Mankuthimmana kagga (ಮಂಕುತಿಮ್ಮನ ಕಗ್ಗ ) with meanings 81-90

ರಸಧಾರೆ – 081

ಮರೆತಿಹನೆ ಬೊಮ್ಮ ? ಮರೆತಿಲ್ಲ; ಮರೆತವೊಲಿಹನು |

ಧರಿಸಿ ಜೀವಾಕೃತಿಯ ಜಗದಿ ತನ್ನನೆ ತಾನ್ ||

ಅರಸಿಕೊಳುವವೊಲಿಹುದು; ದೊರೆತವೋಲ್ ತೋರೆ ಸುಖ |

ದೊರೆವರೆಗಾಯಸವೊ – ಮಂಕುತಿಮ್ಮ ||

ಮರೆತಿಹನೆ = ಮರೆತಿದ್ದಾನೇನು? ಮರೆತವೊಲಿಹನು = ಮರೆತಂತಿದ್ದಾನೆ. ಜೀವಾಕೃತಿಯ = ಎಲ್ಲ ಜೀವಿಗಳ ರೂಪವನು ಅರಸಿಕೊಳುವವೊಲಿಹುದು = ಹುಡುಕುವಂತೆ ಇದೆ. ದೊರೆತವೋಲ್ತೋರೆ = ದೊರೆತಂತೆ ಆದರೆ, ದೊರೆವರೆಗಾಯಸವೊ = ದೊರೆಯುವರೆಗೆ ಆಯಾಸ.

ಈ ಜಗತ್ತಿನ ಎಲ್ಲದರೊಳಗೆ ಆ ಪರಬ್ರಹ್ಮ ತನ್ನನ್ನು ತಾನೇ ಮರೆತಿದ್ದಾನೇನು, ಎಂದು ಪ್ರಶ್ನಿಸಿ, ಇಲ್ಲ ಅವ ಮರೆತಂತೆ ಇದ್ದಾನೆ ಎಂದು ಉತ್ತರಿಸುತ್ತಾರೆ ಮಾನ್ಯ ಗುಂಡಪ್ಪನವರು. ಎಲ್ಲ ಜೀವಾತ್ಮಗಳ ಸೃಷ್ಟಿಯ ಎಲ್ಲದರ ರೂಪವನ್ನೂ ಧರಿಸಿ ತನ್ನನ್ನು ತಾನೇ ಹುಡುಕುತ್ತಿದ್ದಾನೆ. ಅವನಿಗೆ ದೊರೆತರೆ ಸುಖ ದೊರೆಯದಿದ್ದರೆ ಆಯಾಸ.

ಎಂಥಹ ಅದ್ಭುತ ವಿಚಾರ. ವಾಚಕರೆ ನೋಡಿ ನಾವು ಹಿಂದಿನ ಕಗ್ಗಗಳಲ್ಲಿ ”ಎಲ್ಲವೂ ಅವನೇ. ಎಲ್ಲವೂ ಅವನಿಂದಲೇ ಮತ್ತು ಎಲ್ಲವೂ ಅವನಿಗಾಗಿಯೇ” ಎಂದು ಹೇಳುತ್ತಾ ಬಂದಿದ್ದೇವೆ. ನಮ್ಮ ಮನಸ್ಸು ಬುಧ್ಹಿ ದೇಹ, ಆತ್ಮಗಳೂ ಅವನೇ ಎಂದಮೇಲೆ ಅವನನ್ನು ಹುಡುಕುವುದು ಎಂದರೆ ಏನು . ಯಾರು ಯಾರನ್ನು ಹುಡುಕುವುದು? ಅವನೇ ಇದ್ದಮೇಲೆ, ಅವನೇ ಎಲ್ಲವೂ ಆಗಿದ್ದಮೇಲೆ ಇಲ್ಲಿ ಹುಡುಕುವುದು ಎಂದರೇನು.? ಯಾವುದ್ದಾದರೂ ವಸ್ತು ಕಳೆದು ಹೋದರೆ ಹುಡುಕ ಬೇಕು. ಎಲ್ಲ ಕಡೆಯಲ್ಲೂ ಅವನೇ ಆವರಿಸಿ ತನ್ಮಯನಾಗಿ ಇರಬೇಕಾದರೆ ಹುಡುಕುವುದು ಅಂದರೆ ಎಂತಹ ವಿಪರ್ಯಾಸ ಅಲ್ಲವೇ.?

ಈ ಜಗತ್ತನ್ನು ಸೃಜಿಸಿ, ನಮ್ಮನ್ನು ಇಲ್ಲಿ ಮಾಡಿ ತಾನೂ ಎಲ್ಲರೊಳಗೆ ಇದ್ದು, ಆ ಇರವಿಕೆಯ ಜ್ಞಾನವನ್ನು ನಮ್ಮಿಂದ ಮರೆಮಾಚಲು ಒಂದು ಮಾಯೆಯಂಬ ಪರದೆಯನ್ನು ನಮ್ಮ ಜ್ಞಾನದ ಮೇಲೆ ಕವಿಸಿ, ನಮ್ಮ ಮನಸ್ಸು ಬುದ್ಧಿಗಳು ಆ ಪರಮ ವಸ್ತುವಿನಿಂದ ಅನ್ಯ ವಸ್ತುಗಳಮೇಲೆ ಮೋಹಗೊಳ್ಳುವಂತೆ ಆ ವಸ್ತುಗಳನ್ನೂ ಮಾಡಿ ಒಂದು ವಿಚಿತ್ರ ಪರಿಸ್ಥಿತಿ ನಿರ್ಮಿಸಿದ್ದಾನೆ ಆ ಪರಮಾತ್ಮ. ಆ ಪರದೆಯು ತೆಳುವಾಗಿದ್ದರೂ ಕಬ್ಬಿನದಷ್ಟು ಗಟ್ಟಿ. ಆ ಕಡೆ ಆ ಪರಮಾತ್ಮನ ಇರವು ಕಾಣುತ್ತಿದ್ದರೂ ಆ ಪರದೆಯನ್ನು ಸೀಳಿ ಆ ಬದಿಗೆ ಹೋಗಲಾರದಂತೆ ಈ ಜಗತ್ತಿನ ಮೋಹದ ಮಾಯೆಯ ಸೆಳೆತದಲ್ಲಿ ಸಿಕ್ಕಿಬಿಟ್ಟಿದ್ದಾನೆ ಈ ಮನುಷ್ಯ ಪ್ರಾಣಿ. ಜ್ಞಾನವಿರುವ ಇವನ ಗತಿಯೇ ಹೀಗಿದ್ದರೆ ಪಾಪ ಜ್ಞಾನವಿಲ್ಲದ ಪ್ರಾಣಿಗಳು, ಪಶು ಪಕ್ಷಿ ಮತ್ತು ಕೀಟ ಇತ್ಯಾದಿಗಳ ಗತಿಯೇನು.

ಆದರೆ ಮಾನವನು, ಈ ಮಾಯೆಯ ಪರದೆಯನ್ನು ದಾಟಿ ಆ ಪರಮಾತ್ಮನೊಂದಿಗೆ ಸಾಮೀಪ್ಯ, ಸಾಯುಜ್ಯ ಮತ್ತು ಸಾರೂಪ್ಯವನ್ನು ಪಡೆಯಲು ಹತ್ತು ಹಲವಾರು ವಿಧಾನಗಳ ಮೊರೆ ಹೋಗಿದ್ದಾನೆ. ಪೂಜೆ, ಮಂತ್ರ, ತಂತ್ರ, ಧ್ಯಾನ, ತಪಸ್ಸು ಹೋಮ ಹವನ, ಭಜನೆ, ಯೋಗ , ಸತ್ಸಂಗ ಮುಂತಾದ ವಿಧಾನಗಳನ್ನು ಕಂಡು ಕೊಂಡಿದ್ದಾನೆ. ಸರಿಯಾದ ಗುರುವಿನ ಮಾರ್ಗದರ್ಶನದಲ್ಲಿ ಅವುಗಳಲ್ಲಿ ಯಾವುದಾದರೂ ಪಾಲಿಸಿದ್ದಲ್ಲಿ ನಮಗೂ ಸಹ ಆ ಪರಮ ಶಕ್ತಿಯ ಸರ್ವ ವ್ಯಾಪಕತೆಯ, ಸರ್ವ ಶ್ಕಕ್ತಿಯ ಪ್ರಭಾವವಾದ ಅನುಭವವಾಗಬಹುದು. ಅಂತಹ ಅನುಭಾವಾಗುವ ತನಕ ಸುಖ ದೂರ. ಸಿಕ್ಕರೆ ಆ ಸುಖದ ಅನುಭವೇ ಒಂದು ಶಾಶ್ವತ ಸುಖ.

ಅಂತಹ ಅನುಭವವನ್ನು ಪಡೆಯಲು ನಾವೂ ಪ್ರಯತ್ನ ಪಡೋಣವೇ?

ವಿಶ್ವಲೀಲೆ. ರಸಧಾರೆ – 082

ಬನ್ನಿರಾಡುವ ಕಣ್ಣಮುಚ್ಚಾಲೆಯಾಟವನು |

ಎನ್ನನರಸಿ ಬನ್ನಿ ಮಕ್ಕಳಿರ ಬೇಗ ||

ಬನ್ನಿರಾಟವ ಬೇಡವೆಂಬುವರ ನಾಂ ಬಿಡೆನು |

ಎನ್ನುವಜ್ಜಿಯೋ ಬೊಮ್ಮ – ಮಂಕುತಿಮ್ಮ ||

 

ಹಿಂದಿನ ಕಾಲದ ಅವಿಭಕ್ತ ಕುಟುಂಬಗಳಲ್ಲಿ ಯುವತಿಯರು ಮತ್ತು ವಯಸ್ಕರು ಕೆಲಸಗಳಲ್ಲಿ ಮಗ್ನರಾಗಿದ್ದರೆ ವಯಸ್ಸಾದ ಅಜ್ಜಿಯರು ಮಕ್ಕಳನ್ನು ಆಡಿಸಿಕೊಳ್ಳಲು, ಕಣ್ಣಾ ಮುಚ್ಚಾಲೆ ಆಟವಾಡಿಸುತ್ತಿದ್ದರು. ಅದು ಅವರಿಗೂ ಕಾಲಯಾಪನೆಗೆ ಒಂದು ದಾರಿಯಾಗುತ್ತಿತ್ತು. ಅಜ್ಜಿಯರು ಎಲ್ಲರನ್ನೂ ಸೇರಿಸಿಕೊಂಡು ಆಡುತ್ತಿದ್ದರು. ಯಾರನ್ನೂ ಬಿಡುತ್ತಿರಲಿಲ್ಲ. ಅದರಂತೆ ಕಂಡೂ ಕಾಣದಂತೆ ಎದುರಿಗಿದ್ದರೂ ಬಚ್ಚಿಟ್ಟುಕೊಂಡಂತೆ ಇರುವ ಆ ಪರಮಾತ್ಮನನ್ನು ಹುಡುಕುವಂತೆ ನಮ್ಮನ್ನು ಕರೆಯುತ್ತಿದ್ದಾನೇನು ಆ ಪರಬ್ರಹ್ಮ, ಎಂದು ಕೇಳುತ್ತಾರೆ ಮಾನ್ಯ ಗುಂಡಪ್ಪನವರು.

ವಾಚಕರೆ ಹೌದು ನೋಡಿ ಇದೊಂದು ಕಣ್ಣಾ ಮುಚ್ಚಾಲೆಯೇ. ಆಟದಲ್ಲಿ ನಮ್ಮ ಕಣ್ಣನ್ನು ಮುಚ್ಚಲಾಗುತ್ತದೆ. ಹಾಗೆಯೇ ಈ ಜೀವನದಾಟದಲ್ಲೂ ನಮ್ಮ ಕಣ್ಣು ಮುಚ್ಚಲಾಗಿದೆ,ಅಜ್ಞಾನದಿಂದ, ಮಾಯೆಯೆಂಬ ಪರದೆಯಿಂದ. ಅಹಂಕಾರವೆಂಬ ಮುಚ್ಚಳದಿಂದ. ಎಲ್ಲ ವೇದಗಳೂ ಶಾಸ್ತ್ರಗಳೂ,ಪುರಾಣಗಳೂ ಗ್ರಂಥಗಳೂ ಎಲ್ಲವೂ ಆ ಪರಮಾತ್ಮನ ಸರ್ವವ್ಯಾಪಕತ್ವವನ್ನು ಸಾರಿ ಸಾರಿ ಹೇಳುತ್ತಿದ್ದರೂ, ನಾವು ಸಾವಿರಾರು ವರ್ಷಗಳಿಂದ ಹುಡುಕುತ್ತಿದ್ದೇವೆ. ನಮಗೆ ಅವನ ಇರವಿನ ಭಾಸವಾಗುತ್ತಿದ್ದರೂ, ಭಾವಕ್ಕೆ ಬರುತ್ತಿಲ್ಲ. ಇಲ್ಲಿ ನನಗೆ ಕನಕದಾಸರ ಆ ಬಾಳೆಹಣ್ಣಿನ ಪ್ರಸಂಗ ಮನಸ್ಸಿಗೆ ಬರುತ್ತದೆ. ಗುರುಗಳೇನೋ ಹೇಳಿಬಿಟ್ಟರು ” ಯಾರೂ ನೋಡದ ಕಾಣದ ಇಲ್ಲದ ಸ್ಥಳದಲ್ಲಿ ತಿಂದು ಬನ್ನಿ ಎಂದು. “ ಪಾಪ ಕನಕದಾಸರಿಗೆ ಆ ದೇವರಿಲ್ಲದ ಸ್ಥಳವೇ ಕಾಣಲಿಲ್ಲವಂತೆ. ಹಣ್ಣು ತಿನ್ನಲಾಗಲೇ ಇಲ್ಲವಂತೆ. ಅದು ಮಹಾನುಭಾವರ ಅನುಭೂತಿ. ಸ್ವಾಮೀ ರಾಮತೀರ್ಥರು ಹೇಳಿದರಂತೆ ಒಬ್ಬನಿಗೆ ”ನೀ ಯಾರೆಂದು ಅರಿತುಕೋ. ಅದರ ಆರಿವು ನಿನಗಾದರೆ ಆ ಪರಮಾತ್ಮ ನಿನಗೇ ಗೋಚರವಾಗುವನು. ನಾ ತೋರಿಸಬೇಕೆಂದಿಲ್ಲ” ಎಂದು. ಹಾಗೆ ಎಲ್ಲ ಕಡೆಯೂ ಇರುವ ಆ ಪರಮ ಚೇತನವು ನಮ್ಮ ಅರಿವಿಗೆ ನಿಚ್ಚಳವಾಗಿ ಬರದೆ, ನಾವು ಕಣ್ಣಾಮುಚ್ಚಾಲೆಯಂತಾ ಆಟವಾಡುತ್ತಿದ್ದೇವೆ ಎಂಬುದು ಈ ಕಗ್ಗದ ಹೂರಣ.

ಆ ಪರಮಾತ್ಮ ವಸ್ತು ಸದ್ವಸ್ತು. ಅಂದರೆ ನಿತ್ಯವಾಗಿ ನಿರಂತರವಾಗಿ ಎಲ್ಲೆಡೆಯಲ್ಲೂ ಎಲ್ಲಕಾಲಕ್ಕೂ ಇರುವ ವಸ್ತುವೇ ಸದ್ವಸ್ತು. ” ಸತ್ಸಂಗತ್ವೆ ನಿಸ್ಸಂಗತ್ವಂ, ನಿಸ್ಸಂಗಸ್ತ್ವೆ ನಿರ್ಮೋಹತ್ವಂ, ನಿರ್ಮೋಹತ್ವೆ ನಿಶ್ಚಲ ತತ್ವಂ ನಿಶ್ಚಲ ತತ್ವೆ ಜೀವನ್ಮುಕ್ತಿ:” ಎಂದರು ಶಂಕರ ಭಗವತ್ಪಾದರು. ಒಂದೇ ಸಮಯದಲ್ಲಿ ಒಂದೇ ಸ್ಥಳದಲ್ಲಿ ಎರಡು ವಸ್ತುಗಳು ಇರಲಾಗದು ಎನ್ನುವುದು ಭೌತಶಾಸ್ತ್ರದ ಸಿದ್ಧಾಂತ. ಹಾಗೆ ನಾವು ಸತ್ತಿನ ಸಂಗ ಮಾಡಿದಾಗ ಅಸತ್ತಿನ ಸಂಗ ಬಿಟ್ಟು ಹೋಗುತ್ತದೆ. ಅಸತ್ತಿನ ಸಂಗಬಿಟ್ಟಾಗ, ವಸ್ತು, ವಿಷಯ ,ವ್ಯಕ್ತಿಗಳ ಮೇಲಿನ ಮೋಹ ಅಥವಾ ಮಮಕಾರ ಹೋಗಿಬಿಡುತ್ತದೆ, ಮೋಹ ಹೋದರೆ ಆ ಪರಮಾತ್ವ ತತ್ವ ನಿಶ್ಚಲವಾಗಿ , ಅಂದರೆ ಸ್ಥಿರವಾಗುತ್ತದೆ. ಆ ಸ್ಥಿತಿಯಲ್ಲಿ ಜೀವನು ಬಂದನಗಳಿಂದ ಮುಕ್ತನಾಗಿ ಪರಮಾತ್ಮನಲ್ಲಿ ಸಾಯುಜ್ಯವನ್ನು ಪಡೆಯುತ್ತಾನೆ. ಇದು ಸತ್ಯ ಸತ್ಯ ಸತ್ಯ. ಅಂತಹ ಸ್ಥಿತಿಗೆ ನಾವು ಹೋದಾಗ, ನಮ್ಮ ಒಳಗಣ್ಣುಗಳು ತೆರೆದುಕೊಂಡು ಆ ಪರಮ ಶಕ್ತಿಯ ಆ ಪರಮ ಚೇತನದ ಸರ್ವ ವ್ಯಾಪಕತ್ವದ ದರ್ಶನವಾಗಿ ನಮಗೆ ಎಲ್ಲೆಲ್ಲೂ ಆ ಪರಮಾತ್ಮನೇ ಕಾಣುತ್ತಾನೆ.

ವಾಚಕರೆ ಅಂತಹ ಅನುಭವವನ್ನು ನಾವೂ ಪಡೆಯುವ ಪ್ರಯತ್ನವನ್ನು ಮಾಡೋಣ.

ವಿಶ್ವ ಲೀಲೆ. ರಸಧಾರೆ – 083

ಮಾನಸವ ಚಿಂತೆವಿಡಿದಂದೊರ್ವನೆರಡಾಗಿ |

ತಾನದಾರೊಳೋ ವಾದಿಸುವನಂತೆ ಬಾಯಿಂ ||

ದೇನನೋ ನುಡಿಯುತ್ತ ಕೈಸನ್ನೆಗೈಯುವನು |

ಭಾನವೊಂದರೊಳೆರಡು – ಮಂಕುತಿಮ್ಮ. ||

ಮಾನಸವ ಚಿಂತೆವಿಡಿದಂದು ಓರ್ವನು ಎರಡಾಗಿ ತಾನು ಅದರಾರೋಳೋ ವಾದಿಸುವವನಂತೆ ಬಾಯಿಂದ ಅದೇನೋ ನುಡಿಯುತ್ತ ಕೈಸನ್ನೆಗೈಯುವನು ಭಾನ ಒಂದರೊಳು ಎರಡು – ಮಂಕುತಿಮ್ಮ.

ಮನಸ್ಸಿಗೆ ಚಿಂತೆ ಹಿಡಿದಾಗ ಹೇಗೆ ಒಬ್ಬನು ತಾನು ಅದ್ಯಾರಲ್ಲೋ ಮಾತನಾಡುವಂತೆ ಏನೇನೋ ಮಾತನಾಡುತ್ತಾ ಕೈಸನ್ನೆ ಮಾಡುತ್ತಾ ಹೋಗುತ್ತಿರುತ್ತಾರೆ. ವ್ಯಕ್ತಿ ಒಬ್ಬರೇ ಆದರೂ ಇಬ್ಬರಂತೆ ಮಾತನಾಡುತ್ತಿರುತ್ತಾರೆ. ಹಾಗೆಯೇ ಒಬ್ಬನೇ ಇರುವ ಬ್ರಹ್ಮನನ್ನು, ಚಿಂತೆಗೀಡಾದ ಮನುಷ್ಯನಂತೆ ಎರಡೆಂದು ಭಾವಿಸುತ್ತಾರೆಂದು ಈ ಕಗ್ಗದಲ್ಲಿ ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ವಾಚಕರೆ, ನಾವು ಹಲವಾರು ಬಾರಿ ನೋಡಿರುತ್ತೇವೆ, ಬಹಳ ಚಿಂತಾಕ್ರಾಂತರಾದ ವ್ಯಕ್ತಿಗಳು ತಮ್ಮತಮ್ಮಲ್ಲೇ ಮಾತನಾಡಿಕೊಳ್ಳುತ್ತಾರೆ. ಕೈಸನ್ನೆಗಳನ್ನೂ ಮಾಡುತ್ತಿರುತ್ತಾರೆ. ತಾವೊಬ್ಬರೇ ಆದರೂ ಬೇರೆ ಯಾರೊಡನೆಯೋ ಮಾತನಾಡುತ್ತಿದ್ದಂತೆ ಭಾಸವಾಗುತ್ತದೆ. ಇಂತಹ ವಿಪರೀತ ವಿಚಿತ್ರವನ್ನು ನಾವು ಇಂದು ದಾರಿಯಲ್ಲಿ ಹೋಗುವಾಗ ಕಿವಿಗೆ ಕಿವಿ ಫೋನ್ ಸಿಕ್ಕಿಸಿಕೊಂಡು ಸೆಲ್ ಫೋನಿನಲ್ಲಿ ಯಾರೊಡನೆಯೋ ಮಾತನಾಡುತ್ತಾ ಕೈ ಕಾಲು ಅಲ್ಲಾಡಿಸುತ್ತಾ ಹುಚ್ಚರಂತೆ ತಿರುಗುವ ಬಹಳಷ್ಟು ಜನರನ್ನು ಕಾಣುತ್ತೇವೆ. ಪಾಪ ಅವರವರ ಒತ್ತಡಗಳೇನೋ ಯಾರಿಗೆ ಗೊತ್ತು. ಹಾಗೆಯೇ ಈ ಇಡೀ ಜಗತ್ತು ಎಲ್ಲ ಆ ಪರಮ ಚೇತನದ ಒಂದೇ ರೂಪವಾದರೂ ಅದು ಬೇರೆ ನಾವು ಬೇರೆ ಎನ್ನುವ ಭಾವದಲ್ಲಿ ಅರ್ಥೈಸುವುದು. ಆ ಪರಮ ವಸ್ತುವನ್ನೇ ಭಾಗಗಳಾಗಿಸಿ ಒಂದರಿಂದ ಇನ್ನೊಂದು ಭಿನ್ನವೆಂದು ಅರ್ಥೈಸುತ್ತಾ ಚಿತ್ರ ವಿಚಿತ್ರ ವ್ಯಾಖ್ಯಾನಗಳನ್ನು ಮಾಡುತ್ತಾ ನಾನು ಮಾಡುವ ವ್ಯಾಖ್ಯಾನವೇ ಸರಿ ಎಂದು ಪ್ರತಿಪಾದಿಸುತ್ತಾ ಮತಿಭ್ರಾಂತರಂತೆ ಇದ್ದಾರೆ ಈ ಲೋಕದಲ್ಲಿ ಜನ ಎಂದು ಪ್ರಸ್ತಾಪಿಸುತ್ತಾರೆ ಈ ಕಗ್ಗದಲ್ಲಿ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ನಾವೂ ಸಹ ಹಾಗೆ, ಸ್ವಲ್ಪ ಮತಿ ಭ್ರಮಣೆಯಾದವರಂತೆ ಎಲ್ಲವೂ ಆ ಪರಮಶಕ್ತಿಯೇ ಆಗಿರುವಾಗ, ಅದು ಬೇರೆ ಬೇರೆ ಎನ್ನುವ ಭಾವನೆಯಿಂದ, ಇದೆಯೋ – ಇಲ್ಲವೋ, ಇದೋ – ಅದೋ, ಒಂದೋ – ಎರಡೋ, ಹೆಣ್ಣೋ – ಗಂಡೋ ಎಂಬ ದ್ವಂದ್ವಗಳಲ್ಲಿ ಸಿಕ್ಕು ತೊಳಲಾಡುತ್ತಿದ್ದೇವಲ್ಲವೇ?. ಆ ಪರಮಾತ್ಮನ ಕಲ್ಪನೆಯಲ್ಲಿ ಇದರಿಂದಲೇ ಹುಟ್ಟಿಕೊಂಡ ಸಾವಿರಾರು ಭೇದಗಳು, ಮತಗಳು ಸಿದ್ಧಾಂತಗಳು. ದ್ವೈತ, ಅದ್ವೈತ, ವಿಶಿಷ್ಟಾದ್ವೈತ, ಮತಬೇಧಗಳು. ” ಶಿವಶ್ಚ ನಾರಾಯಣಃ” ಎಂದು ವೇದ ಹೇಳಿದರೂ, ಶಿವ ಮತ್ತು ವಿಷ್ಣುವಿನಲ್ಲಿ ನಮಗೆ ಭೇಧ , ” ನ ದ್ವಿತೀಯೋಸ್ಥಿ ಕಶ್ಚಿತ್” ಎಂದು ಪ್ರತಿಪಾದಿಸಿದರೂ” ಏಕದ” ಕಲ್ಪನೆ ನಮ್ಮಲ್ಲಿ ಇನ್ನೂ ಸ್ಥಿರವಾಗಿ ಬೇರೂರದೆ ದ್ವಂದ್ವಗಳಲ್ಲಿ ನಾವು ಇನ್ನೂ ಪರದಾಡುತ್ತಿದ್ದೇವೆ.

“ಹಲ”ವಾಗಿ ಕಾಣುವುದನ್ನು “ಒಂದು” ಅಂದು ಅರಿತರೂ ಕಾಣಲು ನಮಗೆ ಜ್ಞಾನ ಪಕ್ವತೆ ಇಲ್ಲ. ಇಂತಹ ಪಕ್ವತೆಯನ್ನು ಬೆಳೆಸಿಕೊಳ್ಳಲು ಸತ್ಯದ ಅರಿವಾಗಬೇಕು, ಅರಿವಾದ ಸತ್ಯವನ್ನು ಒಪ್ಪಿಕೊಳ್ಳಬೇಕು, ಒಪ್ಪಿಕೊಂಡ ಸತ್ಯವನ್ನು ಮನಸ್ಸು ಬುದ್ಧಿಗಳಲ್ಲಿ ಸ್ಥಿರವಾಗಿಸಿಕೊಳ್ಳಬೇಕು. ಹಾಗಾದಾಗ ನಮಗೆ ನಿಸ್ಸಂಶಯವಾಗಿ ಆ ಪರಮಾತ್ಮನ ಸಮಗ್ರ ಚಿತ್ರ ಕಾಣುತ್ತದೆ.

ವಾಚಕರೆ ಅಂತಹ ಪ್ರಯತ್ನವನ್ನು ನಾವು ಮಾಡೋಣವೆ?

ಜೀವ ತಾಂಡವ. ರಸಧಾರೆ – 084

ಅಣು ಭೂತ ಭೂಗೋಳ ತಾರಾಂಬರಾದಿಗಳ |

ನಣಿಮಾಡಿ ಬಿಗಿದು ನಸು ಸಡಿಲವನುಮಿರಿಸಿ ||

ಕುಣಿಸುತಿರುವನು ತನ್ನ ಕೃತಿಕಂತುಕವನದರೊ||

ಳಣಗಿರ್ದು ಪರಬೊಮ್ಮ – ಮಂಕುತಿಮ್ಮ

ಅಣು = ಅತ್ಯನ್ತ ಸಣ್ಣದಾದದ್ದು ಭೂತ = (ಇಲ್ಲಿ) ಬೃಹತ್ತಾದದು, ತಾರಾಂಬರಾದಿಗಳ = ನಕ್ಷತ್ರ ಗಗನಗಳು, ಅಣಿಮಾಡಿ = ಸಿದ್ಧಪಡಿಸಿ, ಬಿಗಿದು = ಒಂದು ಸೂತ್ರದಲ್ಲಿ ಬಂದಿಸಿ, ನಸು = ಸ್ವಲ್ಪ, ಸಡಿಲವನುಮಿರಿಸಿ = ಸಡಿಲವನು ಇರಿಸಿ, ತಿಕಂತುಕವನದರೊಳಣಗಿರ್ದು = ಅವನು ಮಾಡಿದ ಈ ಸೃಷ್ಟಿಯೆಂಬ ಚೆಂಡಿನೊಳಗೆ ತಾನೂ ಸೇರಿಕೊಂಡು.

ಆ ಪರಬ್ರಹ್ಮ ಈ ಜಗತ್ತನ್ನು ಒಂದು ಸೂತ್ರದಲ್ಲಿ ಬಂಧಿಸಿ ಸ್ವಲ್ಪ ಸಡಿಲ ಬಿಟ್ಟು, ತನ್ನ ಕೃತಿಯಾದ ಈ ಜಗತ್ತನ್ನು ಒಂದು ಚೆಂಡು ಎಂದು ಭಾವಿಸಿ, ತಾನೂ ಅದರೋಗೆ ಸೇರಿ ಒಂದು ಸೂತ್ರದಾಟವ ಆಡುತ್ತಿದ್ದಾನೆ ಎಂದು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು, ಈ ಕಗ್ಗದಲ್ಲಿ.

ಒಂದು ಬೃಹತ್ ಜಗತ್ತನ್ನು ತನ್ನ ಸಂಕಲ್ಪದಿಂದಲೇ ಸೃಷ್ಟಿಮಾಡಿ , ಎಲ್ಲದರೊಳಗೂ ಚೇತನಾ ಸ್ವರೂಪವಾಗಿ ತಾನೇ ಸೇರಿಕೊಂಡು ಎಲ್ಲವನ್ನೂ ಒಂದು ಸೂತ್ರದಲ್ಲಿ ಬಂಧಿಸಿದ್ದಾನೆ ಆ ಪರಮಾತ್ಮ ಎನ್ನುವುದೇ ಈ ಕಗ್ಗದ ಹೂರಣ. ನೋಡಿ ನಮ್ಮಲ್ಲಿ ಒಂದು ಆಟಿಗೆ ಸಿಗುತ್ತಗೆ. ಒಂದು ರಬ್ಬರ್ ಚೆಂಡು, ಆ ಚೆಂಡಿನ ತುದಿಗೆ ಒಂದು ರಬ್ಬರ್ ದಾರ. ಆ ದಾರವನ್ನು ಕೈಗೆ ಸಿಕ್ಕಿಸಿಕೊಂಡು ಆ ಚೆಂಡನ್ನು ದೂರ ಎಸೆದಂಗೆ ಮಾಡಿದರೆ, ಅದು ಆ ದಾರ ಎಷ್ಟು ದೂರ ಸಾಗಿ ಹೋಗಬಹುದೋ ಅಷ್ಟು ದೂರ ಹೋಗಿ ಮತ್ತೆ ತನ್ನ ಸ್ವಸ್ಥಾನವನ್ನು ಸೇರುತ್ತದೆ. ಆ ಮಕ್ಕಳ ಆಟ ಹಾಗೆ ಸಾಗಿರುತ್ತದೆ. ಹಾಗೆಯೇ ಈ ಜಗತ್ತನ್ನು ಒಂದು ಕಂದುಕ ಅಂದರೆ ಚೆಂಡಿನಂತೆ ಸೃಷ್ಟಿಮಾಡಿ ಅದಕ್ಕೆ ಚೇತನವೆಂಬ ಸೂತ್ರದಿಂದ ಎಲ್ಲವನ್ನೂ ಬಂಧಿಸಿ ತನ್ನ ಲೀಲಾವಿನೋದದಲ್ಲಿ, ಮಕ್ಕಳು ಚೆಂಡಾಡುವಂತೆ ಆಡುತ್ತಿದ್ದಾನೆ ಆ ಪರಮಾತ್ಮ.

ನಿಜವಿರಬಹುದು. ಏಕೆಂದರೆ ನಮಗೆ ನಮ್ಮ ನಮ್ಮ ಬದುಕಿನಲ್ಲಿ ನಡೆಯುವ ಮತ್ತು ಆಗುವ ವಿಧ್ಯಮಾನಗಳಿಗೆ ತಾರ್ಕಿಕ ವಿವರಣೆಯನ್ನು ನೀಡಲು ನಾವು ಎಷ್ಟು ಸಮರ್ಥರೋ ಎಂದು ಯೋಚಿಸಿದಾಗ ಯಾವುದೂ ಒಂದು ಶಕ್ತಿ ನಮ್ಮ ಎಲ್ಲ ಗತಿ ವಿಧಿಯನ್ನು ನಿಯಂತ್ರಿಸುತ್ತಿದೆ ಎಂದು ಸಾಮಾನ್ಯವಾಗಿ ಅನ್ನಿಸುತ್ತದೆ. ಆದರೆ ಸ್ವಲ್ಪ ಸಡಿಲವನ್ನೂ ಬಿಟ್ಟಿದ್ದಾನೆ, ಎಂದರೆ ಎಲ್ಲ ಪ್ರಾಣಿಗಳಿಗೂ ಸ್ವಲ್ಪ ಸ್ವಾತಂತ್ರ್ಯವನ್ನೂ ನೀಡಿದ್ದಾನೆ ಎಂದು ಅರ್ಥೈಸಬಹುದು. ಆ ಸ್ವಲ್ಪ ಸ್ವಾತಂತ್ರ್ಯವನ್ನು ತನ್ನ ಬುದ್ಧಿಶಕ್ತಿಯಿಂದ ನಾವು ನಮ್ಮನ್ನು ಸನ್ಮಾರ್ಗದಲ್ಲಿ, ಸಂತ ಸಂಗದಲ್ಲಿ ಇಟ್ಟುಕೊಳ್ಳಲು ಪ್ರಯತ್ನ ಪಟ್ಟರೆ, ಅವನ ಸದ್ನಿಯಂತ್ರಣ ಮತ್ತು ನಮ್ಮ ಸದ್ಪ್ರಯತ್ನ ಎರಡರಿಂದ ನಮ್ಮ ಬಾಳೂ ಸ್ವಲ್ಪ ಹಸನಾಗಬಹುದು. ನಮ್ಮನ್ನು ನಾವು ಆ ಪರಮಾತ್ಮನ ಸೂತ್ರದ ಅಂಕೆಯೊಳಕ್ಕೆ ತೊಡಗಿಸಿಕೊಂಡು ಬಿಟ್ಟರೆ ನಮಗೆ ನಿಶ್ಚಿಂತೆ. ಅದು ಬಿಟ್ಟು ನಾವು ಸ್ವತಂತ್ರರು ಅವನು ಸೃಷ್ಟಿಮಾಡಿದಮೇಲೆ, ನಾವು ನಮ್ಮ ಬದುಕನ್ನು ಬದುಕುತ್ತೇವೆ, ಅದರಲ್ಲಿ ಅವನ ಪ್ರಮೆಯವೇನೂ ಇಲ್ಲವೆನ್ನುವವರೂ ಇದ್ದಾರೆ. ಇರಲಿ ಅವರಿಗದು ಪ್ರಿಯ. ನಮಗೇನು ಬೇಕೋ ಅದನ್ನು ಆಯ್ವ ಸ್ವಾತಂತ್ರ್ಯ ನಮಗಿದೆ. ನಮಗಾಗುವ ಪರಿಣಾಮ ನಮ್ಮ ಆಯ್ಕೆ ಮೇಲೆ ಅಧಾರಪಟ್ಟಿರುತ್ತದೆ.

ವಾಚಕರೆ ನಮಗೇನು ಬೇಕೋ ಅದನ್ನು ಆಯ್ದು ಅದರಿಂದ ಬಂದ ಸಾಧಕ ಬಾಧಕಗಳನ್ನು ನಾವು ಅನುಭವಿಸುತ್ತಾ ಅಥವಾ ಆನಂದಿಸುತ್ತಾ ಇರಬಹುದು.

ವಿಶ್ವ ಲೀಲೆ. ರಸಧಾರೆ – 085

ನಭದ ಬಯಲೊಳನಂತ, ಮನದ ಗುಹೆಯೊಳನಂತ |

ಉಭಯದಾ ನಡುವೆ ಸಾದ್ಯಂತ ಜೀವ ಕಥೆ ||

ವಿಭುವೊಬ್ಬನೀ ಗಾಳಿಬುಡ್ಡೆಗಳನೂದುವನು ||

ಹಬೆಗುಳ್ಳೆಯೋ ಸೃಷ್ಟಿ – ಮಂಕುತಿಮ್ಮ ||

ನಭದ = ಆಕಾಶದ, ಬಯಲೊಳನಂತ = ಅಂತವೇ ಇಲ್ಲದ ಬಯಲು, ಮನದ = ಮನಸ್ಸಿನ, ಗುಹೆಯೊಳನಂತ = ಅಂತರಂಗದಲ್ಲೂ ಅಂತವಿಲ್ಲದ ವಿಸ್ತಾರ, ಉಭಯದಾ = ಎರಡರ, ಸಾದ್ಯಂತ = ಆದಿಯಿಂದ ಅಂತ್ಯದವರೆಗೆ, ಜೀವ ಕಥೆ = ಜೀವನದ ಕಥೆ. ವಿಭುವೊಬ್ಬನೀ = ಆ ಪರಮಾತ್ಮನೊಬ್ಬನು, ಹಬೆಗುಳ್ಳೆಯೋ = ಆವಿಯ ಬುಡ್ದೆ.

ಆಕಾಶದ ವಿಸ್ತಾರ ಅನೂಹ್ಯ ಮತ್ತು ಅನಂತ. ಹಾಗೆಯೇ ಜೀವಿಗಳ ಮನಸ್ಸಿನ ಆಳ ಮತ್ತು ವಿಸ್ತಾರಗಳೂ ಸಹ. ಈ ಸೃಷ್ಟಿಯಲ್ಲಿ ಆ ಪರಮಾತ್ಮನಿಂದ ಸೃಷ್ಟಿಸಲ್ಪಟ್ಟ ನಾವುಗಳು ಕೇವಲ ಗಾಳಿಯ ಗುಳ್ಳೆಗಳಂತೆ. ಒಂದು ಆದಿ ಮತ್ತು ಒಂದು ಅಂತ್ಯ ಇವುಗಳ ನಡುವೆ ನಮ್ಮ ಜೀವನದ ಕಥೆ. ಇಡೀ ಸೃಷ್ಟಿಯೇ ಒಂದು ದೊಡ್ಡ ಗಾಳಿಯ ಗುಳ್ಳೆಯಂತೆ ಎಂದು ಒಂದು ಗಹನವಾದ ವಿಚಾರವನ್ನು ಪ್ರಸ್ತಾಪ ಮಾಡುತ್ತಾರೆ ಮಾನ್ಯ ಗುಂಡಪ್ಪನವರು.

ವಾಚಕರೆ, ಈ ಹಿಂದೆಯೂ ಈ ಜಗತ್ ಸೃಷ್ಟಿಯ ವಿಸ್ತಾರದ ಬಗ್ಗೆ ಸೂಕ್ಷ್ಮವಾಗಿ ಹೇಳಲ್ಪಟ್ಟಿದೆ. ಇಡೀ ಸೃಷ್ಟಿಯೇ ಎಷ್ಟು ಅಗಾಧವೆಂದರೆ, ನಮಗೆ ಅದನ್ನು ನೋಡುವುದಿರಲಿ ಊಹಿಸಿಕೊಳ್ಳಲ್ಲೂ ಸಾಧ್ಯವಿಲ್ಲ, ಅಲ್ಲವೇ ಹಾಗೆಯೇ ಜೀವಿಗಳ ಮನಸ್ಸೂ ಸಹ, ಎಂದು ವಿಚಾರ ಪ್ರಸ್ತುತಪಡಿಸುತ್ತಾರೆ ಮಾನ್ಯ ಗುಂಡಪ್ಪನವರು. ಇಲ್ಲಿ ಮಾನವನ ಮನಸ್ಸು ಚಿತ್ರ ವಿಚಿತ್ರವಾದ ಆಲೋಚನೆಗಳನ್ನು ಮಾಡುತ್ತದೆ. ಹಿಂದೆ ನಡೆದ ಅಲ್ಲ ಘಟನೆಗಳನ್ನೂ ಮೆಲುಕು ಹಾಕುತ್ತದೆ. ಮರೆತದ್ದನ್ನು ಜ್ಞಾಪಿಸಿಕೊಳ್ಳಲು ಪ್ರಯತ್ನಿಸುತ್ತದೆ. ಒಂದು ಕ್ಷಣದಲ್ಲಿ ಎಲ್ಲಿಂದ ಎಲ್ಲಿಗೋ ಹೋಗುತ್ತದೆ. ” ಹರಿದಾಡುವಂಥಾ ಮನವ ನಿಲಿಸುವುದು ಬಲು ಕಷ್ಟ ” ಎಂದು ದಾಸರು ಹೇಳಿದ್ದಾರೆ. ಈ ಮನಸ್ಸಿನಲ್ಲಿ, ಈ ಆಕಾಶದಂತೆಯೇ ಅಂತ್ಯವಿಲ್ಲದ ವಿಸ್ತಾರ ಮತ್ತು ವಿಚಾರ ಮಂಥನ ನಡೆದೇ ಇರುತ್ತದೆ.

ಬೃಹದಾರಣ್ಯಕ ಉಪನಿಷತ್ತಿನಲ್ಲಿ ಬ್ರಹ್ಮವಾದಿನಿ ” ಗಾರ್ಗಿ” ಯಾಜ್ಞ್ವವಲ್ಕ್ಯನಿಗೆ ಒಂದು ಪ್ರಶ್ನೆ ಕೇಳುತ್ತಾಳೆ. ” ಅವ್ಯಕ್ತವಾದ “ಆಕಾಶ” ಯಾವುದರಿಂದ ವ್ಯಾಪ್ತವಾಗಿದೆ?” ಎಂದು. ಆ ಪ್ರಶ್ನೆಗೆ ಉತ್ತರವಾಗಿ ಯಾಜ್ಞ್ಯವಲ್ಕ್ಯನು ನೀಡುವ ಉತ್ತರದ ಒಂದೊಂದು ಪದವನ್ನೂ ನಾವು ಗ್ರಹಿಸಿ, ಯೋಚಿಸಿ, ಚಿಂತಿಸಿ, ಮನನ ಮಾಡಿಕೊಳ್ಳಬೇಕಾದರೆ ಒಂದು ದೀರ್ಘ ತಪಸ್ಸೇ ಬೇಕಾಗುತ್ತದೆ. ಅಂದರೆ ಆ ನಭೋಮಂಡಲದ ವಿಸ್ತಾರ ಮತ್ತು ಗೂಢತೆಗಳು ಅಗಾಧ. ಅಷ್ಟೇ ಅಗಾಧ ನಮ್ಮ ಮನಸ್ಸುಗಳೂ ಸಹ ಎನ್ನುತ್ತಾರೆ, ಗುಂಡಪ್ಪನವರು. ಆದರೆ ಎಷ್ಟೇ ಅಗಾಧವಾದರೂ ಒಂದು ಆದಿ ಮತ್ತು ಒಂದು ಅಂತ್ಯವಿರಬೇಕು. ಹಾಗೆ ಒಂದು ಆದಿ ಮತ್ತು ಒಂದು ಅಂತ್ಯದ ನಡುವೆ ನಡೆಯುವುದೇ ನಮ್ಮ ಜೀವನ. ಆದರೆ ಈ ಜೀವನದ ಎಲ್ಲವೂ ಅನಿಶ್ಚಯ. ಎಂದು ಮತ್ತು ಹೇಗೆ ಏನಾಗುವುದೋ, ಏನು ನಡೆಯುವುದೋ, ಹೇಗೆ ಅಂತ್ಯಗೊಳ್ಳುವುದೋ ಎಂದು ನಾವು ಊಹಿಸಲೂ ಸಾಧ್ಯವಿಲ್ಲ. ಇದನ್ನೇ ಗಾಳಿಯ ಗುಳ್ಳೆ ಎನ್ನುತ್ತಾರೆ. ಇದನ್ನೇ ” ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ, ಯಾರಿಗೆ ಯಾರುಂಟು ಎರವಿನ ಸಂಸಾರ” ಎಂದು ಪುರಂದರ ದಾಸರೂ ಸಹ ಹಾಡಿದ್ದಾರಲ್ಲವೇ.

ಹಾಗೆ ನೀರಗುಳ್ಳೆಯಾದ ನಮ್ಮ ನಮ್ಮ ಬದುಕುಗಳನ್ನು ನಾವೇ ಕೈಲಾದಷ್ಟೂ ಸಂತಸದಿಂದ, ಸುಂದರವನ್ನಾಗಿಸಿ ಕೊಳ್ಳಬೇಕು. ಬೇರೆ ದಾರಿಯಿಲ್ಲ. ಈ ಅಂತ್ಯವಿಲ್ಲದ ಆಗಸ ಮತ್ತು ಅದನ್ನೇ ಹೋಲುವ ಅಂತ್ಯವಿಲ್ಲದ ಮನಸ್ಸಿನ ಭಾವದ ಬಗ್ಗೆ ಯೋಚಿಸುತ್ತಾ ನಾವು ಮುಂದಿನ ಕಗ್ಗಕ್ಕೆ ಹೋಗೋಣವೆ?

ಜೀವ ತಾಂಡವ. ರಸಧಾರೆ – 086

ಗಗನ ತಲೆನವಿರಾಗೆಪೆರೆ ತಾರೆಹೂವಾಗೆ |

ಜಗವೆಲ್ಲ ವಪುವಾಗೆ ಮಾಯೆ ಸತಿಯಾಗೆ ||

ನಗುನಗುವ ಬೊಬ್ಬಿಡುವ ಜೀವತಾಂಡವರಸಿಕ |

ಭಗವಂತ ಶಿವರುದ್ರ – ಮಂಕುತಿಮ್ಮ.

ಗಗನ = ಆಕಾಶ ತಲೆನವಿರಾಗೆ= ತಲೆ ಕೂದಲಾಗಲು, ಪೆರೆ = ಚಂದ್ರ, ತಾರೆ = ನಕ್ಷತ್ರಗಳು, ಹೂವಾಗೆ =( ಆ ತಲೆಗೂದಲಿಗೆಮೂಡಿವ) ಹೂವುಗಳಾಗಿ, ಜಗವೆಲ್ಲ ವಪುವಾಗೆ = ಈ ಜಗತ್ತೇ ಆ ಪರಮಾತ್ಮನ ದೇಹವಾಗಿ, ಮಾಯೆ ಸತಿಯಾಗಿ = ಮಾಯೆಯೇ ಅವನ ಪತ್ನಿಯಾಗಿ, ನಗುನಗುವ = ಸಂತಸದಿಂದಿರುವ, ಬೊಬ್ಬಿಡುವ = ಗೋಳಾಡುವ, ಜೀವತಾಂಡವ= ಬಾಳ ಜಂಜಾಟ, ರಸಿಕ ಭಗವಂತ = ಇದನ್ನೆಲ್ಲಾ ನೋಡಿ ಆನಂದಿಸುವ ಪರಮಾತ್ಮ, ಶಿವರುದ್ರ = ಮಂಗಳಕರವಾದ ಶಿವನರೂಪ ಮತ್ತು ಭಯಂಕರವಾದ ರುದ್ರ ರೂಪವೂ ಹೌದು.

ಈ ಜಗತ್ತನ್ನೇ ದೇಹವನ್ನಾಗಿಸಿಕೊಂಡಿರುವ ಆ ಪರಮಾತ್ಮನು ಆಕಾಶವನ್ನು ತನ್ನ ತಲೆ ಕೂದಲಾಗಿಸಿಕೊಂಡು ಚಂದ್ರ ಮತ್ತು ನಕ್ಷತ್ರಗಳನ್ನು ಹೂವಂತೆ ಆ ಕೂದಲಲ್ಲಿ ಮುಡಿದು ಮಾಯೆಯನ್ನು ತನ್ನ ಸತಿಯಾಗಿಸಿಕೊಂಡು ಈ ಜಗತ್ತಿನಲ್ಲಿ ಸಂತೋಷ ಮತ್ತು ದುಃಖವನ್ನು ಸಮವಾಗಿ ಅನುಭವಿಸಿ ಆನಂದಿಸುತ್ತಿದ್ದಾನೆ. ಹಾಗೆ ಅವನು ಶಾಂತ ಶಿವ ಸ್ವರೂಪನೂ ಹೌದು ಮತ್ತು ಭಯಂಕರವಾದ ರುದ್ರ ಸ್ವರೂಪನೂ ಹೌದು ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಈ ಜಗತ್ತೇ ಅವನು. ಇಲ್ಲಿರಿವುದೆಲ್ಲವೂ ಅವನ ಆಭರಣಗಳು. ಆ ಪರಮಾತ್ಮ ನಕ್ಷತ್ರ ಚಂದ್ರ ಸೂರ್ಯ,ಎಲ್ಲವನ್ನೂ ಸೃಷ್ಟಿಮಾಡಿ ಎಲ್ಲವನ್ನೂ ತನ್ನ ಆಭರಣಗಳಂತೆ ತೊಟ್ಟಿದ್ದಾನೆ. ಸಕಲ ಜೀವರಾಶಿಗಳನ್ನು, ಗಿಡ ಮರಗಳನ್ನು ಗಿರಿ ಬೆಟ್ಟಗಳನ್ನು,ನದಿ ಸಮುದ್ರಗಳನ್ನು, ಎಲ್ಲವನ್ನೂ ಸೃಷ್ಟಿಮಾಡಿ ಅದರೊಳಗೆ ತಾನೇ ಇದ್ದು, ಅವುಗಳನ್ನೆಲ್ಲ ಧರಿಸಿ ತಾನು ಸಿಂಗರಿಸಿಕೊಂಡು ನಲಿಯುತ್ತಾ, ಆನಂದವಾಗಿ ಸಂತೋಷವಾಗಿ “ಶಿವ” ರೂಪದಲ್ಲಿಯೂ, ಅವುಗಳೊಂದಿಗೆ ಆಡುವಾಗ, ಬರ, ಭೂಕಂಪ, ಅತೀವೃಷ್ಟಿ ಅನಾವೃಷ್ಟಿಗಳಂತ ಉತ್ಪಾತಗಳನ್ನು ಸೃಷ್ಟಿಸಿ ತನ್ನ ರುದ್ರ ರೂಪದಲ್ಲಿಯೂ ಇದ್ದು ಎಲ್ಲವನ್ನೂ ಮಹಾ ರಸಿಕನಂತೆ ಆನಂದಿಸುತಿದ್ದಾನೆ ಎನ್ನುವುದೇ ಈ ಕಗ್ಗದ ಹೂರಣ.

ಒಟ್ಟಾರೆ ನಮಗೊಂದು ಸಂದೇಶ. ಈ ಜಗತ್ತಿನ ಎಲ್ಲದರಲ್ಲಿಯೂ ಆ ಪರಮಾತ್ಮನನ್ನು ಕಾಣಬೇಕು ಮತ್ತು ಈ ಜಗತ್ತಿನಲ್ಲಿ ನಡೆಯುವ ಎಲ್ಲ ವಿಧ್ಯಮಾನಗಳೂ ಆ ಪರಮಾತ್ಮನ ಲೀಲಾವಿನೋದವೆಂದೇ ತಿಳಿಯಬೇಕು.

ಜೀವತಾಂಡವ. ರಸಧಾರೆ – 087

ಬೆಳೆ ಹೊಳಪು ವಿಕಸನ ವಿಕಾರ ಸಂಭ್ರಮಗಳಲಿ |

ಬೆಳಕು ವೇಗಗಳೆನಿಪ ಕಾಲ ದಿಕ್ಕುಗಳ ||

ಚಲನೆಯಲಿ ವಿಶ್ವಸಂಮೋಹನಗಳೆಲ್ಲವಾ |

ವಿಲಸಿತವು ಬೊಮ್ಮನದು – ಮಂಕುತಿಮ್ಮ ||

ವಿಲಸಿತವು = ಪರಮಾತ್ಮನ ಲೀಲೆ. ವಿಶ್ವಸಂಮೋಹನಗಳೆಲ್ಲವಾ = ವಿಶ್ವದಾಕರ್ಷಣೆಗಳು

ವಿಶ್ವದ ಎಲ್ಲಕ್ಕೂ ಒಂದು ನಿಗಧಿತ ಚಲನೆ ಉಂಟು. ಆ ಚಲನೆಗೆ ಕಾರಣ ಚೇತನ. ಆ ಬೃಹತ್ ಚೇತನದ ಒಂದು ಅಂಶವೇ ಎಲ್ಲಕ್ಕೂ ಚೇತನದ ಮೂಲ. ಒಂದು ಸಣ್ಣ ಬತ್ತದ ಕಾಳು ಭೂಮಿಗೆ ಬಿದ್ದಾಗ, ನೆಲ, ನೀರು, ಬೆಳಕು, ಸೂರ್ಯನ ಶಾಖಗಗಳ ಸಂಪರ್ಕಕ್ಕೆ ಬಂದಾಗ ಮೊಳಕೆಯೊಡೆದು ಸಸಿಯಾಗಿ ತೆನೆಯೋಡೆದು ಒಂದು ಇದ್ದದ್ದು ಹಲವಾಗಿ ಮತ್ತೆ ಮತ್ತೊಂದು ಸೃಷ್ಟಿ ಚಕ್ರಕ್ಕೆ ನಾಂದಿ ಹಾಡುತ್ತದೆ. ಅದಾವ ಶಕ್ತಿ ಆ ಒಂದು ಕಾಳನ್ನು ಮೊಳೆಸಿ ಆ ಭೂಮಿಯಿಂದ ಸತ್ವವನ್ನು ಹೀರಿ ಆ ಸಣ್ಣ ಸಸಿಯ ನರ ನಾಡಿಗಳಿಂದ ಶಿಖರಕ್ಕೆ ತಂದು ಕಿರೀಟದಂತೆ ಆ ತೆನೆಯನ್ನು ತೊಯ್ದಾಡಿಸುತ್ತದೆ. ಎಂತಹ ಅದ್ಭುತ. ಆ ಜಗತ್ತಿನ ಸೃಷ್ಟಿಯೆಲ್ಲವೂ ಅಂತಹ ಅದ್ಭುತಗಳಿಂದಲೇ ತುಂಬಿದೆ.

ಭೂಮಿಯ ಚಲನೆ, ಅದರಿಂದಾಗುವ ಹಗಲು ರಾತ್ರಿಗಳು, ಕಾಲದ ಗಣನೆ, ಸೂರ್ಯ, ಸೂರ್ಯನ ಬೆಳಕು ಮತ್ತು ಶಾಖ, ಪ್ರಾಣಿಗಳ ಮತ್ತು ಗಿಡಮರಗಳ ಮೇಲೆ ಅದರಿಂದಾಗುವ ಪರಿಣಾಮ, ಆ ಪರಿಣಾಮದಿ೦ದಾಗುವ ಬದಲಾವಣೆಗಳು. ಹೀಗೆ ಒಂದುಬಾರಿ ಎಲ್ಲವನ್ನು ಸಮಗ್ರವಾದಿ ಪರಿಕಿಸಿ ಮತ್ತು ಪರೀಕ್ಷಿಸಿ ನೋಡಿದರೆ, ಎಲ್ಲವೂ ಆ ಪರಮಾತ್ಮನ ಲೀಲಾವಿನೋದದ ಪರಿಚಯವಾಗುತ್ತದೆ. ನೋಡುವ ನೋಟ ಮತ್ತು ಮನಸ್ಸಿರಬೇಕಷ್ಟೆ.

ಇಷ್ಟೊಂದು ವೈವಿಧ್ಯವಾದ ಈ ಸೃಷ್ಟಿಯಲ್ಲಿ ಇಲ್ಲದಿರುವುದಿಲ್ಲ. ಎಲ್ಲವನ್ನೂ ಸಮಗ್ರವಾಗಿ ಒಂದಕ್ಕೊಂದು ಹೊಂದಿಕೊಂಡು, ಯಾವುದೂ ನಿರರ್ತಕವೆನಿಸದೆ ಎಲ್ಲವೂ ಸಮರ್ಪಕವಾಗಿದೆ. ಇದರ ಗಾಢತೆ ಮತ್ತು ಗೂಢತೆಯನ್ನು ನೋಡಿದರೆ , ಇಂತಹ ಸಂಕೀರ್ಣ ಸೃಷ್ಟಿಯಿಂದ ನಾವು ಸಂಮೋಹಿತರಾಗದೆ ಇರಲು ಸಾಧ್ಯವೇ ಇಲ್ಲ. ತನ್ನಿಂದಲೇ ಎಲ್ಲವನ್ನೂ ಸೃಜಿಸಿ, ತಾನೂ ಇದರಲ್ಲಿ ಇದ್ದು ಎಲ್ಲವೂ ಬೇರೆ ಬೇರೆಯಾಗಿ ಕಂಡರೂ, ಒಂದೇ ಆಗಿರುವ ಪರಮಾತ್ಮನ ಈ ಜಗತ್ತನ್ನು ಸೃಷ್ಟಿಸುವ ಕಾರ್ಯ ಕುಶಲತೆಯನ್ನು ಕಂಡು ಆನಂದಿಸದೇ ಇರಲು ಸಾಧ್ಯವೇ ಇಲ್ಲ, ಆ ಕುಶಲತೆಯನ್ನು ಎಷ್ಟು ಹೊಗಳಿದರೂ ಅತಿಶಯೋಕ್ತಿಯಾಗಲಾರದು.

ವಾಚಕರೆ ನಾವೂ ಸಹ ಈ ಸೃಷ್ಟಿಯ ಎಲ್ಲವನ್ನೂ ನೋಡುವ, ಅನುಭವಿಸುವ ಆನಂದಿಸುವ, ಮತ್ತು ಆ ಪರಮಾತ್ಮನಿಗೆ ಕೃತಜ್ಞತೆಯನ್ನು ಸಲ್ಲಿಸುವ.

ಜೀವ ತಾಂಡವ. ರಸಧಾರೆ – 088

ಚಲನೆ ವಿಶ್ವಾಸ್ತರಣೆಯದುವೆ ಮಾಯಾಭ್ರಮಣೆ |

ಸಲೆ ಬಗೆಯಲದು ಪರಬ್ರಹ್ಮ ವಿಸ್ಫುರಣೆ ||

ಥಳಥಳಿಕೆ ವಜ್ರದಲಿ ನೈಜವಿರುವಂತೆಯು |

ಜ್ವಲತೆ ಬೊಮ್ಮಗೆ ನೈಜ – ಮಂಕುತಿಮ್ಮ ||

ವಿಶ್ವಾಸ್ತರಣೆಯದುವೆ = ವಿಶ್ವ + ಆಸ್ತರಣೆ + ಅದುವೆ, ಬಗೆಯಲದು= ಬಗೆಯಲು + ಅದು,

ಆಸ್ತರಣೆ = ವಿಸ್ತಾರ, ಮಾಯಾಭ್ರಮಣೆ = ವಿಶ್ವ ಮಾಯೆಯ ತಿರುಗಾಟ, ಸಲೆ = ಸರಿಯಾಗಿ, ಬಗೆಯಲದು = ವಿಚಾರಮಾಡಿದರೆ, ಥಳಥಳಿಕೆ = ಹೊಳಹೊಳಪು ಜ್ವಲತೆ = ಹೊಳಪು, ಬೊಮ್ಮಗೆ = ಬ್ರಹ್ಮನಿಗೆ, ನೈಜ = ಸಹಜ.

ನಿರಂತರ ಚಲನೆಯಲ್ಲಿರುವ ಈ ಜಗತ್ತು ಮತ್ತು ಅದರ ವಿಸ್ತಾರದ ವಿಚಾರ ನಮ್ಮನ್ನು ಭ್ರಮಾಲೋಕಕ್ಕೆ ತಳ್ಳುತದೆ. ಅದನ್ನು ಕೂಲಂಕುಷವಾಗಿ ವಿಚಾರಮಾಡಿ ನೋಡಿದರೆ ಎಲ್ಲೆಲ್ಲೂ ಸಹಜ ಪ್ರಕಾಶದಿಂದ ಪ್ರಾಜ್ವಲ್ಯಮಾನವಾಗಿರುವ ಆ ಪರಮಾತ್ಮ ದರ್ಶನವಾಗುತ್ತದೆ. ಏಕೆಂದರೆ ವಜ್ರಕ್ಕೆ ಹೇಗೆ ಪ್ರಕಾಶವು ಸಹಜ ಗುಣವೋ ಹಾಗೆಯೇ ಆ ಪರಮಾತ್ಮನೂ ತನ್ನದೇ ಪ್ರಕಾಶದಿಂದ ಹೊಳೆಯುತ್ತಿದ್ದಾನೆ ಎಂದು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಜಗತ್ತನ್ನೇ ಬೆಳಗುವ ಆ ಜಗದೀಶನು ಸ್ವಯಂಪ್ರಕಾಶ.ನಮ್ಮನ್ನೂ ಸೇರಿ ಈ ಜಗತ್ತಿನ ಎಲ್ಲವಸ್ತುಗಳೂ ಬೆಳಗಲು ಎರವಲುಪಡೆದ ಬೆಳಕು ಬೇಕು. ಆದರೆ ಅವನೇ ಆದಿಪುರುಷ. ಎಲ್ಲವನ್ನೂ ಬೆಳಗುವವನಾಗಿದ್ದರಿಂದ ಅವನಿಗೆ “ಜಗತ್ಪ್ರಭು” ಎಂದು ಹೆಸರು. ”ಜಗತ್ಪ್ರಭು” ಎಂದರೆ ಜಗತ್ತಿಗೆ ಪ್ರಭೆಯನ್ನು ನೀಡುವವನೂ ಎಂದು ಅರ್ಥೈಸಬಹುದೇನೋ!!. ಇದನ್ನು ಪಂಡಿತರು ವಿಶ್ಲೇಷಿಸಿದರೆ ಚೆನ್ನ. ಸೂರ್ಯನ ಬೆಳಕಿನಿಂದ ಭೂಮಿ ಬೆಳಗುತ್ತದೆ. ಭೂಮಿಯ ಬೆಳಕಿನಿಂದ ಚಂದ್ರನು ಬೆಳುಗುತ್ತಾನೆ. ಆದರೆ ಆ ಸೂರ್ಯ ಚಂದ್ರರಿಗೂ ಬೆಳಕನ್ನು ನೀಡುವ ಅಥವಾ ಬೆಳಗುವ ಶಕ್ತಿಯನ್ನು ನೀಡುವವನೇ ಸ್ವಯಂಪ್ರಕಾಶ.

ಹಾಗೆ ಅವನ ಪ್ರಕಾಶದಿಂದಲೇ ಇಡೀ ಸೃಷ್ಟಿಯೂ ಬೆಳಗುತ್ತಿದೆ. ದೂರದಲ್ಲಿ ಕಾಣುವ ನಕ್ಷತ್ರಗಳು, ಗ್ರಹಗಳು ಕಾಣದ ಎಲ್ಲ ಆಕಾಶಕಾಯಗಳೂ ಮತ್ತು ಬಹು ವಿಸ್ತಾರವಾದ ಈ ಜಗದ್ಪ್ರವಾಹವೂ ಸಹ ಆ ಪರಮ ಶಕ್ತಿಯ ಬೆಳಕಿನಿಂದಲೇ ಬೆಳಗುತ್ತದೆ. ಎಲ್ಲಕ್ಕೂ ಬೆಳಕು ನೀಡುವವನಿಗೆ ಆ ಬೆಳಕು ಎಲ್ಲಿಂದ ಬರುತ್ತದೆ ಎಂದರೆ, ಎಲ್ಲಿಂದಲೂ ಬರುವುದಿಲ್ಲ. ಏಕೆಂದರೆ ಅವನೇ ಬೆಳಕು ಮತ್ತು ಬೆಳಕೇ ಅವನು. ಇದನ್ನು ಮಾನ್ಯ ಗುಂಡಪ್ಪನವರು ಒಂದು ಸೂಕ್ತ ಉಪಮೆಯಿಂದ ವಿವರಿಸುತ್ತಾರೆ. ವಜ್ರಕ್ಕೆ ಹೊಳಪನ್ನು ನೀಡಲಾಗುವುದೇ? ಸಾಧ್ಯವಿಲ್ಲ ಏಕೆಂದರೆ ವಜ್ರವೇ ಹೊಳೆಯುತ್ತದೆ. ಹಾಗೆ ಹೊಳೆ ಹೊಳೆಯುವ ವಜ್ರದಂತೆ ಪರಮಾತ್ಮನೂ ಹೊಳೆಯುತ್ತಾನೆ.

ವಾಚಕರೆ, ಈ ಜಗತ್ತಿನ ವಿಸ್ತಾರ ಮತ್ತು ತಿರುಗಾಟವೆಲ್ಲ ಒಂದು ಮಾಯಾ ಭ್ರಮಣೆಯನ್ನುತ್ತಾರೆ ಶ್ರೀ ಗುಂಡಪ್ಪನವರು. ಈ ಜಗತ್ತಿನ ವಿಸ್ತಾರವನ್ನು ಮತ್ತು ಭ್ರಮಣೆಯನ್ನು ಪರೀಕ್ಷಿಸಿ ನೋಡಿದರೆ ಆ ಪರಮಾತ್ಮನ ಬೆಳಕು ನಮಗೆ ಗೋಚರವಾಗುತ್ತದೆ. ಆದರೆ ಇಲ್ಲಿ ಬೆಳಕು ಅಂದಾಕ್ಷಣ, ಕೇವಲ ಬೆಳಕಲ್ಲ. ಅದನ್ನು ಜ್ಞಾನವೆಂದೂ ಸಹ ಅರ್ಥೈಸಿಕೊಳ್ಳಬೇಕು. ಅದನ್ನೇ ” ಜ್ಞಾನಂದಮಯಂ ದೇವಂ ನಿರ್ಮಲಃ ಸ್ಪಟಿಕಾಕೃತಿಂ ಆಧಾರಂ ಸರ್ವ ವಿಧ್ಯಾನಾಂ ಹಯಗ್ರೀವಮುಪಾಸ್ವ್ಮಹೆ” ಎಂದು ಹಯಗ್ರೀವ ಶ್ಲೋಕದಲ್ಲಿ ಉಲ್ಲೇಖವಾಗಿದೆ. ಹಾಗಾಗಿ ಬೆಳಕೆಂದರೆ ಜ್ಞಾನ. ಪರಮಾತ್ಮನೆಂದರೆ ಜ್ಞಾನ. ಅಂತಹ ಜ್ಞಾನಸ್ವಾರೂಪನಾದ ಪರಮಾತ್ಮನನ್ನು ನಾವು ಆರಾಧಿಸೋಣ.

ರಸಧಾರೆ – 089

ಆದಿದಿವಸವಾವುದೆಂದುಮಿಹ ಜಗಕೆ? |

ಭೋಧನೆಯ ಸುಲಭತೆಗೆ ಸೃಷ್ಟಿಲಯಕಥನ ||

ಪಾದಶಿರಗಳ ಕೂರ್ಮ ಚಾಚಿಕೊಂಡಿರೆ ಸೃಷ್ಟಿ |

ಸೇದಿಕೊಂಡಿರೆ ಲಯವೊ – ಮಂಕುತಿಮ್ಮ. ||

ಆದಿದಿವಸವಾವುದೆಂದುಮಿಹ = ಆದಿದಿವಸವು + ಆವುದು + ಎಂದೆಂದೂ + ಇಹ, ಆದಿದಿವಸ = ಮೊದಲ ದಿವಸ, ಸೃಷ್ಟಿಲಯಕಥನ = ಆದಿ ಮತ್ತೆ ಅಂತ್ಯದ ವಿವರಣೆ. ಪಾದಶಿರಗಳ = ಕಾಲು ಮತ್ತು ಕೈಗಳು , ಸೇದಿಕೊಂಡಿರೆ = ಎಳೆದುಕೊಂಡರೆ.

ಎಂದೆಂದೂ ಇರುವ ಈ ಜಗತ್ತಿಗೆ ಮೊದಲ ದಿನವು ಯಾವುದು ಮತ್ತು ಕೊನೆಯ ದಿನವು ಯಾವುದು? ಅದು ಹಾಗಾಯಿತು, ಇದು ಹೀಗಾಯಿತು ಎಂದು ಸುಲಭವಾಗಿ ವಿವರಿಸಲು ಒಂದು ರೀತಿಯ ವಿವರಣೆಯನ್ನು ನೀಡುತ್ತಾರೆ. ಆಮೆ ತನ್ನ ಕಾಲುಗಳನ್ನು ಹೊರಗೆ ತೆಗೆದರೆ ಸೃಷ್ಟಿ ಒಳಗೆಳೆದುಕೊಂಡರೆ ಲಯವೆನ್ನುವ ರೀತಿ ಎಂದು ಒಂದು ಗಹನವಾದ ವಿಚಾರವನ್ನು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು.

ಈ ಜಗತ್ತು ಅನಾದಿ ಮತ್ತು ಅನಂತ. ಅಂದರೆ ಇದಕ್ಕೆ ಒಂದು ತೊಡಗುವ ಬಿಂದುವೂ (starting point) ಇಲ್ಲ ಅಥವಾ ಕೊನೆಯ ಬಿಂದುವೂ ಇಲ್ಲ. ಮೊದಲೂ ಇತ್ತು ಈಗಲೂ ಇದೆ ಮತ್ತು ಮುಂದೆಯೂ ಇರುತ್ತದೆ. ಆದರೆ ಮೊದಲಿದ್ದಹಾಗೆ ಇಲ್ಲವಲ್ಲ ಎಂದರೆ, ಹೌದು ಒಂದೇ ರೀತಿಯಿರುವುದಿಲ್ಲ . ಬದಲಾಗುತ್ತಲೇ ಇರುತ್ತದೆ. ಒಂದರಿಂದ ಮತ್ತೊಂದು ರೂಪ. ಇಡೀ ಜಗತ್ತೇ ಒಂದು ರೂಪಾಂತರ ಪ್ರಕ್ರಿಯೆ ಎಂದರೆ ಸರಿಯಾಗುವುದೇನೋ. ಪ್ರಕಟವಾಗಿ ನಮಗೆ ಕಂಡರೆ ಸೃಷ್ಟಿ ನಮಗೆ ಕಾಣದೆ ಹೋದರೆ ಲಯ. ಅದಕ್ಕೊಂದು ಉಪಮೆಯನ್ನು ಕೊಡುತ್ತಾರೆ ಮಾನ್ಯ ಗುಂಡಪ್ಪನವರು. ಆಮೆ ಮುಂದಕ್ಕೆ ಸರಿಯಬೇಕಾದರೆ ತನ್ನ ಕಾಲುಗಳನ್ನು ತನ್ನ ಚಿಪ್ಪಿನಿಂದ ಹೊರತೆಗೆದು ನಡೆಯುತ್ತದೆ. ಹೊರತೆಗೆದು ಎಂದರೆ, ಅದು ಅಲ್ಲಿ ಇತ್ತು ಎಂದರ್ಥವಲ್ಲವೇ? ಆಗ ಸೃಷ್ಟಿಯಾಗಲಿಲ್ಲ ಅಲ್ಲವೇ? ಹಾಗೆಯೇ ಅದು ನಿಲ್ಲಬೇಕಾದರೆ ಅಥವಾ ವಿಶ್ರಮಿಸಬೇಕಾದರೆ, ತನ್ನ ಕಾಲುಗಳನ್ನು ಚಿಪ್ಪಿನೊಳಕ್ಕೆ ಎಳೆದುಕೊಳ್ಳುತ್ತದೆ. ನಮಗೆ ಕಾಣದಿದ್ದರೂ ಇದೆ. ಅಂದರೆ ಲಯವಲ್ಲ ಅಲ್ಲವೇ?

ವಾಚಕರೆ, ಗಮನಿಸಿ ಶ್ರೀ ಕೃಷ್ಣ ಭಗವದ್ಗೀತೆಯಲ್ಲಿ ಅರ್ಜುನ ವಿಷಾದಯೋಗದಲ್ಲಿ ” ನೀನು ಯಾರನ್ನೂ ಕೊಲ್ಲುವುದಿಲ್ಲ, ಇಲ್ಲಿ ಯಾರೂ ಸಾಯಿವುದಿಲ್ಲ, ಅವರೂ ಹಿಂದೆಯೂ ಇದ್ದರು ಮುಂದೆಯೂ ಇರುತ್ತಾರೆ, ನೀನು ಶೋಚಿಸತಕ್ಕುದ್ದಲ್ಲ” ಎನ್ನುತ್ತಾನೆ. ಒಂದೇ ಗೋಳವಾಗಿದ್ದ ಪರಮಾತ್ಮವಸ್ತು ಹಲವಾಗಿ ಪ್ರಕಟಗೊಂಡಾಗ ಈ ಜಗತ್ತಿನ ಸೃಷ್ಟಿಯಾಯಿತು ಎಂದು ನಾವು ಕಥನ ಮಾಡುತ್ತೇವೆ. ಅಂದರೆ ಅದು ರೂಪಾಂತರವಷ್ಟೇ. ಒಂದು ರೀತಿಯಲ್ಲಿ ಇದ್ದದ್ದು ನಮಗೆ ಬೇರೆ ರೂಪದಲ್ಲಿ ಕಂಡಿದೆ ಅಷ್ಟೇ. ನಾವೂ ಸಹ ಇಂದೊಂದು ರೂಪ. ನಂತರ ಮತ್ತೆ ಇನ್ನೊದು ರೂಪ. ಆ ಅರ್ಥದಲ್ಲಿ ಹುಟ್ಟು ಸಾವುಗಳೂ ಸಹ ಒಂದು ರೂಪಾಂತರ ಪ್ರಕ್ರಿಯೆಯಷ್ಟೇ ಆಗಲಿ ಯಾವುದಕ್ಕೂ ಒಂದು ಆದಿ ಇಲ್ಲ ಒಂದು ಅಂತ್ಯವೂ ಇಲ್ಲ.

ಇಷ್ಟೊಂದು ಗಹನವಾದ ವಿಷಯವನ್ನು ಸಾಮಾನ್ಯರು ಕೇಳಿದರೂ ಈ ವಿಷಯದ ಸತ್ವವನ್ನು ಅರಿತು ಅರಗಿಸಿಕೊಳ್ಳಲು ಸಾಧ್ಯವಿಲ್ಲವೆಂದು ನಮ್ಮ ಋಷಿಮುನಿಗಳು ಸೃಷ್ಟಿ ಮತ್ತು ಲಯದ ವಿವರಣೆಯನ್ನು ನೀಡಿ ನಮ್ಮ ಪರಿಮಿತ ಅರಿವಿಗೆ ತಿಳಿಸಲು ಪ್ರಯತ್ನಿಸಿದ್ದಾರೆ. ಆದರೆ ಪರಮಾತ್ಮ ಸ್ವರೂಪವಾದ ಈ ಜಗತ್ತು ಅವನಂತೆಯೇ ಅನಾದಿ ಮತ್ತು ಅನಂತ. ನಾವೆಲ್ಲರೂ ಈ ಜಗತ್ತಿನ ಒಂದು ಬದಲಾಗುತ್ತಾ ಇರುವ ಅಣುಗಳು ಮಾತ್ರ.

ವಾಚಕರೆ ನಾವು ಆ ಪರಮಾತ್ಮನ ಅನಂತ ಬೃಹದ್ರೂಪವನ್ನು ಕಾಣುವ, ಅನುಭವಿಸುವ ಮತ್ತು ಆನಂದಿಸುವ.

ರಸಧಾರೆ – 090

ಆವುದಿರುವಿಕೆಗಾದಿ? ಎಂದು ಸೃಷ್ಟಿಯ ಮೊದಲು?

ಆವುದಬ್ಧಿಯ ತೆರೆಗಳಲಿ ಮೊಟ್ಟಮೊದಲು?

ಆವುದೆಲರಿನ ನಿಲ್ಲದಲೆತಕ್ಕೆ ಗಡುಸೀಮೆ?

ಈ ವಿಶ್ವಕಥೆಯಂತು ? – ಮಂಕುತಿಮ್ಮ.

ಆವುದಿರುವಿಕೆಗಾದಿ = ಆವುದು+ಇರುವಿಕೆಗೆ + ಆದಿ, ಆವುದಬ್ಧಿಯ = ಆವುದು + ಅಬ್ದಿಯ, ಆವುದೆಲರಿನ = ಆವುದು + ಎಲರಿನ, ನಿಲ್ಲದಲೆತಕ್ಕೆ = ನಿಲ್ಲದ + ಅಲೆತಕ್ಕೆ, ಇರುವಿಕೆ = ಜೀವನ, ಅಬ್ಡಿ = ಸಮುದ್ರ, ಕಡಲು, ಎಲರು = ಗಾಳಿ, ಪವನ, ಅಲೆತಕ್ಕೆ = ಬೀಸುವಿಕೆಗೆ.

ಈ ಜಗತ್ತಿನ ಇರುವಿಕೆಗೆ ಯಾವುದು ಮೊದಲು? ಈ ಸೃಷ್ಟಿಯ ಮೊದಲು ಎಂದು ಆಯ್ತು? ಸಮುದ್ರದ ಅಲೆಗಳಲ್ಲಿ ಮೊದಲ ಅಲೆ ಯಾವುದು. ನಿರಂತರ ನಿಲ್ಲದೆ ಬೀಸುವ ಗಾಳಿ, ಬೀಸಲು ಎಂದು ಮೊದಲಾಯ್ತು ಮತ್ತು ಅದರ ಎಲ್ಲೆಗಳು ಎಲ್ಲಿವೆ. ಈ ವಿಶ್ವ ಕಥೆ ಎಂತು ಎಂದು ಪ್ರಸ್ತಾಪಮಾಡುತ್ತಾರೆ, ಈ ಕಗ್ಗದಲ್ಲಿ ಮಾನ್ಯ ಗುಂಡಪ್ಪನವರು.

ಈ ಜಗತ್ತಿಗೊಂದು ಆದಿ ಉಂಟೆ.? ಖಂಡಿತ ಇಲ್ಲ. ಇದು ಅನಾದಿ. ಕೋಟಿ ಕೋಟಿ ವರ್ಷಗಳ ಹಿಂದೆ ರೂಪಾಂತರಗೊಂಡು ನಿರಂತರ ಬದಲಾಗುತ್ತಾ ಇರುವ ಈ ವಿಶ್ವಕ್ಕೆ ಆದಿಯಲ್ಲಿದೆ. ಅಂತ್ಯವೆಲ್ಲಿದೆ. ಇದು ಬದಲಾಗುತ್ತಾ ಇದೆ. ಇಷ್ಟೊಂದು ಬೃಹತ್ ವಿಶ್ವದಲ್ಲಿ ಆಗುವ ಬದಲಾವಣೆಗಳು ನಮಗೆ ಎಷ್ಟು ನಿಧಾನವಾಗಿ ಗೋಚರವಾಗುತ್ತದೆ ಎಂದರೆ, ನಮಗೆ ಈ ಬದಲಾವಣೆಗಳು ಅರಿವಿಗೆ ಬರುವುದಿಲ್ಲ. ಸಮುದ್ರದ ನೀರಿನಲ್ಲಿ ಅಲೆಗಳೇಳುತ್ತವೆ. ಆದರೆ ಯಾವ ಅಲೆ ಯಾವ ಸಮಯಕ್ಕೆ ಏಳುತ್ತದೆ ಎಂದು ಹೇಳಲು ಸಾಧ್ಯವೇ ಇಲ್ಲ. ಹಾಗಿರುವಾಗ ಅದರೊಳಗೆ ಮೊದಲ ಅಲೆ ಎಂದು ಎದ್ದಿತು ಎಂದು ಹೇಳಲು ಆಗುತ್ತದೆಯೇ.? ಇನ್ನು ಅದೇ ರೀತಿ ಈ ಭೂಮಿ ಗಾಳಿ ಮತ್ತು ಆಕಾಶದಲ್ಲಿ ನಡೆಯುವ ಬದಲಾವಣೆಯ ಮೂಲವನ್ನು ಹುಡುಕಲು ಸಾಧ್ಯವೇ ಇಲ್ಲ.

ಆದರೆ ಒಂದು ವಿಚಾರ ಗಮನಿಸಬೇಕಾದದ್ದು ಏನೆಂದರೆ, ಎಲ್ಲ ಚಲನೆ ಅಥವಾ ಬದಲಾವಣೆಗೆ ಹೇತುವಾದ ಆ ಬೃಹತ್ ಚೇತನ ಸ್ವರೂಪನಾದ ಪರಮಾತ್ಮನೇ ಎಲ್ಲಕ್ಕೂ ಕಾರಣನು. ಆ ಚೇತನವಿಲ್ಲದೆ ಇದ್ದರೆ ಏನೂ ನಡೆಯುವುದಿಲ್ಲ. ” ತೃಣಮಪಿ ನ ಚಲತಿ ತೆನ ವಿನಾ” ಎಂದು ಇದನ್ನೇ ಆದಿ ಶಂಕರರು ಹೇಳಿದ್ದು. ಅವನ ಸಂಕಲ್ಪ ಎಂದಾಯಿತೋ, ಜಗತ್ಸೃಷ್ಟಿಯ ಪ್ರಕ್ರಿಯೆ ಎಂದು ಶುರು ಮಾಡಿದನೋ ಯಾರಿಗೆ ಗೊತ್ತು. ಇಲ್ಲಿ ಬದಲಾಗುವುದು ಕೇವಲ ಜಗತ್ತಲ್ಲ. ಜಗತ್ತಿನಲ್ಲಿರುವ ಎಲ್ಲವೂ ಬದಲಾಗುತ್ತಾ ಹೋಗುತ್ತದೆ. ವಾಚಕರೆ ನೋಡಿ ಹಿಂದಿನದಾವುದೂ ಇಂದು ಅದೇ ರೂಪದಲ್ಲಿ ಇಲ್ಲ. ಕಲ್ಲು ಬೆಟ್ಟ ಗುಡ್ಡ ಮರಗಳು ಇಂದು ರಸ್ತೆ, ಮನೆ, ಕಿಟಕಿ, ಬಾಗಿಲುಗಳಾಗಿವೆ. ಶುಧ್ಧ ವಾಯು ಮತ್ತು ನೀರುಗಳು ಕಲುಶಿತವಾಗಿವೆ. ಕಾಡು ಕರಗಿ ನಾಡಾಗಿದೆ. ಕಡಿಮೆ ಇದ್ದ ಜನ ಹೆಚ್ಚಾಗಿದ್ದಾರೆ. ಸಹೃದಯತೆಗೆ ಬದಲಾಗಿ ಅಹಂಕಾರ ಸ್ವಾರ್ಥಗಳು ತುಂಬಿಕೊಂಡಿವೆ. ಹೀಗೆ ಬದಲಾಗುವ ಈ ಜಗತ್ತು ಮತ್ತು ಅದರ ಒಳಗುಟ್ಟುಗಳನ್ನು ಅರಿಯಲು ಸಾಧ್ಯವಿಲ್ಲ. ನಾವು ಏನು ಮಾಡಬಹುದೆಂದರೆ, ನಮ್ಮಲ್ಲಿರುವ ವಿವೇಕವನ್ನು ಉಪಯೋಗಿಸಿ, ಸಾಧ್ಯವಾದಷ್ಟು ನಮ್ಮ ಮತ್ತು ನಮ್ಮ ಸುತ್ತಲಿನವರ ಬದುಕು ಹಸನಾಗಿಸಲು ಪ್ರಯತ್ನಿಸಬಹುದು.ಆದರೆ ಒಂದು ವಿಚಾರ ಗಮನಿಸಬೇಕಾದದ್ದು ಏನೆಂದರೆ, ಎಲ್ಲ ಚಲನೆ ಅಥವಾ ಬದಲಾವಣೆಗೆ ಹೇತುವಾದ ಆ ಬೃಹತ್ ಚೇತನ ಸ್ವರೂಪನಾದ ಪರಮಾತ್ಮನೇ ಎಲ್ಲಕ್ಕೂ ಕಾರಣನು. ಆ ಚೇತನವಿಲ್ಲದೆ ಇದ್ದರೆ ಏನೂ ನಡೆಯುವುದಿಲ್ಲ. ” ತೃಣಮಪಿ ನ ಚಲತಿ ತೆನ ವಿನಾ” ಎಂದು ಇದನ್ನೇ ಆದಿ ಶಂಕರರು ಹೇಳಿದ್ದು. ಅವನ ಸಂಕಲ್ಪ ಎಂದಾಯಿತೋ, ಜಗತ್ಸೃಷ್ಟಿಯ ಪ್ರಕ್ರಿಯೆ ಎಂದು ಶುರು ಮಾಡಿದನೋ ಯಾರಿಗೆ ಗೊತ್ತು. ಇಲ್ಲಿ ಬದಲಾಗುವುದು ಕೇವಲ ಜಗತ್ತಲ್ಲ. ಜಗತ್ತಿನಲ್ಲಿರುವ ಎಲ್ಲವೂ ಬದಲಾಗುತ್ತಾ ಹೋಗುತ್ತದೆ. ವಾಚಕರೆ ನೋಡಿ ಹಿಂದಿನದಾವುದೂ ಇಂದು ಅದೇ ರೂಪದಲ್ಲಿ ಇಲ್ಲ. ಕಲ್ಲು ಬೆಟ್ಟ ಗುಡ್ಡ ಮರಗಳು ಇಂದು ರಸ್ತೆ, ಮನೆ, ಕಿಟಕಿ, ಬಾಗಿಲುಗಳಾಗಿವೆ. ಶುಧ್ಧ ವಾಯು ಮತ್ತು ನೀರುಗಳು ಕಲುಶಿತವಾಗಿವೆ. ಕಾಡು ಕರಗಿ ನಾಡಾಗಿದೆ. ಕಡಿಮೆ ಇದ್ದ ಜನ ಹೆಚ್ಚಾಗಿದ್ದಾರೆ. ಸಹೃದಯತೆಗೆ ಬದಲಾಗಿ ಅಹಂಕಾರ ಸ್ವಾರ್ಥಗಳು ತುಂಬಿಕೊಂಡಿವೆ. ಹೀಗೆ ಬದಲಾಗುವ ಈ ಜಗತ್ತು ಮತ್ತು ಅದರ ಒಳಗುಟ್ಟುಗಳನ್ನು ಅರಿಯಲು ಸಾಧ್ಯವಿಲ್ಲ. ನಾವು ಏನು ಮಾಡಬಹುದೆಂದರೆ, ನಮ್ಮಲ್ಲಿರುವ ವಿವೇಕವನ್ನು ಉಪಯೋಗಿಸಿ, ಸಾಧ್ಯವಾದಷ್ಟು ನಮ್ಮ ಮತ್ತು ನಮ್ಮ ಸುತ್ತಲಿನವರ ಬದುಕು ಹಸನಾಗಿಸಲು ಪ್ರಯತ್ನಿಸಬಹುದು.

You may Also Like :

 

Leave a Comment