂದು ಉಸಿರು ಒಳಗೆ ಹೋಗದಿದ್ದರೋ ಮುಗಿಯಿತು ಇವನ ಕಥೆ. ಇಷ್ಟು ಪರಿಮಿತ ಸಾಮರ್ಥ್ಯವನ್ನಿತ್ತುಕೊಂಡು ಈ ಮನುಷ್ಯ ಹಾರಾಡುವುದನ್ನು ನೋಡಿದರೆ, ಅವನ ಮೌಡ್ಯಕ್ಕೆ ಅಚ್ಚರಿಯಾಗುತ್ತದೆ. ಇದು ಅಹಂಕಾರದ ಫಲ. ನಾನು ಎಲ್ಲ ಪ್ರಾಣಿಗಳಂತೆ. ನಮ್ಮ ಅಸ್ತಿಸ್ಥ್ವಕ್ಕೆ ಕಾರಣವಾದ ಆ ವಿಧ್ಯುಲ್ಲಹರಿ ಅಥವಾ ಆ ಮಹಾ ಚೇತನದ ಮುಂದೆ ನಾನೇನೂ ಇಲ್ಲ, ಹಾಗಾಗಿ ತಗ್ಗಿ ಬಗ್ಗಿ, ವಿನಯದಿಂದ, ಅಹಂಕಾರವನ್ನು ತೊರೆದು ನಡೆದು ಒಂದು ಸು-ಸಮಾಜದ ನಿರ್ಮಾಣಕ್ಕೆ ನಾವು ನಾಂದಿ ಹಾಡುವ ಎನ್ನುವ ಭಾವನೆ ತಳೆದರೆ ಚೆಂದ. ಇಲ್ಲದಿದ್ದರೆ ಪಥನವೇ ಹಾದಿ. ಆಯ್ಕೆ ನಮ್ಮದು ಸುಖ ನಮ್ಮದು ದುಃಖ ನಮ್ಮದು. ಅಳಿವು ಮತ್ತು ಉಳಿವು ನಮ್ಮ ಕೈಲೆ ಇದೆ.

ರಸಧಾರೆ – 044

ಮಂದಾಕ್ಷಿ ನಮಗಿಹುದು ಬಲುದೂರ ಸಾಗದದು

ಸಂದೆ ನಸುಕಿನೊಳಿಹುದು ಜೀವನದ ಪಥವು

ಒಂದುಮೆಟುಕದು ಕೈಗೆ, ಏನೋ ಕಣ್ಕೆಣಕುವುದು

ಸಂದಿಯವೆ ನಮ್ಮ ಗತಿ – ಮಂಕುತಿಮ್ಮ

ಮಂದಾಕ್ಷಿ = ಸ್ಪಷ್ಟವಿಲ್ಲ ದೃಷ್ಟಿ, ಸಂದೆ = ಸಂಜೆ, ಸಂದಿ = ಸಂದೇಹ ಅಥವಾ ಸಂದಿಗ್ಧ

ಮಂದಾಕ್ಷಿ ಎಮಗಿಹುದು ಬಲುದೂರ ಸಾಗದದು, ಸಂದೆ ನಸುಕಿನೋಳು ಇಹುದು ಜೀವನದ ಪಥವು.

ಒಂದುಂ ಎತುಕದು ಕೈಗೆ ಏನೋ ಕಣ್ ಕೆಣಕುವುದು ಸಂದಿಯವೆ ನಮ್ಮ ಗತಿ ಮಂಕುತಿಮ್ಮ.

ನಮ್ಮ ಮನಸ್ಸಿನ ಕಣ್ಣುಗಳು ಮಂದವಾಗಿವೆ. ಒಂದು ವಿಶಾಲವಾದ ದೃಷ್ಟಿ ನಮಗೆ ಇಲ್ಲ. ನಮ್ಮ ಆಲೋಚನೆಗಳು ಸ್ಪಷ್ಟವಿಲ್ಲದೆ ಸಂಜೆಗತ್ತಲಂತೆ ಮಸುಕುಮಸುಕಾಗಿರುವುದರಿಂದ ನಾವು ನಡೆಸುವ ನಮ್ಮ ಜೀವನದ ಪಥವು ಸಹ ಸ್ಪಷ್ಟತೆ ಇಲ್ಲದೆ ಮಸುಕಾಗಿದೆ. ನಮ್ಮ ಅಪೇಕ್ಷೆಗಳು ನಮಗೇ ಸ್ಪಷ್ಟವಾಗಿಲ್ಲ. ಸರಿಯಾದ ವಸ್ತು ಇನ್ನೇನು ಸಿಕ್ಕಿತು ಎನ್ನುವ ವೇಳೆಗೆ, ನಮ್ಮ ಕಣ್ಣು ಅನ್ಯ ವಸ್ತುವಿನಮೇಲೆ ಬಿದ್ದು ನಮ್ಮನ್ನು ವಿಚಲಿತಗೊಳಿಸಿ, ಸಂದೇಹ ಮತ್ತು ಸಂದಿಗ್ಧಕ್ಕೆ ತಳ್ಳಿಬಿಡುತ್ತದೆ ಎನ್ನುವುದು ಈ ಕಗ್ಗದ ಅಂತರ್ಯ.

ಇಲ್ಲಿ ಮಾನ್ಯ ಗುಂಡಪ್ಪನವರು, ನಮ್ಮ ಮಾನಸಿಕ ದೃಷ್ಟಿಕೋನದ ಬಗ್ಗೆ ಪ್ರಸ್ತಾಪಮಾಡುತ್ತಾರೆ. ಸಂಕುಚಿತ ಸ್ವಭಾವದ ನಮ್ಮ ದೃಷ್ಟಿಯೂ ಸಂಕುಚಿತ. ಒಂದು ವಿಶಾಲ ಮನೋಭಾವವನ್ನು ನಾನು ಕಳೆದುಕೊಂಡಿದ್ದೇವೆ. ನಾವು ಯಾವುದೇ ವಿಚಾರವನ್ನು ತೆಗೆದುಕೊಂಡರೂ ಒಂದು ವಿಶಾಲ ಮನೋಭಾವವನ್ನು ಬೆಳೆಸಿಕೊಳ್ಳಲು ಅಸಮರ್ಥರಾಗಿದ್ದೇವೆ. ಯಾವುದೂ ಸ್ಪಷ್ಟವಿಲ್ಲ. ನಮ್ಮ ಸಂಬಂಧಗಳು ಸ್ಪಷ್ಟವಾಗಿ ಗಟ್ಟಿಯಾಗಿಲ್ಲ. ನಮ್ಮ ಸ್ನೇಹಗಳು ಗಟ್ಟಿಯಾಗಿಲ್ಲ. ನಮ್ಮ ಬೇಕು ಬೇಡಗಳ ಬಗ್ಗೆ ನಮಗೆ ನಿಖರವಾದ ಅಭಿಪ್ರಾಯವಿಲ್ಲ. ಒಟ್ಟಾರೆ ನಮಗೆ ಯಾವುದೂ ಸ್ಪಷ್ಟವಿಲ್ಲ. ಎಲ್ಲಾ ಮಸುಕು ಮಸುಕು. ನಮ್ಮ ದೃಷ್ಟಿಯೇ ಹಾಗಿರಬೇಕಾದರೆ ನಮ್ಮ ಜೀವನವೂ ಹಾಗೇ ಇರುವುದು ಸಹಜ ತಾನೇ.?

ನಮ್ಮ ಜೀವನಗಳನ್ನೇ ತೆಗೆದು ಕೊಳ್ಳೋಣ. ನಮ್ಮ ವಿಧ್ಯಾಭ್ಯಾಸದಲ್ಲಿ ನಮಗೆ ನಮ್ಮ ಸಾಮರ್ತ್ಯದ ಅರಿವಿಲ್ಲ. ಆ ಸಾಮರ್ತ್ಯಕ್ಕೆ ತಕ್ಕಂತ ಓದಿಲ್ಲ. ಸರಿ ಏನೋ ಓದಿದ್ದಾರೆ ಎಂದರೆ ಆ ಓದಿಗೆ ತಕ್ಕಂತ ಉದ್ಯೋಗವಿಲ್ಲ. ಸಿವಿಲ್ ಇಂಜಿನೀರಿಂಗ್ ಓದು ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಎಂತಹ ವಿಪರ್ಯಾಸ. ಸರಿ ಏನೋ ಉದ್ಯೋಗ ಮಾಡುತ್ತಾರೆ ಎಂದರೆ, ಮಾಡುವ ಕೆಲಸದಲ್ಲಿ ಆಸ್ಥೆ ಇಲ್ಲ, ಆಸಕ್ತಿಯಿಲ್ಲ ಮತ್ತು ತೃಪ್ತಿಯಿಲ್ಲ. ಅಕಸ್ಮಾತ್ ನಮಗೆ ಒಂದು ಹುಟ್ಟು ಸಿಕ್ಕಿದೆ. ನಮಗೆ ನಮ್ಮ ಜೀವದ ಗುರಿಯಿಲ್ಲ.ನಾವು ಏನಾಗಬೇಕು ಅಥವಾ ನಮಗೆ ಏನು ಬೇಕು ಎನ್ನುವುದು ನಮಗೆ ಗೊತ್ತಿಲ್ಲ. ಸುಮ್ಮನೆ ಬೆಳೆಗಾಗುತ್ತದೆ, ಏಳುತ್ತೇವೆ, ತಿನ್ನುತ್ತೇವೆ, ಏನೋ ಕೆಲಸ ಮಾಡುತ್ತೇವೆ, ಮತ್ತೆ ತಿನ್ನುತ್ತೇವೆ, ಮಲಗುತ್ತೇವೆ. ಮಲಗುವ ಮುಂಚೆ ನಾವು ಇಂದಿನ ಸಾಧನೆಯೇನು ಎಂದು ಯೋಚನೆ ಮಾಡಿದರೆ, ಎಲ್ಲವೂ ಶೂನ್ಯ. ನಮ್ಮ ಸಂಬಂಧಗಳನ್ನು ತೆಗೆದುಕೊಳ್ಳೋಣ. ನಮಗೆ ನಮ್ಮ ತಂದೆ ತಾಯಿಗಳೊಡನಾಗಲೀ, ಅಣ್ಣತಮ್ಮೊಂದಿರೊಡನಾಗಲೀ, ಬಂಧುಗಳೊಡನಾಗಲೀ, ಸ್ನೇಹಿತರೊಡನಾಗಲೀ ಸಮಗ್ರವಾಗಿ ಸಮಾಜದೊಡನಾಗಲೀ ಒಂದು ಸ್ಪಷ್ಟವಾದ ಗಟ್ಟಿಯಾದ ಸಂಬಂಧವೇ ಇಲ್ಲ. ನಮ್ಮ ಸಂಸ್ಕೃತಿಯ ಬಗ್ಗೆಯಾಗಲೀ ಸಂಸ್ಕಾರಗಳ ಬಗ್ಗೆಯಾಗಲೀ ಒಂದು ನಿಖರವಾದ ಅಭಿಪ್ರಾಯ ಮತ್ತು ದೃಷ್ಟಿಕೋನವಿಲ್ಲ. ಎಲ್ಲವೂ ಮಸುಕು ಮಸುಕು. ಇನ್ನು ನಮ್ಮ ಜೀವನದ ಪಥವು ಸ್ಪಷ್ಟವಾಗಿರುವುದೆಂತು? ಆ ಪ್ರಾಣಿಗಳ ಬದುಕಿಗೂ ನಮ್ಮ ಬದುಕಿಗೂ ಎಷ್ಟು ವ್ಯತ್ಯಾಸವಿದೆ.? ಕಡೆಯ ಪಕ್ಷ ಅವುಗಳಿಗೆ ಏನೋ ಒಂದು ಇಲ್ಲ ಎನ್ನುವುದು ಸ್ಪಷ್ಟ. ನಮಗೆ ಆ ಸ್ಪಷ್ಟತೆಯೂ ಇಲ್ಲ.

ಇದಕ್ಕೆಲ್ಲ ಏನು ಕಾರಣ? ನನ್ನ ಅಲ್ಪ ಮತಿಗೆ ಹೊಳೆಯುವುದು ಇಷ್ಟು. ಸ್ವಾರ್ಥ ಮತ್ತು ಅಹಂಕಾರಗಳೇ ನಮ್ಮನ್ನು ಈ ಗತಿಗೆ ತಳ್ಳಿವೆ. “ನನಗೆ ಎಲ್ಲವೂ ಬೇಕು” ಎನ್ನುವ ಸ್ವಾರ್ಥದಿಂದ ಏನು ಬೇಕು ಎನ್ನುವುದೇ ತಿಳಿಯದಾಗಿದೆ.ಎಲ್ಲವೂ ಬೇಕು ಎನ್ನುವವನು ಏನೇನನ್ನು ಪಡೆದುಕೊಳ್ಳಲು ಸಾಧ್ಯ. ಪಡೆದು ಕೊಂಡು ದಕ್ಕಿಸಿಕೊಂಡು ಅನುಭವಿಸುವ ಸಾಮರ್ಥ್ಯ ಬೇಡವೇ? ಏನನ್ನೋ ಪಡೆದಾಕ್ಷಣ ಮತ್ತೇನಾದರ ಮೇಲೆ ಕಣ್ಣು. ಹೀಗೆ ನಮ್ಮ ಬೇಕು ಬೇಡಗಳ ಅಸ್ಪಷ್ಟತೆ.

“ನನಗೆ ಎಲ್ಲವೂ ತಿಳಿದಿದೆ ” ಎನ್ನುವ ಅಹಂಕಾರದಿಂದ ಅರಿವಿನ ಬಾಗಿಲು ಮುಚ್ಚಿ ಹೋಗಿದೆ. ಮೇಲೆಕ್ಕೆ ಹೋಗಬೇಕಾದವನು ನಾನು ಕೆಳಗೆ ಇದ್ದೇನೆ ಎಂದು ಅರಿತರೆ ಮಾತ್ರ ಮೇಲಕ್ಕೆ ಹೋಗಲು ಸಾಧ್ಯ. ನಾನು ಮೇಲೆ ಇದ್ದೇನೆ ಎನ್ನುವವನು ಇನ್ನು ಮೇಲಕ್ಕೆ ಹೋಗುವುದು ಹೇಗೆ? ಅಗಾಧ ಜ್ಞಾನ ಸಮುದ್ರದಲ್ಲಿ ನನಗೆ ತಿಳಿದಿರುವುದು ಒಂದು ತೊಟ್ಟ ಹನಿಯೂ ಅಲ್ಲ ಎಂದು ತಿಳಿದವನಿಗೆ, ಇನ್ನಷ್ಟು ತಿಳಿದುಕೊಳ್ಳುವ ಅವಕಾಶ. ನನಗೆ ಎಲ್ಲ ಗೊತ್ತು ಎನ್ನುವ ಮೂರ್ಖತನಕ್ಕೆ ಮದ್ದುಂಟೆ?

ಎಲ್ಲರೂ ಹಾಗಿದ್ದಾರೆಯೇ?. ಖಂಡಿತ ಇಲ್ಲ ಎಲ್ಲೋ ಕೆಲವು ಜನ ಸಜ್ಜನರು, ಸ್ವಾರ್ಥರಹಿತರು, ನಿಜಾರ್ಥದಲ್ಲಿ ಜ್ಞಾನಿಗಳು, ವಿಶಾಲಮನೋಭಾವದ ಮಹಾನುಭಾವರು, ಲೋಕ ಕಲ್ಯಾಣಕ್ಕಾಗಿಯೇ ತಮ್ಮ ಜೀವನವನ್ನು ಮುಡುಪ್ಪಿಟ್ಟಿರುವವರೂ, ಸಕಲ ಜೀವರಾಶಿಗಳ ಹಿತವನ್ನೇ ಬಯಸುವವರೂ ಇದ್ದಾರೆ. ಎಲೆಮರೆ ಕಾಯಿಗಳಂತಿರುವ, ಸ್ವ-ಪ್ರಚಾರಕ್ಕೆ ಬಾಯಿಬಿಡದ ಅಂತಹವರ, ನಿಸ್ವಾರ್ಥ ಕಾರ್ಯ ಕಲಾಪಗಳಿಂದಲೇ ಈ ಜಗತ್ತಿನಲ್ಲಿ ಇನ್ನೂ ಸ್ವಲ್ಪ ಒಳಿತು ಉಳಿದಿದೆ. ಅಂಥವರಿಗೆ ನಮ್ಮ ನಮನ.

ನಾವೂ ಸಹ ಒಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ನಮ್ಮ ಮನಸ್ಸೇನು?. ಆ ಮನಸ್ಸಿನ ಬೇಕು ಬೇಡಗಳೇನು? ಸ್ಪಷ್ಟವೇ? ಅಸ್ಪಷ್ತವೆ? ಸರಿಯೇ? ತಪ್ಪೇ? ನಮ್ಮ ಸಾಮರ್ಥ್ಯವೇನು? ಅರ್ಹತೆಗಳೇನು? ಹೀಗೆ ಸಮಗ್ರ ಚಿಂತನೆ ಮಾಡಿ ನಮ್ಮನ್ನು ನಾವು ಸರಿಪಡಿಸಿಕೊಂಡರೆ, ನಮ್ಮ ಬದುಕು ಮತ್ತು ಇತರರ ಜೀವನವೂ ಸುಧಾರಿಸುವುದರಲ್ಲಿ ನನಗೆ ಸಂದೇಹವೇ ಇಲ್ಲ.

ರಸಧಾರೆ – 045

ಬೆಂಕಿಯುಂಡೆಯ ಬೆಳಕು ಬೆಣ್ಣೆಯುಂಡೆಯ ಬೆಳಕು |

ಮಂಕುವಿಡಿಸಲು ಸಾಕು ಮಣ್ಣು೦ಡೆ ಕಣ್ಗೆ ||

ಶಂಕೆಗೆಡೆಯಿರದು ಕತ್ತಲೆಯೇ ಜಗವನು ಕವಿಯೆ |

ಬೊಂಕುದೀವಿಗೆ ತಂಟೆ – ಮಂಕುತಿಮ್ಮ. ||

ಶಂಕೆಗೆಡೆಯಿರದು = ಶಂಕೆಗೆ + ಎಡೆ + ಇರದು

ಬೆಂಕಿಯುಂಡೆ = ಸೂರ್ಯ, ಬೆಣ್ಣೆಯುಂಡೆ = ಚಂದ್ರ, ವಿಡಿಸಲು – ಬಿಡಿಸಲು, ಮಣ್ಣು೦ಡೆ = ಹಣತೆ , ಶಂಕೆಗೆಡೆಯಿರದು = ಸಂಶಯಕ್ಕೆ ಸ್ಥಳವಿರದು, ಬೊಂಕುದೀವಿಗೆ = ಅಸತ್ಯವಾದ ಜ್ಞಾನ.

ಸೂರ್ಯನ ಬೆಳಕಗಾಲೀ ಅಥವಾ ಚಂದ್ರನ ಬೆಳಕಗಾಲೀ ಅಥವಾ ಒಂದು ಪುಟ್ಟ ಹಣತೆಯಾದರೂ ಸಹ ನಮಗೆ ನೋಡಲು ಅನುವು ಮಾಡಿಕೊಡುತ್ತದೆ. ಆದರೆ ಜಗತ್ತನ್ನು ಸಂಪೂರ್ಣ ಕತ್ತಲೆ ಆವರಿಸಿದರೆ, ನೋಡುವ ಪ್ರಶ್ನೆಯೇ ಬರುವುದಿಲ್ಲ. ಆದರೆ ಒಂದು ಅರ್ದಂಬರ್ದವಾಗಿ ಕತ್ತಲೆ ಬೆಳಕಿನಾಟ ಕೇವಲ ತೊಂದರೆಯನ್ನು ಕೊಡುತ್ತದೆ ಎಂದು ಸೂಚ್ಯವಾಗಿ ಒಂದು ಗಹನವಾದ ವಿಷಯವನ್ನು ಪ್ರಸ್ತಾಪ ಮಾಡುತ್ತಾರೆ, ಮಾನ್ಯ ಗುಂಡಪ್ಪನವರು.

ವಾಚಕರೆ ನೋಡಿ ಸತ್ಯವನ್ನು ಅರಿಯಲು ಅಥವಾ ನೋಡಲು ನಮಗೆ ಬೆಳಕು ಜ್ಞಾನದ ರೂಪದಲ್ಲಿ ಬೇಕು. ಆ ಬೆಳಕು ಪ್ರಖರವಾದ ಮತ್ತು ಜ್ಞಾನಕ್ಕೆ ಪ್ರತೀಕವಾದ ಸೂರ್ಯನ ಬೆಳಕಿನಂತ ಜ್ಞಾನವಾಗಬಹುದು. ಹೆಚ್ಚು ತೀಕ್ಷ್ಣವಲ್ಲದ ಬೆಳಕನ್ನು ನೀಡುವ ಚಂದ್ರನಂತೆ, ಶಾಂತ ಜ್ಞಾನವಾಗಬಹುದು ಅಥವಾ ಎಲ್ಲಕಡೆಯೂ ಕತ್ತಲಿದ್ದರೂ ಸಮೀಪದ ವಸ್ತುಗಳನ್ನು ನಿಚ್ಚಳವಾಗಿ ತೋರುವ ಹಣತೆಯ ಬೆಳಕಂತೆ ಕ್ಲುಪ್ತವಾದರೂ ಸತ್ಯವಾದ ಜ್ಞಾನವನ್ನು ನೀಡುವ ಬೆಳಕಾದರೂ ಸಾಕು. ನಮಗೆ ಸತ್ಯದ ಅರಿವಾಗುತ್ತದೆ.

ಬೆಳಕಿನಲ್ಲಿ ವಸ್ತು ವಿಷಯಗಳನ್ನು ಕಂಡರೆ ತಾನೇ ವಸ್ತುಗಳಲ್ಲಿ ವ್ಯತ್ಯಾಸ ಕಾಣುವುದು ಮತ್ತು ಅರಿತುಕೊಳ್ಳುವ ಅಪೇಕ್ಷೆ ಮತ್ತು ಪ್ರಕ್ರಿಯೆ ನಡೆಯುತ್ತದೆ. ಆದರೆ ಸಂಪೂರ್ಣ ಕತ್ತಲೆಯೇ ಆಗಿಬಿಟ್ಟರೆ, ನಮಗೆ ಶಂಕೆಯೇ ಇರದು ಎನ್ನುತ್ತಾರೆ ಮಾನ್ಯ ಗುಂಡಪ್ಪನವರು. ಅಂದರೆ ಸಂಪೂರ್ಣ ಕತ್ತಲೆಯೆಂತೆ, ಸಂಪೂರ್ಣ ಅಜ್ಞಾನವೇ ತುಂಬಿಬಿಟ್ಟರೂ ” ಇದೋ, ಅದೋ, ಅಥವಾ ಯಾವುದು” ಎನ್ನುವ ಶಂಕೆ ಬರುವುದಿಲ್ಲ.

ಆದರೆ ಅರ್ದಂಬರ್ದ ಬೆಳಕು ಅಥವಾ ಸುಳ್ಳಾದ, ಬೆಳಕಲ್ಲದ ಬೆಳಕು ಬಂದಾಗ, ಅಂದರೆ, ಸತ್ಯವಾದ ಜ್ಞಾನವಲ್ಲದೆ ಇದ್ದರೆ ಅಸತ್ಯ ವಾದವನ್ನು ಪ್ರತಿಪಾದಿಸುವ “ಪದವಿದರು” ತಮ್ಮ ತಮ್ಮ ಸಿದ್ಧಾಂತಗಳಿಂದ ಜನರಲ್ಲಿ ಇನ್ನಷ್ಟು ಶಂಕೆ, ಗೊಂದಲ ಮತ್ತು ತಂಟೆ ಉಂಟುಮಾಡುತ್ತಾರೆ ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು.

ಯಾವುದೇ ವಿಷಯದಬಗ್ಗೆ ಒಂದೇ ಒಂದು ಸತ್ಯವಿರುತ್ತದೆ. ಎರಡು ಸತ್ಯವಿರಲು ಸಾಧ್ಯವಿಲ್ಲ. ಹಾಗೆ ಆ ಸತ್ಯವನ್ನು ಅರಿತುಕೊಳ್ಳಲು ಜ್ಞಾನ ಬೇಕು. ಅದು ಪ್ರಖರವಾದ ಶಾಸ್ತ್ರಾಧಾರಿತ ಜ್ಞಾನವಾಗಬಹುದು, ಅಥವಾ ಶಾಂತ ಸ್ವರೂಪದ, ಕೇಳಿದ, ಚಿಂತಿಸಿ ಕಂಡುಕೊಂಡ, ಅನುಭವದ ಜ್ಞಾನವಾಗಬಹುದು ಅಥವಾ ನಮ್ಮ ಪರಿಮಿತ ಅರಿವಿಗೆ ಬಂದ ಸತ್ಯದ ರೂಪವಿರಬಹುದು. ಯಾವುದಾದರೂ ಸರಿಯೇ ಅದು ಜ್ಞಾನ ಮತ್ತು ಸತ್ಯವಾದ ಜ್ಞಾನವಾಗಿರಬೇಕು.

ಅಕಸ್ಮಾತ್ ನಾವು ಈ ಜ್ಞಾನದ ಮತ್ತು ಜ್ಞಾನವನ್ನು ಪಡೆದುಕೊಂಡು ಸತ್ಯದ ಶೋಧಕ್ಕೆ ಹೋಗದೆ ಅಜ್ಞಾನಿಗಳಾಗಿ ಉಳಿದರೆ ನಮಗೆ ಶಂಕೆಯೇ ಬರುವುದಿಲ್ಲ. ಆದರೆ ತಂಟೆ ಎಲ್ಲಿದೆಯಂದರೆ, ಎಡಬಿಡಂಗಿ ಜ್ಞಾನ, ಶಾಸ್ತ್ರವನ್ನು ಓದಿಕೊಂಡು(ಅರಿತುಕೊಂಡು ಅಲ್ಲ) ತಾನೇ ಮಹಾ ಪಂಡಿತ ಎಂದು ಕೊಚ್ಚಿಕೊಳ್ಳುವ ಅರಜ್ಞಾನಿಗಳು ಪ್ರತಿಪಾದಿಸುವ ತತ್ವಗಳು ಭಿನ್ನ ಭಿನ್ನವಾಗಿ ಜನರನ್ನು ಗೊಂದಲಕ್ಕೆ ಈಡುಮಾಡುತ್ತದೆ ಮತ್ತು ಬೇಧಗಳನ್ನು ಉಂಟುಮಾಡಿ ತಂಟೆಗೆ ಕಾರಣವಾಗುತ್ತದೆ.

ವಾಚಕರೆ, ಒಟ್ಟಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದ ಮೂಲಕ ನಮಗೆ ಒಂದು ಸಂದೇಶವನ್ನು ಕೊಡುತ್ತಾರೆ. ಅದೇನೆಂದರೆ, ಅಜ್ಞಾನಿಗಳಾಗಿ, ಶಂಕೆಯಿಲ್ಲದೆ ಇರುವುದು, ವಿಷಯಗಳನ್ನು ತಪ್ಪು ತಪ್ಪಾಗಿ ತಿಳಿದುಕೊಂಡು ತಾವೂ ಕೆಟ್ಟು ಲೋಕವನ್ನು ಕೆಡಿಸುವ ತಂಟೆ ಮಾಡುವುದಕ್ಕಿಂತ ಮೇಲು. ಆದರೆ ಪ್ರಖರವಾಗೋ, ಶಾಂತವಾಗೋ ಅಥವಾ ಅಲ್ಪವಾಗೋ ತಿಳಿದುಕೊಳ್ಳುವುದನ್ನು ಸರಿಯಾಗಿ ಅಥವಾ ಸತ್ಯವಾದುದನ್ನೇ ತಿಳಿದುಕೊಳ್ಳಬೇಕು ಎಂದು.

ರಸಧಾರೆ – 046

ಇರಲಿ ಜೀವರಹಸ್ಯವರೆಪರದೆಯೊಳಗಡಗಿ |

ಅರಸಿ ವರಿಸುವರಾರು ಬೀದಿಬತ್ತಲಿಯ ? ||

ಅರಳಿಪುದದಡಗಿರ್ದೊಡಾಗ ನಮ್ಮೆದೆಗಣ್ಣ |

ಸುರಸತೆಯ ಕುತುಕದಿಂ- ಮಂಕುತಿಮ್ಮ ||

ಜೀವರಹಸ್ಯವರೆಪರದೆಯೊಳಗಡಗಿ = ಜೀವ + ರಹಸ್ಯ + ಅರೆಪರದೆ + ಒಳಗೆ + ಅಡಗಿ. ಅರಳಿಪುದದಡಗಿರ್ದೊಡಾಗ = ಅರಳಿಪುದು + ಅದು + ಅಡಗಿ + ಇರ್ದೊಡೆ + ಆಗ. ನಮ್ಮೆದೆಗಣ್ಣ = ನಮ್ಮ + ಎದೆಗಣ್ಣು

ಇರಲಿ ಜೀವರಹಸ್ಯ ಅರೆಪರೆದೆಯ ಒಳಗೆ ಅಡಗಿ ಅರಸಿ ವರಿಸುವರಾರು ಬೀದಿ ಬತ್ತಲಿಯ? ಅರಳಿಪುದು ಅದು ಅಡಗಿ ಇರ್ದೊಡೆ ಆಗ ನಮ್ಮೆದೆಗಣ್ಣ ಸುರಸತೆಯ ಕೌತುಕದಿಂ – ಮಂಕುತಿಮ್ಮ.

ಈ ಸೃಷ್ಟಿಯ ರಹಸ್ಯವು ತನ್ನ ನಿಜರೂಪವ ತೋರದೆ, ಒಂದು ಮಸುಕಾದ ಪರದೆಯೊಳಗೆ ಅಡಗಿದ್ದರೆ ಇರಲಿ. ನಮಗೆ ನಿಜವಾದ ಜ್ಞಾನವನ್ನು ಕೊಡಬೇಕಾದ ವಸ್ತು ಹೀಗೆ ಅಡಗಿ ಕುಳಿತ್ತಿದ್ದರೆ, ಹಾದಿಯಲ್ಲಿ ಹೋಗುವ ಓರ್ವ ಹುಚ್ಚಿಯನ್ನು ಯಾರಾದರೂ ಹುಡುಕಿಕೊಂಡು ಹೋಗಿ ಹೇಗೆ ವರಿಸುವುದಿಲ್ಲವೋ ಹಾಗೆ, ನಮ್ಮ ಅಂತಃಚಕ್ಷು ಕಾತರದಿಂದ ಅದನ್ನು ಅರಿಯಲು ಕಾಯುತ್ತಿರುತ್ತದೆ ಎಂದು ಪರಮಾತ್ಮನನ್ನು ಅರಿತುಕೊಳ್ಳುವ ವಿಚಾರವನ್ನು ಮಾನ್ಯ ಗುಂಡಪ್ಪನವರು ಪ್ರಸ್ತಾಪಿಸುತ್ತಾರೆ.

ಹೌದು ನಮಗೆ ಅರಿವಾಗುವುದಿಲ್ಲ. ನಮಗೆ ಎಲ್ಲವೂ ಮಸುಕು. ಯಾವುದೂ ನಿಚ್ಚಳವಿಲ್ಲ. ನಾವೆಲ್ಲಾ ಬಹಳ ವಿಚಲಿತರಾಗಿದ್ದೇವೆ. ಏಕೆಂದರೆ ನಮ್ಮೆದುರಿಗೆ ಹಲವಾರು ರೂಪಗಳ ವಿವರಣೆ ಇದೆ. ಹಲವಾರು ಸಿದ್ಧಾಂತಗಳು ಹಲವಾರು ಬೇಧಗಳು ಮತ್ತು ಪ್ರಬೇಧಗಳು. ಯಾವುದನ್ನು ನಂಬುವುದು, ಯಾವುದನ್ನು ಹಿಡಿದುಕೊಳ್ಳುವುದು, ಯಾವುದನ್ನು ಬಿಡುವುದು. ಎಲ್ಲವೂ ಮಸುಕು ಮಸುಕು. ಎಲ್ಲವೂ ನಮಗೆ ಸಮರ್ಪಕವಾಗೆ ಕಾಣುತ್ತದೆ. ಏಕೆಂದರೆ ನಮ್ಮನ್ನು ಸತ್ಯವಾದ ಜ್ಞಾನದೆಡೆಗೆ ಕೊಂಡೊಯ್ಯಬೇಕಾದ ವಸ್ತುವೇ ಅಡಗಿ ಕುಳಿತಿದೆ. ” ಅರಳಿಪುದು ಅದು ಅಡಗಿ ಇರ್ದೊಡೆ” ಹಾಗಿರುವಾಗ ನಾವು ಏನು ಮಾಡಬೇಕು. ಆ ಸತ್ಯದ ಅರಿವಾಗುವತನಕ ಹೃದಯದ ಕಣ್ಣನ್ನು ತೆರೆದಿಟ್ಟುಕೊಂಡು ಮನಸ್ಸಿನ ಕಣ್ಣನ್ನು ತೆರೆದಿಟ್ಟುಕೊಂಡು ಕಾತರದಿ ಕಾಯುವುದನ್ನು ಬಿಟ್ಟರೆ ಬೇರೆ ಏನು ದಾರಿ ಎನ್ನುವ ಭಾವ ವ್ಯಕ್ತವಾಗಿದೆ ಈ ಕಗ್ಗದಲ್ಲಿ.

ನೋಡಿ ನಮ್ಮ ಸಮಾಜದಲ್ಲಿ ಏನಲ್ಲ ನಂಬಿಕೆಗಳುಂಟು. ಆದರೆ ಯಾವುದೂ ಸಹ “ಇದೆ ಪರಮ ಸತ್ಯ”ವೆನ್ನುವ ಗುಂಪಿಗೆ ಸೇರಲಾರದು. ಏಕೆಂದರೆ ಪರಮ ಸತ್ಯದ ಅರಿವು ನಮಗಿಲ್ಲ. ಹಾಗೆ ಇದ್ದಿದ್ದರೆ, ಇಷ್ಟು ಬೇಧಗಳು ಇರುತ್ತಿರಲಿಲ್ಲ ಅಲ್ಲವೇ? ಕೆಲವರಿಗೆ , ಶಿವರೂಪ, ಕೆಲವರಿಗೆ ವಿಷ್ಣುರೂಪ , ಕೆಲವರಿಗೆ ಎರಡೂ. ಕೆಲವರಿಗೆ “ಒಂದು” ( ಅದ್ವೈತ) ಕೆಲವರಿಗೆ ಯಾವುದೋ ವಿಶೇಷವಾದ ” ಒಂದು” (ವಿಶಿಷ್ಟಾದ್ವೈತ) ಕೆಲವರಿಗೆ ಒಂದಲ್ಲಎರಡು (ದ್ವೈತ). ಕೆಲವರಿಗೆ ” ಕರ್ತಾರ ” ಕೆಲವರಿಗೆ “ಅಲ್ಲಾ ” . ಹೀಗೆ ಬೇರೆ ಬೇರೆ ಜನರಿಗೆ ಬೇರೆಯಾದರೆ, ಒಂದೇ ಸತ್ಯದ ದರ್ಶನವಾಗಿಲ್ಲವೆಂದೇ ಅರ್ಥವಲ್ಲವೇ?

ಇನ್ನೂ ಸ್ವಲ್ಪ ಆಳವಾಗಿ ಹೋದರೆ, ಆ ಒಂದನ್ನೂ ಅಥವಾ ಎರಡನ್ನೂ ಅರಿಯುವ ಪರಿಯಾದರೂ ಒಂದೇ ಇದೆಯೋ ಎಂದರೆ, ಅದೂ ಇಲ್ಲ. ವೈಷ್ಣವರಲ್ಲಿ ಶ್ರೀ ವೈಷ್ಣವರು, ಮಾದ್ವರು, ಸ್ಮಾರ್ಥರು, ಗೌಡೀಯರು, ಸ್ವಾಮೀ ನಾರಾಯಣ ಪಂಥದವರು, ಇನ್ನು ಶೈವರಲ್ಲಿ ” ಸ್ಥಾವರ” ಲಿಂಗವನ್ನು ಪೂಜಿಸುವ ಶೈವರು, ” ಜಂಗಮ” ಲಿಂಗವನ್ನು ಪೂಜಿಸುವ ವೀರಶೈವರು. ಈ ಎಲ್ಲ ಪಂಗಡಗಳಲ್ಲೂ ಒಳಪಂಗಡಗಳು ಮತ್ತು ಆ ಒಳಪಂಗಡಗಳಲ್ಲಿ ಒಳಪಂಗಡಗಳು. ಈ ಬೆಧಗಳ ಬಗ್ಗೆ ಬರೆದರೆ ಒಂದು ಗ್ರಂಥವನ್ನೇ ಬರೆಯಬಹುದು. ಆದರೆ ಆ ಪರಮ ಸತ್ಯದ ಬಗ್ಗೆ ಬರೆಲು ಒಂದು ಪುಟದಷ್ಟೂ ಗೊತ್ತಿಲ್ಲ. ಇದೆಲ್ಲ ಏಕೆ, ಏನು ಎಂದು ಆಲೋಚನೆ ಮಾಡಿದರೆ, ನಮಗೆ ಇನ್ನಷ್ಟು ಗೊಂದಲವುಂಟಾಗುತ್ತದೆ.

ಕೆಲವರಿಗೆ ವಾರಕ್ಕೊಂದು ದೇವರು. ದಿನಕ್ಕೊಂದು ದೇವರು. ಆ ದೇವರುಗಳಿಗೆ ಬೇರೆ ಬೇರೆಯಾದ ವ್ರತ ನೇಮಗಳು. ಕೆಲವರಿಗೆ ಇದ್ದಾನೆ ಕೆಲವರಿಗೆ ಇಲ್ಲ.ಕೆಲವರಿಗೆ ಗೊತ್ತಿಲ್ಲ. ಯಾರೂ ಒಬ್ಬ ಅವನ ಅನುಭವದ ಸೀಮಿತ ಮಿತಿಯಿಂದ ಏನನ್ನೋ ಹೇಳುತ್ತಾನೆ. ನಾವು ಯೋಚನೆ, ಚಿಂತನೆ ಮಾಡಲು ಅಸಮರ್ಥರು. ಅವನ ಬಾಲ ಹಿಡಿದು ಅವನು ಹೇಳಿದ್ದನ್ನು ನಂಬುತ್ತೇವೆ. ಅವನ ದರ್ಶನವನ್ನು ನಮ್ಮ ದರ್ಶನವೆಂದು ಹೇಗೆ ನಂಬುವುದು. ಹೀಗೆ ಇಷ್ಟೊಂದು ಬೇಧಗಳಿರುವಾಗ, ಒಂದು ಸತ್ಯವು ಇನ್ನೂ ಪ್ರಕಟವಾಗದೆ, ಅಡಗಿ ಕುಳಿತಂತೆ ಅಲ್ಲವೇ? ಯಾವುದೂ ” ಇದೇ-ಇದು ” ಎಂದು ನಿಷ್ಕರ್ಷೆಯಾಗದಿರುವಾಗ, ನಾವು ಯಾವುದನ್ನೋ ಒಂದನ್ನು ಹಿಡಿದುಕೊಂಡು ಹೋದರೆ ದಾರಿಯಲ್ಲಿ ಹೋಗುವ ಹುಚ್ಚಿಯನ್ನು ಇಷ್ಟಪಟ್ಟು ಮಾಡುವೆ ಮಾಡಿಕೊಂಡಹಾಗೆ ಎನ್ನುತ್ತಾರೆಶ್ರೀ. ಡಿ .ವಿ. ಜಿ.ಯವರು.

ಹಾಗಾಗಿ ವಾಚಕರೆ, ನಾವು ಏನು ಮಾಡಬೇಕು ಎಂದರೆ, ಅಂತರ್ಮುಖಿಗಳಾಗಬೇಕು. ನಮ್ಮ ಒಳಗಿರುವ ಜ್ಞಾನದ ಕಣ್ಣನ್ನು ಉದ್ದೀಪನಗೊಳಿಸಬೇಕು, ಒಬ್ಬ ಸರಿಯಾದ ಗುರುವನ್ನು ಆಶ್ರಯಿಸಬೇಕು ಮತ್ತು ನಮಗೆ ಆ ಪರಮ ಸತ್ಯದ ಅರಿವಾಗುವವ ತನಕ ಕಾಯಬೇಕು. ಎಂದೋ ಒಂದು ದಿನ ನಮಗೂ ಅರಿವು ಮೂಡುತ್ತದೆ ಮತ್ತು ಆ ಪರಮ ಶಕ್ತಿಯ ನಿಜ ಸ್ವರೂಪದ ದರ್ಶನವಾಗುತ್ತದೆ. ಹಾಗೆಂದರೆ, ನಾಲ್ಕು ಕೈಗಳಿಂದ, ಶಂಖ ಚಕ್ರಗಳಿಂದ ಅಲಂಕೃತನಾದ ವಿಷ್ಣುವೋ ಅಥವಾ ತ್ರಿಶೂಲಪಾಣಿಯಾಗಿ, ವಿಷಕಂಠನಾದ ಶಿವನೋ ಕಾಣುತ್ತಾರೆಂದಲ್ಲ. ಆ ರೂಪದ ಹಿಂದಿರುವ ತತ್ವದ ದರ್ಶನವಾಗುತ್ತದೆ. ಅದೇ ಆಧ್ಯಾತ್ಮ ಸಾಧನೆಯ ಉದ್ದೇಶ್ಯ.

ರಸಧಾರೆ – 047

ಅರೆಗಣ್ಣು ನಮದೆಂದು ಕೊರಕೊರಗಿ ಫಲವೇನು ?

ಅರೆಬೆಳಕು ಧರೆಯೊಳೆಂದೊರಲಿ ಸುಖವೇನು?

ಇರುವ ಕಣ್ಣಿರುವ ಬೆಳಕಿನೊಳಾದನಿತ ನೋಡಿ

ಪರಿಕಿಸಿದೊಡದು ಲಾಭ – ಮಂಕುತಿಮ್ಮ.

ಧರೆಯೊಳೆಂದೊರಲಿ = ಧರೆಯೊಳು + ಎಂದು + ಒರಲಿ. ಬೆಳಕಿನೊಳಾದನಿತ = ಬೆಳಕಿನೊಳು + ಆದ + ಇನಿತ.

ಅರೆಗಣ್ಣು = ಅರ್ದಂಬರ್ದ ಜ್ಞಾನ. ಅರೆಬೆಳಕು = ಅರ್ಧಬೆಳಕು. ಒರಲಿ = ಕೂಗಿ. ಇನಿತ= ಒಂದಿಷ್ಟು, ಪರಿಕಿಸಿದೊಡದು = ಪರೀಕ್ಷಿಸಿದರೆ ಅದು

ಅರೆಗಣ್ಣು ನಮದು ಎಂದು ಕೊರಗಿ ಕೊರಗಿ ಫಲವೇನು? ಅರೆ ಬೆಳಕು ಧರೆಯೊಳು ಎಂದು ಒರಲಿ ಸುಖವೇನು?

ಇರುವ ಕಣ್ಣಿರುವ ಬೆಳಕಿನೊಳು ಆದ ಇನಿತ ನೋಡಿ ಪರಿಕಿಸಿದೊಡದು ಅದು ಲಾಭ ಮಂಕುತಿಮ್ಮ

ನಮಗೆ ತಿಳಿದಿರುವುದು ಅರೆ ಬರೆ. ಈ ಅರೆ ಬರೆ ಜ್ಞಾನವನ್ನು ಇಟ್ಟುಕೊಂಡು ನಾವು ಪೂರ್ಣ ಸತ್ಯವನ್ನು ಪಡೆಯುವುದು ಹೇಗೆ ಎಂದು ಗೋಳಾಡದೆ ಇರುವ ಅರಿವಿನಿಂದ ಸಂಪೂರ್ಣ ಜ್ಞಾನವನ್ನು ಪಡೆದುಕೊಳ್ಳಲು ಪ್ರಯತ್ನಿಸಿದರೆ ಅದು ಲಾಭಧಾಯಕವೆನ್ನುತ್ತಾರೆ ಶ್ರೀ ಗುಂಡಪ್ಪನವರು. ಈ ಜಗತ್ತಿನ ಯಾವುದೇ ಭಾಗದಲ್ಲಿ ದಿನದ ಅರ್ಧಭಾಗ ಬೆಳಕು ಇನ್ನರ್ಧಭಾಗ ಕತ್ತಲು. ಬೆಳಕಿನಲ್ಲಿ ನಾವು ನಮ್ಮ ಕೆಲಸ ಕಾರ್ಯಗಳು ಮಾಡುವಹಾಗೆ, ಇರುವ ಜ್ಞಾನವನ್ನು ಉಪಯೋಗಿಸಿದರೆ ಲಾಭ ಎನ್ನುತ್ತಾರೆ. ಮಾನ್ಯ ಗುಂಡಪ್ಪನವರು.

ಒಬ್ಬ ಒಂದು ರಾತ್ರಿ ಎಲ್ಲೋ ಹೋಗಬೇಕಿತ್ತು. ಕತ್ತಲೆ. ಕೈನಲ್ಲಿ ಒಂದು ಲಾಟೀನು. ಅವನು ಹೋಗಬೇಕಾದ ದೂರ ಹತ್ತು ಮೈಲು. ಅಯ್ಯೋ ಈ ಕಡಿಮೆ ಬೆಳಕಿನ ಲಾಟೀನು ಇಟ್ಟುಕೊಂಡು ಅಷ್ಟು ದೂರ ನಾ ಹೇಗೆ ಸವೆಸುವುದು ಎಂದು ಯೋಚಿಸುತ್ತಾ ಕುಳಿತಿದ್ದ. ಆಗ ಅವನಿಗೆ ಒಬ್ಬರು ಒಂದು ಸೂಚನೆಯನ್ನು ಕೊಟ್ಟರು. ” ನಿನ್ನ ಲಾಟೀನಿನ ಬೆಳಕು ಹತ್ತು ಹೆಜ್ಜೆಗೆ ಸಾಕಾಗುವಷ್ಟು ಬೆಳಕನ್ನು ನೀಡುತ್ತದೆ. ಹಾಗಾಗಿ ಮೊದಲ ಹತ್ತು ಹೆಜ್ಜೆ ಆ ಬೆಳಕಿನ ಸಹಾಯದಿಂದ ನಡೆ. ಮುಂದಕ್ಕೆ ಇನ್ನೂ ಹತ್ತು ಹೆಜ್ಜೆ ನಿಚ್ಚಳವಾಗಿ ಕಾಣುವುದು. ಇದೇ ರೀತಿ ನೀ ಸವೆಸಬೇಕೆಂದಿರುವ ಹತ್ತೂ ಮೈಲಿಗಳನ್ನು ದಾಟಬಹುದು” ಎಂದು. ಅವರ ಮಾತ ಕೇಳಿ ಅವ ಹತ್ತೂ ಮೈಲಿಗಳನ್ನು ಸುನಾಯಾಸವಾಗಿ ದಾಟಿದ.

ವಾಚಕರೆ, ಎಲ್ಲ ಮಾನವರಿಗೂ ಒಂದಿನಿತು ಜ್ಞಾನವಿರುತ್ತದೆ. ಅದರ ಬೆಳವಣಿಗೆ ಮತ್ತು ವಿಸ್ತಾರ, ಅವರು ಹುಟ್ಟಿಬಂದ ಮನೆಯ ವಾತಾವರಣ, ಅವರಿರುವ ಸಮಾಜ, ಅವರಿಗೆ ದೊರೆತ ವಿಧ್ಯಾಭ್ಯಾಸ, ಅವರಿಗೆ ದೊರೆತ ಸಾಂಗತ್ಯ ಅವರು ಓದುವ ಪುಸ್ತಕ, ಹೀಗೆ ಹಲವಾರು ವಿಷಯಗಳ ಮೇಲೆ ಅಧಾರವಾಗಿರುತ್ತೆ. ಹಾಗಾಗಿಯೇ ಜನರಲ್ಲಿ ಅರಿವಿನ ಪ್ರಮಾಣದ ವ್ಯತ್ಯಾಸ ಮತ್ತು ಅರಿವಿನ ವ್ಯತ್ಯಯ. ಅಯ್ಯೋ ಅವರಿಗೆ ಎಷ್ಟು ವಿಷಯ ಗೊತ್ತು,ನನಗೇನೂ ಗೊತ್ತಿಲ್ಲ ಎಂದು ಹಲುಬುವುದಕ್ಕಿಂತ, ನಮಗೆ ಗೊತ್ತಿರುವ ವಿಚಾರಗಳನ್ನೇ ಚಿಂತಿಸಿ, ಅಂತರಂಗದಲ್ಲಿ ಮಥಿಸಿ, ಜ್ಞಾನಿಗಳೊಡಗೂಡಿ, ಆಲಿಸಿ, ಸಂದೇಹಗಳನ್ನು ನಿವಾರಿಸಿಕೊಂಡು, ನಮ್ಮೊಳಗೇ ನಾವೇ ವಿಚಾರಮಂಥನ ಮಾಡಿಕೊಂಡರೆ, ನಮ್ಮ ಅರಿವಿನ ಪರಿಧಿಯನ್ನು ವಿಸ್ತರಿಸಿಕೊಳ್ಳಬಹುದು.

ಹಾಗಾಗಿ, ನಾವು ಸತ್ಯವಾಗಿ ನಮ್ಮ ನಮ್ಮ ಅರಿವಿನ ಸ್ಥರವನ್ನು ಅರಿತುಕೊಳ್ಳಬೇಕು. ಅರಿತಿದ್ದನ್ನು ಸಂದೇಹವಿಲ್ಲದೆ ಗಟ್ಟಿಮಾಡಿಕೊಳ್ಳಬೇಕು. ಮೇಲೆ ಹೇಳಿದ ವಿಧಾನದಲ್ಲಿ ಅದನ್ನು ವಿಸ್ತರಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಹಾಗೆ ಮಾಡಿದರೆ ನಮಗೆ ನಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಲು ಲಾಭವಾಗುತ್ತೆ ಎನ್ನುವುದೇ ಈ ಕಗ್ಗದ ಹೂರಣ.

ರಸಧಾರೆ – 048

ಒಂದಿಹುದುಪಾಯವೋರೊರ್ವನರೆಗಣ್ಣುಗಳು

ವೊಂದೊಂದು ಸತ್ಯಾಂಶಕಿರಣಗಳ ಪಿಡಿದು

ಒಂದುಗೂಡಿದೊಡವರ್ಗಳರಿವನೆಲ್ಲವನಾಗ

ಮುಂದುಸಾಗುವೆವಿನಿತು – ಮಂಕು ತಿಮ್ಮ

ಒಂದಿಹುದುಪಾಯವೊರೊರ್ವನರೆಗಣ್ಣುಗಳು = ಒಂದು + ಇಹುದು + ಉಪಾಯ + ವೋರೊರ್ವನ + ಅರೆಗಣ್ಣುಗಳು / ಒಂದುಗೂಡಿದೊಡವರ್ಗಳರಿವನೆಲ್ಲವನಾಗ = ಒಂದು + ಕೂಡಿದೊಡೆ + ಅವರ + ಅರಿವನೆಲ್ಲವ + ಆಗ ಅರೆಗಣ್ಣುಗಳು = ಅರೆಬರೆ ಜ್ಞಾನ, ಇನಿತು = ಸ್ವಲ್ಪ.

ಒಂದು ಇಹುದು ಉಪಾಯ ಓರೋರ್ವನ ಅರೆಗಣ್ಣುಗಳು ಒಂದೊಂದು ಸತ್ಯಾಂಶ ಕಿರಣಗಳ ಪಿಡಿದು ಒಂದು ಕೂಡಿದೊಡೆ ಅವರ್ಗಳ ಅರಿವನೆಲ್ಲವ ಆಗ ಮುಂದು ಸಾಗುವೆ ಇನಿತು ಮಂಕುತಿಮ್ಮ

ಎಲ್ಲರಲ್ಲೂ ಅವರವರ ಭಾವಕ್ಕೆ ಅನುಗುಣವಾಗಿ ಅಲ್ಪ ಸ್ವಲ್ಪ ಜ್ಞಾನವಿರುತ್ತದೆ. ಜ್ಞಾನಶೂನ್ಯ ಎಂಬುವವನು ಇರಲು ಸಾಧ್ಯವೇ ಇಲ್ಲ. ಹಾಗೆ ಎಲ್ಲರಿಗೂ ಇರುವ ಅಲ್ಪಸ್ವಲ್ಪ ಜ್ಞಾನಗಳನ್ನೆಲ್ಲ, ಎಲ್ಲರ ಮನದಲ್ಲಿರುವ ಸತ್ಯವಾದ ವಿಚಾರಗಳನ್ನು ಒಂದು ಕಡೆ ಸೇರಿಸಿ ಎಲ್ಲರೂ ತಮ್ಮ ಮತವೆ ಉತ್ತಮವಾದದ್ದು ಎಂಬ ಭಾವನೆ ತೊರೆದು ಒಮ್ಮತದಿಂದ ಮುಂದೆ ಹೋದರೆ, ಎಲ್ಲರೂ ಪರಮಸತ್ಯವನ್ನರಿಯುವ ಹಾದಿಯಲ್ಲಿ ಒಂದಿಷ್ಟು ಮುಂದಕ್ಕೆ ಹೋಗಬಹುದು ಎನ್ನುವುದು ಈ ಕಗ್ಗದ ಮೂಲಕ ಮಾನ್ಯ ಗುಂಡಪ್ಪನವರ ಪ್ರಸ್ತಾಪ.

ನೋಡಿ ಪ್ರತಿಯೊಂದು ವಿಷಯದಲ್ಲೂ ಪ್ರತಿಯೊಬ್ಬರೂ ಅವರವರದೇ ಅದಂತ ಅಭಿಪ್ರಾಯಗಳನ್ನು ಇಟ್ಟುಕೊಂಡಿರುತ್ತಾರೆ. ಬಹಳ ಕಡಿಮೆ ಸಂದರ್ಭದಲ್ಲಿ ಇಬ್ಬರ ಅಭಿಮತ ಸೇರುತ್ತದೆ. ಆದರೆ ಪ್ರತಿಯೊಬ್ಬರ ಅಭಿಮತವನ್ನೂ ಬೇರೆ ಬೇರೆಯಾಗಿ, ಪೂರ್ವಾಗ್ರಹವಿಲ್ಲದೆ, ನೋಡಿದರೆ ಎಲ್ಲವೂ ಸರಿಯೆಂದು ಕಾಣುತ್ತದೆ. ಇದೇ ರೀತಿ ಆ ಪರಮಾತ್ಮನನ್ನು ಅರಿಯುವ ಪರಿಯಲ್ಲೂ ಪ್ರತಿಯೊಬ್ಬರಿಗೂ ಅವರವರದೇ ಆದಂತ ಅಭಿಪ್ರಾಯಗಳಿರುತ್ತದೆ.ಅದು ಅವರವರ ಭಾವಕ್ಕೆ ಬಂದದ್ದು. ಅಲ್ಲಗೆಳೆಯುವಂತಿಲ್ಲ. ಆದರೆ ಯಾವುದೂ ಸಂಪೂರ್ಣ ಸತ್ಯದೆಡೆಗೆ ನಮ್ಮನ್ನು ಕೊಂಡುಹೋಗುವಲ್ಲಿ ಅಸಮರ್ಥವಾಗಿರುತ್ತದೆ.

ಈ ಜಗತ್ತಿನಲ್ಲಿರುವ ಎಲ್ಲ ಮತಗಳೂ ಹೇಗೆಯೇ. ಹತ್ತು ಹಲವಾರು. ಉದ್ದೇಶ್ಯ ಒಂದೇ ಆದರೂ ಮಾರ್ಗಗಳು ಬೇರೆ ಬೇರೆ. ಕೆಲವರದು ವಿಸ್ತಾರ, ಮತ್ತೆ ಕೆಲವರದು ಕ್ಲುಪ್ತ. ಕೆಲವರದು ಸುಲಭ, ಮತ್ತೆ ಕೆಲವರದು ಕ್ಲಿಷ್ಟ. ಗುಂಪು ಗುಂಪುಗಳಾಗಿ ಜನರು, ತಮ್ಮ ಯೋಚನಾ ಸಾಮರ್ಥ್ಯಕ್ಕೆ ತಿಲಾಂಜಲಿ ಕೊಟ್ಟು ಕೆಲವರನ್ನು ಮತ್ತು ಕೆಲವರ ಅಭಿಮತವನ್ನು, ನಂಬುತ್ತಾರೆ. ಅದನ್ನು ಅಂಧಾನುಕರಣೆ ಎನ್ನುತ್ತೀರೋ ಅಥವಾ ಮೂಢನಂಬಿಕೆ ಎನ್ನುತೀರೋ ವಾಚಕರ ಅಭಿಮತಕ್ಕೆ ಬಿಟ್ಟದ್ದು. ಈ ಮತ ಪ್ರತಿಪಾದಕರು ತಮ್ಮ ಮತವೆ ಉತ್ತಮ, ಉತ್ಕೃಷ್ಟ, ಬೇರೆಲ್ಲವೂ ಸರಿಯಿಲ್ಲ ಎನ್ನುವ ಬೇಧವನ್ನು ಅವರ ಅನುಯಾಯಿಗಳ ಮನದಲ್ಲಿ ಬಿತ್ತಿ, ತಮ್ಮ ಅನುಯಾಯಿಗಳ ಸಂಖ್ಯೆಯನ್ನು ಬೆಳೆಸಿಕೊಳ್ಳುವುದರಲ್ಲಿ ನಿರಂತರ ನಿರತರು. ಹಾಗಾಗಿಯೇ ಇಷ್ಟೊಂದು ಮತಗಳು, ಮತಬೇಧಗಳು ಮತ್ತು ಮತೀಯ ಕಲಹಗಳು.

ಅಜ್ಞಾನದ ಪರಮಾವದಿ !!!! ನಾವೇನು ಮಾಡಬೇಕು ಎಂದರೆ, ಮೊದಲು ನಮ್ಮ ಮನದಿಂದ ದ್ವೇಷವನ್ನು ತೆಗೆಯಬೇಕು. ಅಹಂಕಾರವನ್ನು ತೆಗೆಯಬೇಕು. ಪರರನ್ನು ಸಹಿಸಿಕೊಳ್ಳುವ ಮನೋಭಾವ ಬೆಳೆಸಿಕೊಂಡು ವೃದ್ಧಿಸಿಕೊಳ್ಳಬೇಕು. ಆಗ ನಮಗೆ ಪ್ರತಿಯೊಬ್ಬರ ಮತದಲ್ಲೂ ಒಂದು ಮೂಲ ಸತ್ಯದ ದರ್ಶನವಾಗುತ್ತದೆ. ಹಾಗೆ ಎಲ್ಲರಲ್ಲೂ ಕಾಣುವ ಒಂದು ಸಮಾನ ಸತ್ಯಾಂಶವನ್ನು ತೆಗೆದುಕೊಂಡು ಅದನ್ನು ನಮ್ಮೆಲ್ಲರ ನಡಿಗೆಯ ಪ್ರಾರಂಭ ಬಿಂದುವನ್ನಾಗಿ ಗುರುತಿಸಿಕೊಂಡು ಅಲ್ಲಿಂದ ಮುಂದಕ್ಕೆ ಹೋದರೆ, ನಾವೆಲ್ಲರೂ ಏಕಮತದಿಂದ ಪರಮಾತ್ಮನನ್ನು ಅರಿಯುವ ನಮ್ಮ ಪ್ರಯತ್ನದಲ್ಲಿ ಸಫಲತೆಯನ್ನು ಪಡೆಯಬಹುದು ಅಲ್ಲವೆ? ಆದರೆ ಎಲ್ಲಿಯತನಕ, ಅಸಹಿಷ್ಣುತೆ ಮತ್ತು ಅಹಂಕಾರಗಳು ಇರುತ್ತವೆಯೋ ಅದು ಅಸಾಧ್ಯ.

ಹಾಗಾಗಿ ನಾವು ಅಹಂಕಾರವನ್ನು ಮತ್ತು ಅಂಧಾನುಕರಣೆಯನ್ನು ತೊರೆದು ಜಾತಿ, ಮತ, ವರ್ಣ, ಲಿಂಗ ಬೇಧಗಳನ್ನು ಅಳಿಸಿ ಒಮ್ಮತದಿಂದ ನಮ್ಮೆಲ್ಲರ ಅಂತಃಸತ್ಯವನ್ನು ಒಂದೆಡೆ ಸೇರಿಸುವ ಪ್ರಯತ್ನವನ್ನು ಮಾಡಿ ತನ್ಮೂಲಕ ಪರಮ ಸತ್ಯದ ಅರಿವಿನೆಡೆಗೆ ಹೋಗೋಣ.

ರಸಧಾರೆ – 049

ಪಂಡಿತರೆ ಶಾಸ್ತ್ರಿಗಳೆ ಮಿಥ್ಯೆಯಿಂ ತಥ್ಯಕ್ಕೆ |

ಖಂಡಿತದಿ ಸೇತುವೆಯ ಕಟ್ಟುವೊಡೆ ನೀವು ||

ಕಂಡಿಹಿರ ನರಹೃದಯದಾಳ ಸುಳಿ ಬಿರುಬುಗಳ |

ದಂಡವದನುಳಿದ ನುಡಿ – ಮಂಕುತಿಮ್ಮ||

ಪಂಡಿತರೆ = ಪಾಂಡಿತ್ಯವನ್ನರಿತವರೆ, ಶಾಸ್ತ್ರಿಗಳೆ = ಶಾಸ್ತ್ರಗಳನ್ನರಿತವರೆ, ಮಿಥ್ಯೆಯಿಂ = ಸುಳ್ಳಿನಿಂದ ತಥ್ಯಕ್ಕೆ = ಸತ್ಯಕ್ಕೆ ಕಟ್ಟುವೊಡೆ = ಕಟ್ಟುವಾಗ, ಬಿರುಬು = ಕಾಠಿಣ್ಯ

ನರಹೃದಯದಾಳ = ನರ + ಹೃದಯದ + ಆಳ , ದಂಡವದನುಳಿದ = ದಂಡವು + ಅದನು + ಉಳಿದ

ಪಾಂಡಿತ್ಯವನ್ನು ಪ್ರತಿಪಾದಿಸುವ ಪಂಡಿತರೆ ಮತ್ತು ಶಾಸ್ತ್ರವನ್ನು ಪ್ರತಿಪಾದಿಸುವ ಶಾಸ್ತ್ರಿಗಳೆ, ನಿಮ್ಮ ಪಾಂಡಿತ್ಯದಿಂದ ಮತ್ತು ಶಾಸ್ತ್ರ ಪ್ರತಿಪಾದನೆಯಿಂದ ಸುಳ್ಳನ್ನೇ ನಿಜವೆಂದು ನಿರೂಪಿಸಲು ಮತ್ತು ಇವೆರಡರ ಮಧ್ಯೆ ಒಂದು ಸೇತುವೆಯನ್ನು ಕಟ್ಟುವಾಗ ಸಾಮಾನ್ಯ ಮನುಜರ ಹೃದಯದಾಳದಲ್ಲಿ ಇರುವ ಗೊಂದಲಗಳು, ಅವರು ಅನುಭವಿಸುವ ಕಾಠಿಣ್ಯಗಳನ್ನು ಕಂಡಿದ್ದೀರಾ ಎಂದು ಕೇಳುತ್ತಾ ಸಾಮಾನ್ಯರ ಮನದ ಭಾವದ ಮುಂದೆ ಎಲ್ಲ ಪಾಂಡಿತ್ಯವೂ ಮತ್ತು ಶಾಸ್ತ್ರಗಳೂ ದಂಡವೆನ್ನುತ್ತಾರೆ (ನಿಷ್ಪ್ರಯೋಜಕ) ಮಾನ್ಯ ಗುಂಡಪ್ಪನವರು.

“ಪುಸ್ತಕದ ಬದನೇಕಾಯಿ” ಎನ್ನುವ ಮಾತು ಒಂದು ಇದೆ. ಅಂದರೆ ಯಾರೋ ಬರೆದ ವಿಷಯವನ್ನು ಓದಿಕೊಂಡು ಮನನಮಾಡಿಕೊಂಡು ತಮ್ಮ ವಾಗ್ಜರಿಯಿಂದ ತಾವು ಅರಿತಿದ್ದು ಸತ್ಯವೋ – ಸುಳ್ಳೋ ಎಂದು ವಿವೇಚನೆಯಿಲ್ಲದೆ ತಮ್ಮ ಪಾಂಡಿತ್ಯವನ್ನು ಪ್ರಸ್ತುತಪಡಿಸುವ ಪಂಡಿತರ ಪರಿ ಮತ್ತು ತಮ್ಮ ಅನುಭವಕ್ಕೆ ತಂದುಕೊಳ್ಳದೆ ಶಾಸ್ತ್ರವನ್ನು ಓದಿಕೊಂಡು, ಆ ಶಾಸ್ತ್ರದಲ್ಲಿನ ವಿಧಾನಗಳು ವೈಜ್ಞಾನಿಕವೋ ಅಥವಾ ಮಾತ್ರ ಮೂಢನಂಬಿಕೆಯೋ ಎಂಬುದನ್ನು ಪರೀಕ್ಷಿಸದೆ ತಾವು ತಿಳಿದಿದ್ದೆ ಸತ್ಯವೆಂದು ಜನಗಳಿಗೆ ತಮ್ಮ ಮತವನ್ನು ರುಬ್ಬುವ ಶಾಸ್ತ್ರ ಪ್ರತಿಪಾದಕರ ವಿಧಾನ ಎರಡೂ ಸರಿಯಲ್ಲ. ಅವರು ಕೆಲವು ಬಾರಿ ತಮ್ಮ ಅರಿವು ಸತ್ಯಕ್ಕೆ ದೂರವಾಗಿದೆ ಎಂದು ಅರಿತಿದ್ದರೂ ತಾವು ತಿಳಿದದ್ದೇ ಸತ್ಯವೆಂದು ಪ್ರತಿಪಾದಿಸಿ, ತಮ್ಮ ಸ್ಥಾನವನ್ನು ಸುಭಧ್ರವಾಗಿಸಿಕೊಳ್ಳಲು ಸತ್ಯ ಮತ್ತು ಸುಳ್ಳಿನ ಮಧ್ಯೆ ಒಂದು ಸೇತುವೆಯನ್ನು ಕಟ್ಟುತ್ತಾರೆ. ಇವರು ಪ್ರತಿಪಾದಿಸುವ ವಿಷಯಗಳನ್ನು ಇನ್ನು ಸ್ವಲ್ಪ ಸಮಯದ ನಂತರ ಬೇರೆ ಯಾರೋ ಸುಳ್ಳೆಂದು ನಿರೂಪಿಸುತ್ತಾರೆ!!!

ಏಕೆಂದರೆ ಅವರಿಗೆ ಸಾಮಾನ್ಯ ಮಾನವರ ಮನದ ಅಂತರಂಗದಲ್ಲಿರುವ ಭಾವನೆಗಳು ಅರ್ಥವೇ ಆಗುವುದಿಲ್ಲ ಅಥವಾ ಇವರುಗಳು ಅದನ್ನು ಅರ್ಥಮಾಡಿಕೊಳ್ಳುವ ಪ್ರಯತ್ನವನ್ನೇ ಮಾಡುವುದಿಲ್ಲ. ಅವುಗಳು ಸತ್ಯಕ್ಕೆ ಹತ್ತಿರವಾಗಿರುತ್ತವೆ. ಏಕೆಂದರೆ ಅವು ಅನುಭವದ ಮೂಸೆಯಿಂದ ಎರಕ ಹೊಯ್ದಂತಾಗಿರುತ್ತದೆ. ಪ್ರತಿಯೊಂದು ವಸ್ತು ಮತ್ತು ವಿಷಯ ಅವರು ಸ್ವತಃ ಅನುಭವಿಸಿ ನಿಜ ಭಾವಗಳನ್ನು ಅರ್ಥೈಸಿಕೊಂಡು ಅನುಭವಿಸಿರುತ್ತಾರೆ. ಆ ರೀತಿಯ ಯಾವ ಅನುಭವವೂ ಇಲ್ಲದೆ, ಕೇವಲ ಪುಸ್ತಕದ ಮಾತು ಶಾಸ್ತ್ರದ ವಿಷಯವನ್ನು ಪ್ರತಿಪಾದಿಸುವ ಪಂಡಿತರನುಡಿಗಳಿಗಿಂತ ಜನ ಸಾಮಾನ್ಯರ ಅಂತರ್ಯದ ಅನುಭವದ ಭಾವಗಳಿಗೆ ಹೆಚ್ಚು ಮಹತ್ವ ಎನ್ನುತ್ತಾರೆ ಶ್ರೀ ಗುಂಡಪ್ಪನವರು.

ವಾಚಕರೆ ಇದು ನಮಗೂ ಅನುಭವಕ್ಕೆ ಬಂದಿರುವ ವಿಷಯವೇ. ಆದರೆ ಶಾಸ್ತ್ರ ಮತ್ತು ಪುಸ್ತಕದ ವಿಚಾರಗಳನ್ನು ಸಂಪೂರ್ಣ ತೊರೆಯಬೇಕೆ ಎನ್ನುವುದು ಪ್ರಶ್ನೆ? ಅಲ್ಲ. ಹಾಗೆ ತೊರೆಯುವುದೂ ಬೇಡ. ನಾವು ಏನು ಮಾಡಬೇಕೆಂದರೆ, ಆ ಪುಸ್ತಕಗಳ ಮತ್ತು ಶಾಸ್ತ್ರಗಳ ವಿಷಯಗಳನ್ನು ನಮ್ಮ ವಿಚಾರಕ್ಕೆ ಒಳಪಡಿಸಿ, ತಿಕ್ಕಿ, ತೀಡಿ, ಕಡೆದು ಅದರೊಳಗಿನ ಸತ್ವವನ್ನು ನಮ್ಮ ಅನುಭವಗಳೊಂದಿಗೆ ಮಿಶ್ರಣ ಮಾಡಿ ನಮಗೆ ಗೋಚರವಾದ ಸತ್ಯವನ್ನು ನಾವು ನಮ್ಮ ಮನಸ್ಸುಗಳಲ್ಲಿ ಗಟ್ಟಿಮಾಡಿಕೊಳ್ಳಬೇಕು. ಹೇಗೆ ಒಂದು ಹಂಸವು ನೀರು ಬೆರೆತ ಹಾಲಿನಲ್ಲಿ ನೀರನ್ನು ತೊರೆದು ಹಾಲನ್ನು ಮಾತ್ರ ಹೀರುತ್ತದೋ ಹಾಗೆ ನಾವು ಈ ಶಾಸ್ತ್ರ ಮತ್ತು ಪಾಂಡಿತ್ಯದ ವಿಚಾರಗಳಲ್ಲಿರುವ ಸತ್ವವನ್ನು ಹೀರಿ ನಮ್ಮ ವಿಚಾರವನ್ನು ಶುದ್ಧಿಮಾಡಿಕೊಳ್ಳಬೇಕು. ಶುದ್ಧ ವಿಚಾರದಿಂದ, ಶುದ್ಧ ಆಚರಣೆ ಶುದ್ಧ ಆಚರಣೆಯಿಂದ ಮನೋ ನೆಮ್ಮದಿ.

ರಸಧಾರೆ – 050

ಮನೆಯೆಲ್ಲಿ ಸತ್ಯಕ್ಕೆ? ಶೃತಿ ತರ್ಕಮಾತ್ರದೊಳೆ? |

ಅನುಭವಮುಮದರೊಂದು ನೆಲೆಯಾಗದಿಹುದೇಂ? ||

ಮನುಜಹೃದಯಾಂಗಣದೊಳೆನಿತೆನಿತೊ ದನಿಯುದಿಸಿ |

ಅನಕಿಪುವು ತರ್ಕವನ್ನು – ಮಂಕುತಿಮ್ಮ

ಅನುಭವಮುಮದರೊಂದು = ಅನುಭವಮುಂ + ಅದರೊಳು + ಒಂದು, ನೆಲೆಯಾಗದಿಹುದೇಂ = ನೆಲೆ + ಆಗದಿಹುದು + ಅದೇಂ, ಮನುಜಹೃದಯಾಂಗಣದೊಳೆನಿತೆನಿತೊ = ಮನುಜ + ಹೃದಯ + ಆಂಗಣದೊಳು + ಎನಿತು + ಇನಿತೋ, ದನಿಯುದಿಸಿ= ದನಿಯು + ಉದಿಸಿ, ಅಣಕಿಪುವು = ಅಣಕವಾಡುತ್ತದೆ. ಉದಿಸಿ = ಉದ್ಭವವಾಗಿ

ಸತ್ಯಕ್ಕೆ ಎಲ್ಲಿ ಮನೆ? ಶೃತಿ ತರ್ಕ ಮತ್ತು ವಾದಗಳಲ್ಲಿ ಮಾತ್ರವೇನು? ಮನುಜರ ಅನುಭವವೂ ಸತ್ಯವನ್ನು ನುಡಿಯಬಾರದೇನು? ಮನುಜರ ಹೃದಯದ ಆಂಗಣದಲ್ಲಿ ಹತ್ತು ಹಲವಾರು ಸತ್ಯದ ಭಾವಗಳು ಉದಯಿಸಿ ಈ ಶಾಸ್ತ್ರ ತರ್ಕ ಮತ್ತು ವಾದಗಳು ಪ್ರತಿಪಾದಿಸುವ ಸತ್ಯವನ್ನೆಲ್ಲ ಅಣಕಿಸುತ್ತವೆ ಎನ್ನುತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಹಿಂದಿನ ಕಗ್ಗದಲ್ಲಿ ಹೇಳಿದ ಪಂಡಿತರು ಮತ್ತು ಶಾಸ್ತ್ರಿಗಳು ಉಲ್ಲೇಖಿಸುವ ಶೃತಿ ತರ್ಕ ಮತ್ತು ವಾದಗಳಲ್ಲಿ ಮಾತ್ರ ಸತ್ಯವಿದೆಯೋ ?. ಏಕೆ ಸಾಮಾನ್ಯ ಜನರ ಅನುಭವಗಳಲ್ಲೂ ಸತ್ಯವಿರಬಾರದೇನು? ಎಂದು ಕೇಳುತ್ತಾರೆ ಗುಂಡಪ್ಪನವರು ಈ ಕಗ್ಗದಲ್ಲಿ, ಮುತ್ತಿನಂಥಾ ಮಾತು. ಏಕೆಂದರೆ ನಮ್ಮಲ್ಲಿ ಒಂದು ಮಾತಿದೆ. ” ವೇದ ಸುಳ್ಳಾದರೂ ಗಾದೆ ಸುಳ್ಳಾಗೋದಿಲ್ಲ” ಎಂದು. ಅಂದರೆ ಎಲ್ಲರೂ ನಂಬುವುದು ವೇದಗಳು ಸತ್ಯವನ್ನು ಮತ್ತು ಸತ್ವವನ್ನು ನುಡಿಯುತ್ತದೆ ಎಂದು. ಅಂದರೆ ವೇದದಲ್ಲಿ ಸತ್ಯವಿದೆ ಎಂದು.ಅದು ಅಕ್ಷರಶಃ ಸತ್ಯ. ಆದರೆ ಅವುಗಳನ್ನು ಓದಿ ಅವಕ್ಕೆ ವ್ಯಾಖ್ಯಾನ ಬರೆಯುವ ಪಂಡಿತರು ಅವಗಳನ್ನು ತಮ್ಮ ಚಿಂತನೆಯ ಹಾದಿಯಲ್ಲಿ ವಿಮರ್ಶಿಸುತ್ತಾ, ಹಲಬಾರಿ ಮೂಲದಲ್ಲಿರುವ ಸತ್ಯವನ್ನು ಮತ್ತು ಸತ್ವವನ್ನು ತಿರುಚಿ ಬರೆಯುತ್ತಾರೆ. ಅದು ಅವರ ಅನುಭವ. ಪೂರ್ಣ ಸತ್ಯವಾಗಿರುವುದಿಲ್ಲ. ಅಂತಹಾ ಉಕ್ತಿಗಳಾದರೂ ಎಂದಾದರೂ ಸುಳ್ಳಾಗಿರಬಹುದು ಆದರೆ ಗಾದೆ ಸುಳ್ಳಾಗೋಲ್ಲ ಎಂದು. ಏಕೆಂದರೆ ಗಾದೆ ಮಾತುಗಳು ಈ ಕಗ್ಗದಲ್ಲಿ ಹೇಳಿದ ಹಾಗೆ “ಸಾಮಾನ್ಯ ಮನುಜಹೃದಯದ ಆಂಗಣದೊಳಗಿಂದ” ಬಂದಂತಹ ಆಣಿಮುತ್ತುಗಳು.

ಗಟ್ಟಿ ಮತ್ತು ಆಳವಾದ ಅನುಭವ ನುಡಿಯುವ ಮಾತುಗಳು ಮನುಜ ಹೃದಯಾಂತರಾಳದಿಂದ ಮೂಡಿ ಬರುತ್ತವೆ ಮತ್ತು ಅವು ಸತ್ಯವನ್ನೇ ಹೇಳುತ್ತವೆ. ಅಂಥಹ ಸತ್ಯವಾದ ಮಾತುಗಳು ಮೇಲೆ ಹೇಳಿದ ಶೃತಿ ಮತ್ತು ತರ್ಕದೊಳಗಿನ ವಿಶ್ಲೇಷಣೆಗಳನ್ನು ಅಣಕಿಸುವಂತಿರುತ್ತವೆ. ಹಾಗಾಗಿ ನಾವು ಇವೆರಡನ್ನೂ ಪರೀಕ್ಷಿಸಿ ಸತ್ಯವನ್ನು ಮಾತ್ರ ಗಹಿಸ ಬೇಕು ಎಂದು ಅವರ ಅಭಿಪ್ರಾಯ.

ವಾಚಕರೆ, ಸಾಮಾನ್ಯ ಜನರ ಮತ್ತು ಅವರ ಅನುಭವದಿಂದ ಮೂಡಿದ ಮತ್ತು ಮನಸ್ಸಿನಿಂದ ಮೂಡಿದ ಮಾತುಗಳು ಸದಾಕಾಲಕ್ಕೂ ಸತ್ಯವಾಗಿ ಉಳಿಯುತ್ತವೆ. ತರ್ಕ ಮೀಮಾಂಸೆಗಳಂತಹ ಗ್ರಂಥಗಳು ಪ್ರತಿಪಾದಿಸುವುದಕ್ಕಿಂತ ಹೆಚ್ಚಾಗಿ ಈ ಜನಮನ ನುಡಿಗಳು ನಮಗೆ ಹೃದ್ಯವಾಗಿರುತ್ತವೆ, ಬೇಗ ಮನಸ್ಸಿಗೆ ನಾಟುತ್ತವೆ ಮತ್ತು ಬಹಳ ಕಾಲ ನಿಲ್ಲುತ್ತವೆ. ಅಂತಹ ವಿಷಯಗಳನ್ನು ನಾವೂ ಸಹ ಗ್ರಹಿಸಿ ಸತ್ಯವನ್ನರಿಯುವ ಪ್ರಯತ್ನವನ್ನು ಮಾಡೋಣ.

You may Also Like :

 

Leave a Comment