Mankuthimmana kagga (ಮಂಕುತಿಮ್ಮನ ಕಗ್ಗ ) with meanings 91-100

 

ಪ್ರಪಂಚ ಆಕುಂಚನ. ರಸಧಾರೆ – 091

ಕಮಲವುದಯದೊಳರಳಿ ಸಂಜೆಯಲಿ ಮುಗುಳಾಗಿ |

ಸುಮವಪ್ಪುವುದಂತೆ ಮರುವಗಲು ಮಗುಳ್ದಂತು ||

ಅಮಿತ ಪ್ರಪಂಚನಾಕುಂಚನಾವರ್ತನ |

ಕ್ರಮವೇ ವಿಶ್ವಚರಿತ್ರೆ – ಮಂಕುತಿಮ್ಮ ||

ಕಮಲವುದಯದೊಳರಳಿ = ಕಮಲವು + ಉದಯದೊಳು + ಅರಳಿ, ಸುಮವಪ್ಪುವುದಂತೆ = ಸುಮವು + ಅಪ್ಪುವುದಂತೆ, ಪ್ರಪಂಚನಾಕುಂಚನಾವರ್ತನ = ಪ್ರಪಂಚನ + ಆಕುಂಚನ + ಆವರ್ತನ

ಮುಗುಳಾಗಿ = ಮೊಗ್ಗಾಗಿ, ಸುಮವಪ್ಪುವುದಂತೆ = ಹೂವಾಗುವುದಂತೆ, ಮರುವಗಲು = ಮತ್ತೆ ಹಗಲು, ಅಮಿತ = ಮಿತವಿಲ್ಲದ, ಪ್ರಪಂಚನಾಕುಂಚನಾವರ್ತನ = ಪ್ರಪಂಚದ ಹರಡುವುದು ಸೇರಿಕೊಳ್ಳುವುದು

ಕಮಲದ ಹೂ ಸೂರ್ಯನ ರಶ್ಮಿಗಳು ಸೋಕಿದೊಡನೆ ಅರಳಿ, ಮತ್ತೆ ಸಂಜೆಗೆ ಮೊಗ್ಗಾಗಿ ಮತ್ತೆ ಆ ಮೊಗ್ಗು ಮತ್ತೆ ಸೂರ್ಯನ ರಶ್ಮಿಯ ಸ್ಪರ್ಶದಿಂದ ಅರಳುವಂತೆ ಈ ಅನಂತ ಮತ್ತು ಅಮಿತವಾದ ಪ್ರಪಂಚವೂ ಸಹ ನಿರಂತರವಾಗಿ ಹರಡಿಕೊಳ್ಳುತ್ತಾ ಮತ್ತೆ ಸಂಕುಚಿತಗೊಳ್ಳುತ್ತಾ ಮತ್ತೆ ಮತ್ತೆ ಬಿರಿದುಕೊಳ್ಳುತ್ತಾ ಇದೆ ಎಂದು ಈ ಜಗತ್ತಿನ ವಿಸ್ತಾರತೆಯನ್ನು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಒಂದು ಹುಣಸೆ ಬೀಜ ಸೂಕ್ತ ಪರಿಸರ ಸಿಕ್ಕಾಗ ಒಂದು ಮರವಾಗಿ ವಿಕಸನಗೊಳ್ಳುತ್ತದೆ. ಮೊದಲು ಸಸಿಯಾಗಿ, ಗಿಡವಾಗಿ, ಮರವಾಗಿ ತನ್ನ ಕೊಂಬೆಗಳನ್ನು ನಾಲ್ಕೂ ದಿಕ್ಕುಗಳಲ್ಲಿ ಚಾಚಿಕೊಳ್ಳುತಾ, ಎಲೆ ಹೂ, ಕಾಯಿ ಮತ್ತು ಹಣ್ಣಾಗಿ ಮತ್ತೆ ತನ್ನ ಮೂಲವಾದ ಬೀಜದ ರೂಪದ ಹಲವಾರು ಬೀಜಗಳಿಗೆ ಮೂಲವಾಗುತ್ತದೆ. ಮತ್ತೆ ಆ ಬೀಜವೂ ಮತ್ತೊಂದು ಮರಕ್ಕೆ ಮೂಲವಾಗುತ್ತದೆ. ಇದನ್ನೇ “ಪ್ರಪಂಚನ” ಎಂದರೆ ಹರಡುವಿಕೆ ಮತ್ತು “ಆಕುಂಚನ”, ಅಂದರೆ ಮುದುರಿಕೊಳ್ಳುವಿಕೆ ಎನ್ನುತ್ತಾರೆ ಶ್ರೀ ಡಿ.ವಿ.ಜಿ.

ಇನ್ನೊಂದು ಉದಾಹರಣೆ. ರೇಷ್ಮೆ ಹುಳದ ಜೀವನ ಚಕ್ರವನ್ನು ನೋಡಿ. ಬಹಳ ಸೂಕ್ತ ಉದಾಹರಣೆಯಾಗುತ್ತದೆ. ಸಣ್ಣ ಮೊಟ್ಟೆ ಆಗಿದ್ದು, ಹುಳುವಾಗಿ ಪರಿವರ್ತಿತಗೊಂಡು, ಆ ಹುಳುವು ದೊಡ್ಡದಾಗಿ, ಮಾಗಿ ಹಣ್ಣಾಗಿ, ತನ್ನ ಸುತ್ತ ತನ್ನ ಜೊಲ್ಲಿನಿಂದಲೇ ಒಂದು ಗೂಡನ್ನು ಕಟ್ಟಿ ಅದರೊಳಗೆ ಇರುವಾಗಲೇ ರೂಪ ಪರಿವರ್ತನೆಯಾಗಿ ಒಂದು ಚಿಟ್ಟೆಯಾಗಿ, ಗಟ್ಟಿಯಾದ ಆ ಮೊಟ್ಟೆಯ ಗೋಡೆಯನ್ನು ಸೀಳಿ ಹೊರಬಂದು ಎರಡು ದಿನ ಹಾರಾಡಿ ಮತ್ತೆ ಮೊಟ್ಟೆಗಳನ್ನು ಇಟ್ಟು ತನ್ನ ಜೀವನವನ್ನು ಮುಗಿಸುವ ಮುಂಚೆ ಮತ್ತೊಂದು ಪೀಳಿಗೆಗೆ ನಾಂದಿ ಹಾಡುತ್ತದೆ.

ಈ ಉದಾಹರಣೆಯನ್ನು ನಾವು ಈ ಜಗತ್ತಿನ ಎಲ್ಲಕ್ಕೂ ಅನ್ವಯಿಸಿಕೊಳ್ಳಬಹುದು. ಮನುಷ್ಯನನ್ನೇ ತೆಗೆದುಕೊಳ್ಳಿ. ಒಂದು ಚಿಕ್ಕ ಮಗುವಾಗಿ ಹುಡುಗನಾಗಿ ಬೆಳೆದು ಪ್ರೌಡನಾಗಿ ವಯಸ್ಕನಾಗಿ ವೃದ್ಧನಾಗಿ ಕೃಶನಾಗಿ ಕುಗ್ಗಿ ಮಗುವಿನಂತೆಯೇ ತನ್ನ ಕೆಲಸಗಳನ್ನು ತಾನೇ ಮಾಡಿಕೊಳ್ಳಲಾಗದ ಸ್ಥಿತಿಗೆ ಹೋಗಿ, ಕೆಲವರಂತೂ ಮಕ್ಕಳಂತೆಯೇ ಆಗಿಬಿಡುತ್ತಾರಲ್ಲವೇ? ಇದು ಎಲ್ಲ ಪ್ರಾಣಿ ಪಕ್ಷಿಗಳಿಗೂ ಅನ್ವಯಿಸುತ್ತದೆ.

ವಾಚಕರೆ ಈ ಜಗತ್ತು, ಜಗತ್ತಿನ ಎಲ್ಲವೂ ಅಂದರೆ ಎಲ್ಲವೂ ಈ ರೀತಿಯ ಬಿರಿಯುವಿಕೆ ಮತ್ತ ಮುದುಡುವಿಕೆಯ ಚಕ್ರದನ್ವಯವೇ ನಡೆಯುತ್ತದೆ. ನಾವು ಕೂಲಂಕುಶವಾಗಿ ನೋಡಿದರೆ ಅದರ ಸೂಕ್ಷ್ಮಪರಿಚಯ ನಮಗೆ ಆಗುತ್ತದೆ.

ಪ್ರಪಂಚನ – ಆಕುಂಚನ. ರಸಧಾರೆ – 092

ಎತ್ತಣಿನೋ ದೃಕ್ಪರಿಧಿಯಾಚೆಯಿಂದಲನಂತ |

ಸತ್ವ ತೆರೆತೆರೆಯಾಗಿ ಬೀಸಿ ಗೂಢದಲಿ ||

ಬಿತ್ತರಿಸಿತಿಹುದು ಹೊಸತನವನೆದೆಬಿಡದೆ |

ನಿತ್ಯ ನಿತ್ಯವು ಜಗದಿ – ಮಂಕುತಿಮ್ಮ||

ದೃಕ್ಪರಿಧಿಯಾಚೆಯಿಂದಲನಂತ = ದೃಕ್ + ಪರಿಧಿಯಾಚೆಯಿಂದಲಿ + ಅನಂತ , ಹೊಸತನವನೆದೆಬಿಡದೆ = ಹೊಸತನವನ್ನು + ಎಡಬಿಡದೆ, ಎತ್ತಣಿನೋ = ಎಲ್ಲಿಂದಲೋ, ದೃಕ್ಪರಿಧಿಯಾಚೆಯಿಂದ = ದೃಷ್ಟಿಯ ಪರಿಧಿಯಾಚೆಯಿಂದ, ಸತ್ವ = ಈ ಜಗತ್ತನ್ನು ನಡೆಸುತ್ತಿರುವ ಶಕ್ತಿ. ಗೂಢದಲಿ = ಗುಪ್ತವಾಗಿ, ಬಿತ್ತರಿಸಿಹುದು = ತೋರುತ್ತಿದೆ, ಹೊಸತನವನೆದೆಬಿಡದೆ = ಹೊಸತನವನ್ನು ನಿರಂತರವಾಗಿ.

ನಮ್ಮ ದೃಷ್ಟಿಯ ಪರಿಧಿ ಆಚೆಗಿರುವ ಅನಂತ ವಿಶ್ವದಲ್ಲಿಯ ಯಾವುದೋ ಒಂದು ನಿಗೂಢ ಸತ್ವ ಅಂದರೆ ಒಂದು ಚೇತನ ಅಲೆ ಅಲೆಯಾಗಿ ಹರಿದು, ಹಳತನ್ನು ಮರೆಸಿ ಹೊಸತನ್ನು ಮತ್ತೆ ಮತ್ತೆ ನಿರಂತರವಾಗಿ ತರುತ್ತಿದೆ ಎಂದು ಈ ಜಗತ್ತಿನ “ಪ್ರಪಂಚನ ಮತ್ತು ಆಕುಂಚನ”ದ ತತ್ವವನ್ನು ಪ್ರಸ್ತಾಪಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಈ ಜಗತ್ತನ್ನು ನಡೆಸುವ ಆ ಚೇತನದ ಮೂಲವೆಲ್ಲೋ, ಅದಿರುವ ಸ್ಥಳವಾವುದೋ, ಅದು ತನ್ನ ಕ್ರಿಯೆಯನ್ನು ಹೇಗೆ ನಡೆಸುತ್ತದೆಯೋ, ಅದು ನಮ್ಮ ಕಣ್ಣಿಗೆ ಕಾಣದಿದ್ದರೂ ನಾವೆಲ್ಲರೂ ಅದರ ಪ್ರಭಾವಕ್ಕೆ ಒಳಗಾಗಿದ್ದೇವೆ ಅಲ್ಲವೇ? ಅಂತಹ ಚೇತನವು ತಾನಿರುವ ನಿಗೂಢತೆಯನ್ನು ಬಿಟ್ಟುಕೊಡದೆ, ತನ್ನ ಪ್ರಭಾವವನ್ನು ಇಡೀ ಜಗತ್ತಿಗೆ ಹರಡಿ, ತಾನದರಿಂದ ಬೇರೆಯಾಗಿರದೆ ಎಲ್ಲದರಲ್ಲೂ ತಾನೂ ಇದ್ದು, ಎಲ್ಲವಸ್ತುಗಳ ರೂಪಾಂತರಕ್ಕೂ ಕಾರಣವಾಗಿರುವುದನ್ನು, ನಾವು ಸ್ಪಷ್ಟವಾಗಿ ಕಾಣುತ್ತೇವೆ. ಆದರೆ ನಮ್ಮ ದೈನಂದಿನ ಜೀವನದಲ್ಲಿ ಅದನ್ನು ಗಮನಿಸುವುದಿಲ್ಲ ಮತ್ತು ಅದನ್ನು ನಿಖರತೆಯಿಂದ ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದೂ ಇಲ್ಲ. ಋತುಮಾನಗಳು, ಚಳಿ, ಮಳೆ, ಬಿಸಿಲು, ಹೊಸ ಚಿಗುರು, ಹೂ, ಹಣ್ಣು, ಹೊಸ ಹೊಸ ಜೀವ ಸೃಷ್ಟಿ ಎಲ್ಲವೂ ನಿರಂತರವಾಗಿ ನಡೆಯುವ ಜಗದ್ವ್ಯಾಪಾರವಲ್ಲವೇ ?

“ಬಿತ್ತರಿಸಿತಿಹುದು ಹೊಸತನವನೆದೆಬಿಡದೆ” ಎಡಬಿಡದೆ ಎಂದರೆ ಗ್ಯಾಪ್ ಇಲ್ಲದಹಾಗೆ ಎಂದರ್ಥ. ಈ ಕ್ಷಣವನ್ನು ಮುಂದಿನ ಕ್ಷಣ ನುಂಗಿಬಿಡುತ್ತೆ. ನಮಗೂ ಸಹ ಒಂದು ಕ್ಷಣ ವಯಸಾಗಿಬಿಡುತ್ತೆ, ಅಂದರೆ ಬದಲಾವಣೆ. ಈ ರೀತಿಯ ಬದಲಾವಣೆ ಈ ಜಗತ್ತಿನಲ್ಲಿರುವ ಎಲ್ಲ ವಸ್ತುಗಳಲ್ಲೂ ನಿರಂತರವಾಗಿ ನಡೆದೇ ಇರುತ್ತದೆ. ಪ್ರತಿ ನಿತ್ಯ, ಪ್ರತಿ ಘಳಿಗೆ ನಾವು ನಮ್ಮ ಸುತ್ತಲಿನ ವಸ್ತುಗಳನ್ನು ಯಾಂತ್ರಿಕವಾಗಿ ನೋಡುತ್ತಿರುತ್ತೇವೆ. ಹಾಗಾಗಿ ನಮಗೆ ಅದರಲ್ಲಿ ಆಗುವ ಬದಲಾವಣೆಗಳು ಕಾಣುವುದಿಲ್ಲ. ಒಂದು ಚಿಕ್ಕ ಬೀಜವನ್ನು ನೆಟ್ಟಾಗ ಅದು ಧರೆಯ ಹೊಟ್ಟೆ ಸೀಳಿ ತಲೆ ಎತ್ತಿ ಮೊಳಕೆಯೊಡೆದು ಸಸಿಯಾಗುವುದನ್ನು ನಾವು ನೋಡುತ್ತೇವೆ. ಅದೂ ಸಹ ಪ್ರತಿನಿತ್ಯ ಕ್ರಮೇಣ ನಿಧಾನವಾಗಿ ಆಗುತ್ತದೆ. ಆದರೆ ಅದನ್ನು ನೆಟ್ಟು ಒಂದು ತಿಂಗಳು ನೋಡದೆ ಇದ್ದರೆ, ತಿಂಗಳ ನಂತರ ಒಂದು ಗಿಡವನ್ನೇ ನೋಡಬಹುದು. ಒಂದು ತಿಂಗಲ ಕಾಲದಲ್ಲಿ ಆ ಬೀಜ ಗಿಡವಾಗುವುದಕ್ಕೆ ಆ ಚೇತನ ಕಾರಣವಲ್ಲವೇ ವಾಚಕರೆ.

ಹೀಗೆ ಆ ಚೇತನವು ತನ್ನ ಕಾರ್ಯ ವೈಖರಿಯಲ್ಲಿ ಹಳತನ್ನು ಕ್ರಮೇಣ ಅಳಿಸಿ ಹೊಸತನ್ನು ತರುತ್ತಲೇ ಇರುತ್ತದೆ. ಕೆಲವಲ್ಲಿ ಬೇಗ ಬೇಗ. ಕೆಲವಲ್ಲಿ ನಿಧಾನವಾದ ಪ್ರಕ್ರಿಯೆ. ಆದರೆ ಕ್ರಿಯೆ ಸತ್ಯ. ಆ ಕ್ರಿಯೆ ನಡೆಸುವುದೇ ಆ ಪರಮಾತ್ಮ ಶಕ್ತಿ. ಅಂತಹ ಶಕ್ತಿಗೆ ನಾವು ನಮಿಸುವ ಕೃತಜ್ಞತೆಯನ್ನು ತೋರುವ ಅದನ್ನು ನೋಡುತ್ತಾ ಅದನ್ನು ಕಾಪಾಡುತ್ತಾ, ಆನಂದ ಪಡುವ.

ರಸಧಾರೆ – 093

ಜ್ವಾಲಮಾಲಾಕುಲ ಜಗದ್ರೂಪ ತಾಂಡವದಿ |

ಲೀಲೆಯಿಂ ಜೀವತೆಯನಾಂತು ಪರಬೊಮ್ಮಂ ||

ತಾಳಲಯಮೇಳನದಿನೊಮ್ಮೆ ರಭಸದಿನೊಮ್ಮೆ |

ಲೋಲನಾಗಿರ್ಪನೆಲೋ – ಮಂಕುತಿಮ್ಮ ||

ಜ್ವಾಲಮಾಲಾಕುಲ = ಜ್ವಾಲ + ಮಾಲಾ + ಆಕುಲ, ಜಗದ್ರೂಪ = ಜಗತ್ + ರೂಪ, ತಾಳಲಯಮೇಳನದಿನೊಮ್ಮೆ = ತಾಳ + ಲಯ + ಮೇಳನದಿ + ಒಮ್ಮೆ, ರಭಸದಿನೊಮ್ಮೆ = ರಭಸದಿ + ಒಮ್ಮೆ, ಲೋಲನಾಗಿರ್ಪನೆಲೋ = ಲೋಲನಾಗಿ + ಇರ್ಪನು + ಎಲೋ,

ಜ್ವಾಲೆಗಳ ಮಾಲೆಯಲ್ಲಿ ನಡೆಯುತ್ತಿರುವ ಈ ಜಗತ್ತಿನ ತಾಂಡವ ನೃತ್ಯ. ಇದು ಪರಬ್ರಹ್ಮನಿಗೆ ಒಂದು ಲೀಲಾ ವಿನೋದ. ಕೆಲವೊಮ್ಮೆ ತಾಳ ಲಯ ಮತ್ತು ಮೇಳಗಳೊಂದಿಗೆ, ಶಾಂತವಾಗಿ ಮತ್ತು ಕೆಲವೊಮ್ಮೆ ರಭಸದಿಂದ ತನ್ನ ಭೀಕರ ರುದ್ರ ತಾಂಡವವನ್ನು ಮೆರೆಯುತ್ತಾ ಇರುವ ಆ ಪರಬ್ರಹ್ಮ, ಎಂದು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ವಾಚಕರೆ, ಈ ಹಿಂದೆಯೂ ಒಂದು ವಿಚಾರ ಪ್ರಸ್ತಾಪಿಸಿದ್ದೇನೆ. ಇಡೀ ಸೃಷ್ಟಿಯೇ ನಾನಾ ಅಗ್ನಿ ಗೋಳಗಳ ಒಂದು ಸುಂದರ ಮಾಲೆ. ಆ ಪರಮಾತ್ಮ ತನ್ನಿಂದಲೇ ಸೃಷ್ಟಿಸಿದ ಈ ಜ್ವಾಲೆಗಳ ಗೋಳಗಳ ಮಾಲೆಗಳನ್ನು ತೊಟ್ಟು ಎಲ್ಲೆಲ್ಲೂ ಪ್ರಾಜ್ವಲ್ಯಮಾನನಾಗಿ ವಿರಾಜಿಸುತ್ತಾ ಬೆಳಕಿನಾಟ ಆಡುತ್ತಿದ್ದಾನೆ. ಕೋಟ್ಯಾಂತರ ಅಂತಹ ಅಗ್ನಿ ಅಥವಾ ಜ್ವಾಲಾ ಗೋಳಗಳನ್ನು ಸೃಜಿಸಿ ಅವುಗಳ ಪ್ರಜ್ವಲತೆಗೆ ತಾನೇ ಕಾರಣನಾಗಿ, ಅವುಗಳಲ್ಲಿ ನಾನಾ ವಿಚಿತ್ರಗಳನ್ನು ಸೃಷ್ಟಿಸಿ ಮೆರೆಯುತ್ತಿದ್ದಾನೆ. ಕೆಲವಲ್ಲಿ ಶಾಂತನಾಗಿ ಕೆಲವಲ್ಲಿ ಭೀಕರ ರುದ್ರ ರೂಪದಲ್ಲಿ ತನ್ನ ಲೀಲೆಯನ್ನು ತೋರುತ್ತಿದ್ದಾನೆ. ನಮಗೆ ಗೋಚರವಾಗುವುದು ಮತ್ತು ನಮ್ಮ ಅರಿವಿಗೆ ಬರುವುದು ಅಣು ಮಾತ್ರ. ನಮ್ಮ ಅರಿವಿಗೆ ಬಾರದ, ನಾವು ಊಹಿಸಲೂ ಸಾಧ್ಯವಾಗದ ಅವನ ಲೀಲಾವಿನೋದವೆಷ್ಟೋ?

ನಮಗೆ ಗೊತ್ತಿರುವ ಈ ಭೂಮಿಯನ್ನೇ ನೋಡೋಣ. ಇಲ್ಲಿ ಭೂಮಿಯ ಮೇಲ್ಮೈಯಲ್ಲಿ ಪಂಚ ಭೂತಗಳು, ಬೆಟ್ಟಗಳು, ಕಾಡುಗಳು, ಸಮುದ್ರಗಳು, ತಟಾಕಗಳು, ಕೋಟಿ ಕೋಟಿ ವೈವಿಧ್ಯಮಯ ಜೀವಿಗಳು , ಭೂಮಿಯ ಅಂತರ್ಯದಲ್ಲಿ, ಭೂ ಪದರಗಳು, ಅತಿ ತಾಪದ ಲೋಹಗಳ ನದಿಗಳು, ರಾಸಾಯನಿಕ ವಸ್ತುಗಳು, ಕುದಿಯುವ ನೀರು, ಹೀಗೆ ಏನೋನೋ ಇದೆ. ಇವೆಲ್ಲವೂ ಕೆಲಬಾರಿ ಶಾಂತವಾಗಿ ಮತ್ತೆ ಕೆಲಬಾರಿ ರುದ್ರವಾಗಿ ಪ್ರಕಟವಾಗುತ್ತದೆ. ಇದಕ್ಕೆ ಉದಾಹರಣೆಗಳು, ಕಾಳ್ಗಿಚ್ಚು, ಚಂಡಮಾರುತಗಳು, ಅಗ್ನಿಪರ್ವತಗಳು, ಅತೀ ವ್ರುಷ್ಟಿಗಳು, ಅನಾವ್ರುಷ್ಟಿಗಳು, ದುಷ್ಟ ಜನರು, ದುಷ್ಟ ಪ್ರಾಣಿಗಳು, ಪರಾಧಾರಿ( parasites ) ಕ್ರಿಮಿ ಕೀಟಗಳು, ರುದ್ರರೂಪದಲ್ಲೂ, ಪ್ರಶಾಂತ ಸಾಗರ, ಆಹಾರಕ್ಕೆ ಮೂಲವಾದ ಫಲವತ್ತಾದ ಭೂಮಿ, ನದಿಗಳು ಝರಿಗಳು, ಋತುಮಾನಗಳು, ಸುಗಂಧ ಭರಿತ ಹೂಗಳು, ರಸಭರಿತವಾದ ಹಣ್ಣುಗಳು, ಸಾದು ಪ್ರಾಣಿಗಳು, ಸಾಧು ಜನರು , ಸಂಸ್ಕಾರಗಳು, ಸಾಹಿತ್ಯ ಮತ್ತು ಕಲೆಗಳು , ಪರಸ್ಪರ ಪ್ರೀತಿ ಪ್ರೇಮಗಳು , ಹೀಗೇ ಹೇಳುತ್ತಾ ಹೋದರೆ ಇನ್ನೂ ಎಷ್ಟೋ ಎಲ್ಲವೂ ಪರಮಾತ್ಮನ ಶಾಂತ ರೂಪದಲ್ಲಿ ಪ್ರಕಟವಾಗಿದೆಯಲ್ಲವೇ?

ಬಂಧುಗಳೇ ಎಲ್ಲವೂ ಆ ಪರಮಾತ್ಮನೇ. ರೂಪಗಳು ಹಲವು ನಮಗೆ ಹೇಗೆ ಬೇಕೋ ಹಾಗೆ ಕಾಣುವನು. ನಾವು ನೋಡಬೇಕು ಅಷ್ಟೇ. ಹೇಗೆ ಬೇಕೆಂದರೆ ಹಾಗೆ ಕಂಡಾನು. ಅದೇ ಅವನ ಲೀಲಾ ವಿನೋದ. ಅವನಿಗೆ ಇದೆಲ್ಲವೂ ಒಂದು ಆಟ. ಅವನಾಟದಲ್ಲಿ ಎಲ್ಲವೂ ಅದರದರ ಪಾತ್ರ ನಿರ್ವಹಿಸುತ್ತಿದೆ. ಇದನ್ನು ನಾವು ಶುದ್ಧ ರೂಪದಲ್ಲಿ, ಯತಾವತ್ತಾಗಿ ಅರ್ಥಮಾಡಿಕೊಂಡರೆ ನಮಗೆ ಆ ಪರಮಾತ್ಮ ಸ್ವರೂಪ ಸ್ಪಷ್ಟವಾಗುತ್ತದೆ.

ರಸಧಾರೆ – 094

ಕೇಳಿಯುಂ ಮಾಯೆಯದು ನೃತ್ಯಗತಿ ಬರಿತೋರ್ಕೆ|

ಮೂಲಮಂ ಕಂಡಂಗೆ ಸಂಭ್ರಾಂತಿಯೇನು ||

ಆಳದಲಿ ನಿರ್ಲಿಪ್ತ ಮೇಲೆ ನಿಯತಿಕ್ಲುಪ್ತ |

ಲೀಲಾಪ್ರಿಯಂ ಬ್ರಹ್ಮ – ಮಂಕುತಿಮ್ಮ ||

ಕೇಳಿಯಂ = ಆಟವದು,/ ಮಾಯೆಯದು = ಭ್ರಮೆ./ ನೃತ್ಯಗತಿ = ನಾಟ್ಯದ ರೀತಿ,/ ಬರಿತೋರ್ಕೆ= ಕೇವಲ ತೋರಿಕೆ./ ಮೂಲಮಂ = ಮೂಲವನ್ನು ಕಂಡಂಗೆ ಸಂಭ್ರಾಂತಿಯೇನು = ಕಂಡವನಿಗೆ ಭ್ರಮೆ ಉಂಟೇನು?/ ಆಳದಲಿ ನಿರ್ಲಿಪ್ತ = ಅಂತರ್ಯದಲಿ ಯಾವುದಕ್ಕೂ ಅಂತದ / ಮೇಲೆ ನಿಯತಿಕ್ಲುಪ್ತ= ಹೊರನೋಟಕ್ಕೆ ಒಂದು ನಿಯಮಕ್ಕೆ ಬದ್ಧ.

ಆ ಪರಮಾತ್ಮನ ಆ ಜಗನ್ನಾಟಕ ಕೇವಲ ಮಾಯೆಯಿಂದ ಕೂಡಿದೆ. ಅದರ ನೃತ್ಯ ಬರೀ ತೋರಿಕೆಯಷ್ಟೇ!. ಯಾರಿಗಾದರೂ ಪರಮ ಚೇತನದ ಮೂಲ ರೂಪದ ಅರಿವಾದರೆ ದ್ವಂದ್ವಗಳಾಗಲೀ ಸಂದೇಹಗಲಾಗಲೀ ಇರುವುದಿಲ್ಲ. ಏಕೆಂದರೆ, ತನ್ನ ನಿಜರೂಪದಲ್ಲಿ ಆ ಪರಮಾತ್ಮ ತನ್ನ ಸೃಷ್ಟಿಯಿಂದ ನಿರ್ಲಿಪ್ತ, ಆದರೆ ಈ ಜಗನ್ನಾಟಕದ ಚಿತ್ರ ವಿಚಿತ್ರ ನಾಟ್ಯ ಮತ್ತು ನಡಿಗೆಯನ್ನು ತನ್ನ ವಿನೋದಕ್ಕಾಗಿ ಲೀಲೆಯಂತೆ ನಡೆಸುತ್ತಿದ್ದಾನೆ ಎಂದು ಈ ಕಗ್ಗದಲ್ಲಿ ಪಾನ್ಯ ಗುಂಡಪ್ಪನವರು ವ್ಯಾಖ್ಯಾನಮಾಡಿದ್ದಾರೆ.

ನೋಡಿ ಈ ಜಗತ್ತು ಎಷ್ಟೊಂದು ಸುಂದರ, ನೋಡುವವರಿಗೆ. ಎಷ್ಟೊಂದು ರೂಪಗಳು ಎಷ್ಟೊಂದು ಬಣ್ಣಗಳು ಎಷ್ಟೊಂದು ಭಾವಗಳು ಎಷ್ಟೊಂದು ರಾಗಗಳು. ಎಲ್ಲವೂ ಅವನೇ ಆದರೂ ತಾನು ಯಾವುದೂ ಅಲ್ಲ ” ಅದು ಅದೇ” ಎನ್ನುವ ಭಾವವನ್ನು ಬಿತ್ತಿ ಪ್ರತಿಯೊಂದೂ ಮೂಲದಿಂದ ಬೇರೆಯಾಗಿ ಇದು “ಅದೇ” ಎನ್ನುವಭಾವವನ್ನು ತೋರುತ್ತಾ, ಆ ಪರಮಾತ್ಮ ತನ್ನ ಲೀಲೆಯನ್ನು ಮೆರೆಯುತ್ತಿದ್ದಾನೆ.

ನಾವು ಕಾಣುವ ಜಗತ್ತು, ನಾ ಹಿಂದೆ ಹೇಳಿದಂತೆ ಜಡ ಮತ್ತು ಜೀವ (ಚೇತನ) ದಿಂದಾಗಿದೆ, ಎರಡಕ್ಕೂ ಮೂಲ ಆ ಪರಮ ಚೇತನವೇ! ಆದರೆ ನಾವು ಎಲ್ಲವನ್ನೂ ಬೇರೆ ಬೇರೆಯಾಗಿ ಗುರುತಿಸುತ್ತೇವೆ. ಆಕಾಶ, ಬೆಟ್ಟ, ನದಿ, ಸಮುದ್ರ, ಕಾಡು, ಮರ. ಗಿಡ, ಬಳ್ಳಿ, ಹೂ, ಬಣ್ಣ, ರುಚಿ, ಗುಣ ಸ್ವಭಾವ ಹಾವು, ಚೇಳು ಆನೆ, ಇರುವೆ, ಹಲ್ಲಿ,ಪಕ್ಷಿ, ಪ್ರಾಣಿ, ಮನುಷ್ಯ, ಕ್ರಿಮಿ, ಕೀಟ, ಹೆಣ್ಣು, ಗಂಡು ಮುಂತಾದವುಗಳಾಗಿ ಎಲ್ಲವನ್ನೂ ಅದರ ಬಾಹ್ಯ ಸ್ವರೂಪದಿಂದ ಗುರುತಿಸುತ್ತೇವೆ. ಏಕೆಂದರೆ ನಮ್ಮ ಇಂದ್ರಿಯಗಳಿಗೆ ಗೋಚರವಾಗುವುದು ಕೇವಲ ಬಾಹ್ಯ ರೂಪವಷ್ಟೇ. ಆದರೆ ಈ ಬಾಹ್ಯ ರೂಪಗಳೆಲ್ಲವೂ ಕೇವಲ ತಾತ್ಕಾಲಿಕ ರೂಪಗಳಷ್ಟೇ. ಅಂದರೆ ಅವು ನಿತ್ಯವಲ್ಲ. ನಿತ್ಯವಲ್ಲದಾದ್ದರಿಂದ ಸತ್ಯವಲ್ಲ. ಅಂದರೆ ಅಸತ್ಯ. ಅಸತ್ಯವನ್ನು ಸತ್ಯವನ್ನು ನಂಬುವುದೇ ಮಾಯೆ ಅಥವಾ ಭ್ರಮೆ. ಅಂತಹ ಭ್ರಮೆಗೆ ಕಾರಣನಾದ ಪರಮಾತ್ಮ, ತಾನೂ ಈ ಭ್ರಮೆಯಲ್ಲಿ, ಚೇತನನಾಗಿ ಇದ್ದೂ ಕಾಣದಂಗೆ, ತೋರದಂಗೆ, ಗುರುತಿಸಲ್ಪಡದಂಗೆ ಇದ್ದು ತನ್ನ ಲೀಲಾವಿನೋದವನ್ನು ಮೆರೆದಿದ್ದಾನೆ.

ತೋರಿಕೆಗೆ ಎಲ್ಲದರಲ್ಲಿ ಇದ್ದೇನೆ ಎನ್ನುವ ಭಾವ ಬಿತ್ತಿ, ಯಾವುದರಲ್ಲಿ ಇದ್ದಾನೋ ಅದನ್ನು ನಾಶಪಡಿಸಿ ಕಾಣದಂತೆ ಮಾಯವಾಗುವುದು ಅವನ ಲೀಲಾವಿನೋದವಲ್ಲದೆ ಮತ್ತೇನು ವಾಚಕರೆ, ಆದರೆ ಅವನು “ಆಳದಲಿ ನಿರ್ಲಿಪ್ತ ಮೇಲೆ ನಿಯತಿಕ್ಲುಪ್ತ” ಎಂದಿದ್ದಾರೆ ಗುಂಡಪ್ಪನವರು. ಅಂದರೆ ಮೂಲದಲ್ಲಿ ಅವನು ಯಾವುದಕ್ಕೂ ಅಂಟದೆ ಇದ್ದೂ ಇಲ್ಲದಂಗೆ ಇದ್ದು, ಈ ಜಗನ್ನಾಟಕವನ್ನು ತಾನೇ ರಚಿಸಿದ ಒಂದು ನಿಯಮಕ್ಕೆ ಅನುಸಾರವಾಗಿ ನಡೆಸಿಕೊಂಡು ಹೋಗುತ್ತಿದ್ದಾನೆ. ಅದನ್ನು ನಾವು ಸತ್ಯವೆಂದು ನಂಬಿ ಈ ಪ್ರಪಂಚಕ್ಕೆ ಮತ್ತು ಇದರೊಳಗಿನ ಎಲ್ಲಕ್ಕೂ ಅಂಟಿಕೊಂಡು ತೊಲಳುತ್ತಿದ್ದೇವೆ. ಅದೂ ಸಹ ಅವನ ನಾಟಕದ ನಿರ್ದೇಶನದ ಒಂದು ಭಾಗ. ಮಹಾ ಮಾಯಾವಿ ಅವನು.

ಆದರೆ ಆ ಬೃಹತ್ ಚೇತನದ ಮೂಲರೂಪವನ್ನು ಅರಿತವರಿಗೆ ಸಂದೇಹವಿಲ್ಲದೆ, ಅವನ ಅಂದರೆ ಆ ಪರಮ ಚೇತನದ ನಿಜ ಸ್ವರೂಪ ಅರಿವಿಗೆ ಬಂದರೆ ಭ್ರಾಂತಿ ಭ್ರಮೆಗಳಿಂದ ಹೊರಬರಬಹುದು. ಇಡೀ ಸೃಷ್ಟಿಯ ಸಮಗ್ರತೆಯನ್ನೂ ಮತ್ತು ಏಕತ್ವವನ್ನೂ ನಾವು ಕಾಣಲು ಪ್ರಯತ್ನಿಸಬೇಕು. ನಾವೂ ಈ ರೀತಿಯ ಪ್ರಯತ್ನ ಮಾಡಬಹುದು. ಇಂದಲ್ಲ, ಎಂದೋ ಒಂದು ದಿನ ನಮಗೂ ಅರಿವುಂಟಾಗಬಹುದು.

ರಸಧಾರೆ – 095

ಶ್ಯಾಮಸುಂದರನವನೆ ಚಕ್ರಿ ನರಹರಿಯಂತೆ |

ಸೋಮ ಶಂಕರನೆ ಭೈರವ ರುದ್ರನಂತೆ ||

ಹೈಮವತಿ ಶಿವೆ ತಾನೇ ಕಾಳಿ ಚಂಡಿಕೆಯಂತೆ |

ಪ್ರೇಮ ಘೋರಗಳೊಂದೆ – ಮಂಕುತಿಮ್ಮ ||

ಶ್ಯಾಮಸುಂದರನೂ ಅವನೇ, ಚಕ್ರಹಿಡಿದು, ಶಿಶುಪಾಲನನ್ನು ಅಂತಗೊಳಿಸಿದ ಆ ಶ್ರೀ ಕೃಷ್ಣನೂ ಅವನೇ, ತನ್ನ ಕೈ ಉಗುರುಗಳಿಂದ ಹಿರಣ್ಯಕಶಿಪುವನ್ನು ಕೊಂದ ನರಹರಿ ರೂಪದ ನರಸಿಂಹನೂ ಅವನೇ.

ಸೌಮ್ಯ ರೂಪದ ಚಂದ್ರ ಶೇಖರನೂ ಅವನೇ, ಉಗ್ರರೂಪದ ಭೈರವನೂ, ರುದ್ರನೂ ಅವನೇ. ಸ್ತ್ರೀ ರೂಪಧರಿಸಿ ಹಿಮವಂತನ ಮಗಳಾದ ಪಾರ್ವತಿಯೂ ಅವನೇ, ಉಗ್ರರೂಪದ ಕಾಳಿ ಚಂಡಿಕೆಯೂ ಅವನೇ.

ಹೀಗೆ ಪರಮಾತ್ಮ, ಪುರುಷ, ನರ, ಸಿಂಹ, ಸೌಮ್ಯ ಶ್ಯಾಮನ ರೂಪ ಮತ್ತು ಸ್ತ್ರೀ ರೂಪದಲ್ಲಿಯೂ, ಶಾಂತ, ಮತ್ತು ಪ್ರೇಮ ರೂಪಗಳಲ್ಲಿಯೂ, ಘೋರ ಮತ್ತು ರುದ್ರ ರೂಪದಲ್ಲಿಯೂ ಪ್ರಕಟಗೊಂಡಿದ್ದಾನೆ ಎಂಬುದು ಈ ಕಗ್ಗದ ಹೂರಣ.

ಹಾಗಾದರೆ ಅವರು ಬೇರೆ ಇವರು ಬೇರೆ ಅಲ್ಲವೇ ಎಂದರೆ, ಖಂಡಿತ ಅಲ್ಲ. ಒಂದು ಪರಮ ಶಕ್ತಿ ಹಲವಾರು ರೂಪಗಳನ್ನು ಸಮಯಕ್ಕೆ ಸರಿಯಾಗಿ ಸಂದರ್ಭಕ್ಕೆ ಸರಿಯಾಗಿ ಧರಿಸಿ ತನ್ನ ಲೀಲೆಯನ್ನು ಮೆರೆಯುತ್ತದೆ. ಈ ರೀತಿಯ ಲೀಲಾ ವಿನೋದವನ್ನು ನಾ ಹಿಂದಿನ ಕಗ್ಗದ ವಿವರಣೆಯಲ್ಲೂ ನೀಡಿದ್ದೇನೆ. ಇದಕ್ಕೆ ಪೂರಕವಾಗಿ ವೇದ ಮತ್ತು ಉಪನಿಷತ್ತಿನಲ್ಲೂ ಉಲ್ಲೇಖವುಂಟು. ” ನಾರಾಯಣ ಸೂಕ್ತದಲ್ಲಿ” , ” ಶಿವಶ್ಚ ನಾರಾಯಣಃ, ಶಕ್ರಸ್ಚ ನಾರಾಯಣಃ” ಎಂದು ಹೇಳಲ್ಪಟ್ಟಿದೆ. ಅಂದರೆ ಆ ಪರಮ ಶಕ್ತಿಯೇ ಎಲ್ಲ ರೂಪಗಳೂ ಎಂದು ಸಿದ್ಧವಾಗುತ್ತದೆ. ವೇದಗಳಲ್ಲಿ ಅತೀ ಪುರಾತನವಾದ ಋಗ್ವೇದದ ” ಪುರುಷ ಸೂಕ್ತದಲ್ಲಿ” “ಸ ಬ್ರಹ್ಮ್ಹಃ, ಸ ಶಿವಃ, ಸ ಹರಿಃ, ಸೇದ್ರಃ, ಸೋಕ್ಷರಃ ಪರಮಸ್ವರಾಟ್” ಎಂದು ಹೇಳಲ್ಪಟ್ಟಿದೆ. ಆದರೆ ಎಲ್ಲ ರೂಪಗಳೂ ಆ ಪರಮ ಪುರುಷನೇ ಧರಿಸಿ ನಮಗೆ ತನ್ನ ಭಿನ್ನತೆಯನ್ನೂ,ಸಾರ್ವಭೌಮತ್ವವನ್ನೂ, ಏಕತೆಯನ್ನೂ ತೋರಿದ್ದಾನೆಂದು ಅರ್ಥವಲ್ಲವೇ?

ಶ್ರೇಷ್ಠ ಭಗವದ್ಭಕ್ತರ ಲಕ್ಷಣವನ್ನು ಹೇಳುವಾಗ ” ಶಿವೇ ಚ, ಪರಮೇಶೇ ಚ, ವಿಷ್ಣೌ ಚ ಪರಮಾತ್ಮನಿ ಸಮಬುದ್ಧ್ಯಾ ಪ್ರವರ್ತಂತೆ ತೇವೈ ಭಾಗವತೋತ್ತಮಾಃ” ಎಂದು ಹೇಳಲ್ಪಟ್ಟಿದೆ. ಅಂದರೆ ಯಾರು ಶಿವ ಮತ್ತು ವಿಷ್ಣು ಎಂದು ಬೇಧ ಮಾಡದೆ ಎರಡು ರೂಪದಲ್ಲೂ ಸಮ ಬುದ್ಧಿಯನ್ನುಮತ್ತು ಸಮಭಾವವನ್ನು ಪ್ರದರ್ಶಿಸುತ್ತಾರೋ ಅವರೇ ಶ್ರೇಷ್ಠ ಭಾಗವತರು ಎಂದು ಹೇಳಿದೆ.

ವೇದವೇ ಪ್ರಮಾಣ ಎಂದು ಎಲ್ಲರೂ ಒಪ್ಪಿಕೊಳ್ಳುತ್ತಾರೆ, ವೇದವು ಸತ್ಯವೆಂದೂ ಒಪ್ಪಿಕೊಳ್ಳುತ್ತಾರೆ. ಆದರೂ ನಾವು ವೈಷ್ಣವರು ನಾವು ಶೈವರು, ಇವರು ನಮ್ಮ ದೇವರು ಅವರು ನಿಮ್ಮ ದೇವರು, ನಾವು ನಾಮ ಹಾಕಿಕೊಳ್ಳುತ್ತೇವೆ, ನೀವು ವಿಭೂತಿ ಹಚ್ಚಿಕೊಳ್ಳಿ, ಅವರು ಮುದ್ರೆ ಹಾಕಿಕೊಳ್ಳಲಿ ಎಂದು ಆ ಪರಮಾತ್ಮನಲ್ಲಿ ಇಲ್ಲದ ಬೇಧವನ್ನು ಸೃಷ್ಟಿಮಾಡಿ ನಮ್ಮ ನಮ್ಮೊಳಗೇ ಕಿತ್ತಾಡುವುದು ಕೇವಲ ಅಜ್ಞಾನವಲ್ಲವೇ?

ನಾವು ಇಂಥಹ ಅಜ್ಞಾನಕ್ಕೆ ಬಲಿಯಾಗದೆ ಏಕ ರೂಪದ ಆ ಪರಮ ಚೇತನವನ್ನು ಆರಾಧಿಸುತ್ತಾ ನಮ್ಮಲ್ಲಿರುವ ಬೇಧಗಳನ್ನುಅಳಿಸುವ ಪ್ರಯತ್ನವನ್ನು ಮಾಡುವ.

ರಸಧಾರೆ – 096

ಸತ್ಯವೆಂಬುದದೇನು ಬ್ರಹ್ಮಾಂಡ ತಾಂಡವದಿ |

ನೃತ್ಯವೇ ಸತ್ಯವಲ ಕಡಲಲೆಯಬಾಳೊಳ್ ||

ಮಿಥ್ಯೆಯಂಬುದೆ ಮಿಥ್ಯೆ ಜೀವನಾಟಕ ಸತ್ಯ |

ಕೃತ್ಯವಿದು ಬೊಮ್ಮನದು – ಮಂಕುತಿಮ್ಮ. ||

ಇಡೀ ಬ್ರಹ್ಮಾಂಡದ ಶಾಂತ ಮತ್ತು ರುದ್ರ ತಾಂಡವದಿ, ಸತ್ಯ ಎಂಬುದು ಆವುದು. ನಮಗೆ ನಾವು ನಡೆಸುವ ಕಡಲ ಅಲೆಯಂಥಾ ಜೀವನವೇ ಸತ್ಯವಲ್ಲವೇ? ಮಿಥ್ಯೆ ಎಂಬುದು ಇಲ್ಲವೇ ಇಲ್ಲ ಈ ಜೀವನದ ನಾಟಕದಲ್ಲಿ. ಇದೆಲ್ಲವೂ ಆ ಪರಬ್ರಹ್ಮನಾಡುವ ಜಗನ್ನಾಟಕವೆನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಕಡಲ ಅಲೆಯಂಥಾ ಜೀವನವೆನ್ನುತ್ತಾರೆ. ಹೌದು ಕಡಲ ಅಲೆಯಂತೆ ನಮ್ಮ ಜೀವನ ಎಂದು ಮೊದಲಾಯಿತು ಎಂದು ಹೇಳುವುದು ಕಷ್ಟವಷ್ಟೇ ಅಲ್ಲ ಅಸಾಧ್ಯವೂ ಹೌದು. ಆ ಕ್ಷಣಕ್ಕೆ ನಮಗೆ ಕಾಣುವ ಆ ಕಡಲ ಅಲೆ ಸತ್ಯ. ಹಾಗೆಯೇ ಇಂದು ನಾವು ನಡೆಸುತ್ತಿರುವ ಜೀವನ ಸತ್ಯ. ಮಿತ್ಯಾವದವೆನ್ನುವುದು ಒಂದು ಉಂಟು . ಜಗತ್ ಮಿಥ್ಯಾ ಎನ್ನುವ ಸಿದ್ಧಾಂತವನ್ನು ಪ್ರತಿಪಾದಿಸುವವರು ಇದ್ದಾರೆ. ಇದು ನಿತ್ಯವಲ್ಲವಾದ್ದರಿಂದ ಸತ್ಯವಲ್ಲ ಎನ್ನುವವರು ಹಲವರು. ಆದರೆ ಒಂದು ವಿಚಾರವನ್ನು ಗಮನಿಸ ಬೇಕಾಗಿದೆ. ನಾವು ಇರುವುದು ಇಂದಿಗೆ ಸತ್ಯ. ಹೌದಲ್ಲವೇ. ಎಂದೋ ಇಲ್ಲವಾಗಬಹುದು. ಆದರೆ ಇಂದಿನ ಜೀವನ ಸತ್ಯ. ಇದಕ್ಕೆ ಕಾರಣವೂ ಸತ್ಯ. ಹಾಗಿದ್ದಮೇಲೆ ಮಿಥ್ಯೆ ಹೇಗಾಗುತ್ತದೆ?

ಸಮುದ್ರದ ಅಲೆಗಳು ವಾಸ್ತವವಾಗಿ ಕೆಲಕ್ಷಣಗಳೇ ಇದ್ದು ಮಾಯವಾಗಿಬಿಡುತ್ತದೆ. ಅದನ್ನು ಮಿಥ್ಯೆ ಎನ್ನಲಾದೀತೇ. ಅದು ಸಮುದ್ರ ಮಟ್ಟದಿಂದ ಎದ್ದ ಆ ಕ್ಷಣಕ್ಕೆ ಸತ್ಯವಲ್ಲವೇ? ಹಾಗೆಯೇ ಕ್ಷಣ ಬಂಗುರವಾದ ನಮ್ಮ ಜೀವನವೂ ಸಹ ಕೆಲಕಾಲ ಇದ್ದು ನಂತರ ಇಲ್ಲದೆ ಹೋಗುವುದಾದರೂ ಇರುವಷ್ಟು ದಿನ ಇದು ಸತ್ಯ ತಾನೇ? ಯಾರಿಗೋ ಬಿದ್ದು ಪೆಟ್ಟಾಗಿದೆ, ರಕ್ತ ಸುರಿಯುತ್ತಿದೆ. ಆಗ ಅವನಿಗೆ ನಾವು ವೇದಾಂತವನ್ನು ಹೇಳಿ ” ಏ ಚಿಂತೆ ಮಾಡಬೇಡ ಈ ಪೆಟ್ಟು ಸತ್ಯವಾಗಿ ನಿನಗಾಗಿಲ್ಲ. ಏಕೆಂದರೆ ನೀನು ಎನ್ನುವುದೇ ಮಿಥ್ಯೆ. ಹಾಗಾಗಿ ನಿನಗಾಗಿರುವ ಪೆಟ್ಟೂ ಸಹ, ಇಲ್ಲಿ ಹರಿಯುತ್ತಿರುವ ನೆತ್ತರೂ ಸಹ ಮಿಥ್ಯೆ” ಎಂದರೆ ನಿಮ್ಮನ್ನು ಹುಚ್ಚನೆಂದು ಕರೆಯುತ್ತಾರೆ. ಲೌಕಿಕ ಬೇರೆ ಪಾರಮಾರ್ಥ ಬೇರೆ. ಲೌಕಿಕದಲ್ಲಿ ಎಲ್ಲವೂ ಸತ್ಯ. ಪಾರಮಾರ್ಥ್ಯದಲ್ಲಿ ಪರಮಾತ್ಮ ಮಾತ್ರ ಸತ್ಯ.

ಲೌಕಿಕ ಎನ್ನುವುದು ಸಕಲ ಜೀವರಾಶಿಗಳ ಇಲ್ಲಿನ ಜೀವನ. ಪಾರಮಾರ್ಥಿಕ ಎನ್ನುವುದು ಇಲ್ಲಿನ ಈ ಜೀವನವನ್ನು ಶಾಂತವಾಗಿಸುವ, ಆನಂದವಾಗಿಸುವ ಒಂದು ಸಾಧನ. ಇವೆರರ ಸಮನ್ವಯವೇ ನಮ್ಮ ಜೀವನಗಳ ತಳಹದಿಯಾಗಬೇಕು. ಹಾಗಾದಲ್ಲಿ ನಮ್ಮ ಜೀವನ ಸುಂದರವಾಗುವುದು. ವಾಚಕರೆ ನಮ್ಮ ಲೌಕಿಕ ಬದುಕೂ ಪರಮಾರ್ಥದ ತಳಹದಿಯಲ್ಲೇ ನಡೆದರೆ ನಾವು ಈ ಬದುಕಿಗೆ ನೀಡುವ ಮಹತ್ವ ಮತ್ತು ನಮ್ಮ ಈ ಬದುಕಿನೊಂದಿಗೆ ಇರುವ ಗಟ್ಟಿ ಅಂಟಿನಂತ ನಂಟು ಕಡಿಮೆಯಾಗಿ ನಮಗೆ ನೋವು ಕಡಿಮೆಯಾಗಬಹುದು. ಇಂತಹ ಪ್ರಯತ್ನವನ್ನು ನಾವೂ ಮಾಡಲುಪಕ್ರಮಿಸುವ.

ಬ್ರಹ್ಮವೇ ಜೀವನವೋ?. ರಸಧಾರೆ – 097

ಬ್ರಹ್ಮವೆಂಬುದುದದೇನು? ಕರ್ಮವೆಂಬುದದೇನು?|

ಬ್ರಹ್ಮಾಂಡಕಥೆಯೇನು? ಜೀವಿತವಿದೇನು?||

ಬ್ರಹ್ಮವೆಲ್ಲಕು ಮೂಲ ಮಾಯೆ ತತ್ಕ್ರುತಿಜಾಲ |

ಬ್ರಹ್ಮವೇ ಜೀವನವೋ ? ಮಂಕುತಿಮ್ಮ ||

ಈ ಕಗ್ಗದಲ್ಲಿ ಮಾನ್ಯ ಗುಂಡಪ್ಪನವರು ಈ ಬ್ರಹ್ಮ ಎಂಬುದು ಏನು? ಕರ್ಮ ಎಂಬುದು ಏನು? ಈ ಬ್ರಹ್ಮಾಂಡದ ಕಥೆ ಏನು ? ನಮ್ಮ ಜೀವನವು ಏನು ? ಈ ಜೀವನವು ಜಗತೀಗೆಲ್ಲಕ್ಕೂ ಮೂಲವಾದ ಆ ಬ್ರಹ್ಮನ ಕ್ರಿಯೆಯಾದಂತ ಒಂದು ಮಾಯಾಜಾಲವೋ? ಆದರೆ ಬ್ರಹ್ಮನೇ ಜೀವನವೋ? ಎಂದು ಒಂದು ಮಹತ್ತರ ವಿಷಯವನ್ನು ಪ್ರಸ್ತಾಪಿಸುತ್ತಾರೆ.

ಬ್ರಹ್ಮ ಎಂದರೆ ಯಾರು ಅಥವಾ ಏನು ಎಂದರೆ, ಸಕಲ ಚರಾಚರ ಸೃಷ್ಟಿಗೆ ಕಾರಣನಾದ ಆ ಪರಮ ಚೇತನಕ್ಕೆ ಬ್ರಹ್ಮನೆಂದು ಹೆಸರು. ಭಾರತೀಯ ಪುರಾಣಗಳಲ್ಲಿ ತ್ರಿಮೂರ್ತಿಗಳ ಪ್ರಸ್ತಾಪ ಬರುತ್ತದೆ. ಬ್ರಹ್ಮ ವಿಷ್ಣು ಮಹೇಶ್ವರ ಎಂದು. ಸೃಷ್ಟಿ ಸ್ಥಿತಿ ಲಯಗಳೆಂಬ ಕಾರ್ಯಗಳನ್ನು ಹಂಚಿಕೊಂಡಿದ್ದಾರೆ ಎಂದು ಹೇಳಲ್ಪಟ್ಟಿದೆ. ಹೇಗೆ ಒಬ್ಬನೇ ವ್ಯಕ್ತಿ ತಂದೆ, ಪತಿ, ಅಣ್ಣ, ತಮ್ಮ ಮಗ ಮುಂತಾದ ಹೆಸರುಗಳಿಂದ ಮನೆಯಲ್ಲಿ ಗುರುತಿಸಲ್ಪಡುತ್ತಾನೋ ಮತ್ತೆ ಹೊರಗೆ ಸ್ನೇಹಿತ, ಅಧಿಕಾರಿ ನೌಕರ, ಮುಂತಾದ ಹೆಸರುಗಳಿಂದ ಕರೆಯಲ್ಪಡುತ್ತಾನೋ, ಹಾಗೆಯೇ ಒಂದೇ ಬೃಹತ್ ಚೇತನವು ಹಲವಾರು ಬಗೆಯ ಕಾರ್ಯನಿರ್ವಣೆಯನ್ನು ಮಾಡುತ್ತಾ ಹಲವಾರು ಹೆಸರುಗಳಿಂದ ಕರೆಯಲ್ಪಡುತ್ತದೆ. ಯಾರು ಯಾವುದೇ ಹೆಸರಿಂದ ಕೆರೆದರೂ ಆ ಮಹಾ ಚೇತನವೇ ಪರಬ್ರಹ್ಮ. ಅದರ ಕಾರ್ಯವೈಖರಿಯೇ ಕರ್ಮ. ಕರ್ಮವೆಂದರೆ ಕ್ರಿಯೆ. ಲೌಕಿಕ ಪ್ರಪಂಚದಲ್ಲಿ ನಾವು ಹೇಳುವ ಕರ್ಮವೇ ಬೇರೆ. ಇಲ್ಲಿ ಹೇಳಿರುವ ಕರ್ಮವೇ ಬೇರೆಯಾಗಿ ಕಂಡರೂ ಎರಡನ್ನೂ ಕೂಲಂಕುಷವಾಗಿ ಅವಲೋಕಿಸಿದರೆ ಇವೆರಡರ ಏಕತ್ವವನ್ನು ನಾವು ಮನಗಾಣಬಹುದು.

ಇಡೀ ಬ್ರಹ್ಮಾಂಡವೆ ಅವನ ಸೃಷ್ಟಿ ಆದರೆ ಅದರ ಕಥೆಯ ಆದಿಯೂ, ಅಂತ್ಯವೂ ಯಾರಿಗೂ ತಿಳಿದಿಲ್ಲ. ಎಷ್ಟೆಷ್ಟೋ ವ್ಯಾಖ್ಯಾನಗಳಿದ್ದರೂ ” ಇದಮಿತ್ಥಂ ” ಎಂದು ಹೇಳುವ ಯಾವುದೇ ಒಂದು ನಿಖರವಾದ ತೀರ್ಮಾನ ಬಂದಿಲ್ಲ. ಇನ್ನು ಜೀವನವೆಂದರೇನು? ಎಂದರೆ. ಈ ಸೃಷ್ಟಿಯ ಎಲ್ಲಕ್ಕೂ ಒಂದು ಕಾಲಮಾನ ಉಂಟು ಆ ಕಾಲಮಾನದಲ್ಲಿ ಆಯಾಯಾ ಕಾಯಗಳ ಸಂಪರ್ಕದಿಂದ ನಡೆಯುವ ವಿಧ್ಯಮಾನಗಳೇ ಜೀವನವು.

ಆ ಪರಬ್ರಹ್ಮವೇ ಇಡೀ ಸೃಷ್ಟಿಗೆ ಮೂಲ ಮತ್ತು ಆ ಪರಬ್ರಹ್ಮನ ಕೃತಿಯೇ ಈ ಜಗತ್ತಿನ ಮಾಯಾ ಜಾಲ, ಎಂದಿದ್ದಾರೆ ಡಿ.ವಿ.ಜಿ. ಅಂದರೆ ಇಡೀ ಬ್ರಹ್ಮಾಂಡವೇ ಆ ಪರಮ ಪುರುಷನ ಕ್ರಿಯೆಯಂದಾದಮೇಲೆ ಇಲ್ಲಿ ನಡೆಯುವ ಎಲ್ಲ ವಿಧ್ಯಮಾನಗಳೂ ಅವನ ಕ್ರಿಯೆ ಅಂದರೆ ಕರ್ಮ ಎಂದು ಅರ್ಥ. ಹಾಗಾಗಿ ಇಲ್ಲಿ ನಡೆಯುವುದೆಲ್ಲವೂ ಆ ಪರಬ್ರಹ್ಮನು ತಾನೇ ಸೃಜಿಸಿದ ಈ ಜಗತ್ತಿನಲ್ಲಿ, ತಾನೇ ಎಲ್ಲವೂ ಆಗಿ, ತಾನೇ ಎಲ್ಲದರೊಳಗೂ ಸೇರಿ, ಎಲ್ಲ ಭಾವಗಳನ್ನೂ ತಾನೇ ಅನುಭವಿಸುತ್ತಿದ್ದಾನೆ ಎನ್ನುವುದು ಒಂದು ವಾದ. ಹಾಗಾಗಿ ನಾವು ನೀವು ಮತ್ತು ಈ ಜಗತ್ತಿನ ಎಲ್ಲವೂ ಆ ಪರ ಬ್ರಹ್ಮನೇ ಆಗಿ ಇಡೀ ಜೀವನವೇ ಬ್ರಹ್ಮನಾಟವೆಂದರೆ ಸಮರ್ಪಕವಾಗುವುದು. ಹಾಗಾಗಿ ಬ್ರಹ್ಮನೇ ಜೀವನ ಮತ್ತು ಜೀವನವೇ ಬ್ರಹ್ಮ.

ವಾಚಕರೆ, ಈ ಸೃಷ್ಟಿಯ ಮೂಲವನ್ನು ತಿಳಿಯುವುದು ಕಷ್ಟ ಮತ್ತು ಈ ಜಗತ್ತಿನಲ್ಲಿ ನಡೆಯುವ ವಿಧ್ಯಮಾನಗಳ ಕಾರಣ ಮತ್ತು ಕರ್ತೃವನ್ನು ಅರಿಯುವುದೂ ಬಹುಶಃ ಅಸಾಧ್ಯ. ಅರಿತವರು ಭಾಗ್ಯವಂತರು. ನಾವೂ ಸಹ ಇದರ ಗೂಢತೆಯನ್ನು ಅರಿಯುವ ಪ್ರಯತ್ನವನ್ನು ಮಾಡಬಹುದು.

ರಸಧಾರೆ – 098

ವಕ್ರಋಜುಮಿಶ್ರ ಜಗವದರ ಶೋಧನೆ ಧರ್ಮ |

ಪ್ರಾಕೃತದ್ವನಿಮಿಶ್ರವದರಡುಗೆ ರಾಗ ||

ವ್ಯಾಕೃತದಿನವ್ಯಾಕೃತಾದಿಸತ್ವಕೆ ನಿನ್ನ|

ಜಾಗೃತಿಪ ಮತಿ ಧರ್ಮ – ಮಂಕುತಿಮ್ಮ. ||

ಅಂಕು ಡೊ೦ಕುಗಳ, ನೇರ ಸೊಟ್ಟಗಳ, ಸುಳ್ಳು ಸತ್ಯಗಳ, ಕೇಡು ಲೇಸುಗಳ ಬೆರಕೆಯೇ ನಮ್ಮ ಈ ಲೋಕ. ಇವುಗಳನ್ನು ಪರೀಕ್ಷಿಸಿ, ಶೋಧಿಸಿ ನೋಡಿದಾಗ ನಮಗೆ ಅರಿವಾಗುವುದು ಲೋಕ ಧರ್ಮ. ಸಂಸ್ಕಾರವಿಲ್ಲದ ಒರಟು ಯೋಚನೆ, ರಾಗಾದಿಗಳನ್ನು ಸುಸಂಕೃತಗೊಳಿಸಿ ಒಂದು ವ್ಯವಸ್ಥೆಯನ್ನು ನಿರ್ಮಾಣಮಾಡಿ, ಶುದ್ಧವಾದ ಸತ್ಯದ ಅರಿವನ್ನು ಮೂಡಿಸುವುದೇ, ಎಚ್ಚರಗೊಳಿಸುವುದೇ ಧರ್ಮ ಎಂದು ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಪ್ರಸ್ತಾಪಮಾಡುತ್ತಾರೆ.

ಇಡೀ ಪ್ರಪಂಚ ಅಂಕು ಡೊಂಕಾಗಿ ಇದೆ. ಯಾವುದೂ ಸಮವಿಲ್ಲ. ಹೀಗಿರುವುದೇ ಧರ್ಮ. ಅದನ್ನು ಹೇಗೆ ಇದೆಯೋ ಹಾಗೆಯೇ ಅರಿತುಕೊಳ್ಳುವುದು ಧರ್ಮ. ಸತ್ಯವನ್ನರಿತಾಗ ಅರಿವು ಮೂಡುತ್ತದೆ. ಅರಿವು ಮೂಡಿದಾಗ ಸಂಶಯ ಮತ್ತು ಸಂದೇಹಗಳಿರುವುದಿಲ್ಲ. ನಮ್ಮ ಎಲ್ಲ ಓದು ವಿದ್ಯಾಬ್ಯಾಸ ಆಚಾರ ವಿಚಾರ ವಿಜ್ಞಾನ ಎಲ್ಲವೂ ನಮ್ಮನ್ನು ಅಸತ್ಯದಿಂದ ಸತ್ಯದೆಡೆಗೆ ಕೊಂಡು ಹೋಗ ಬೇಕು. ಆಗಲೇ ಅವುಗಳೆಲ್ಲಕ್ಕೂ ಒಂದು ಸಾರ್ಥಕತೆ.” ಅಸತೋಮಾ ಸದ್ಗಮಯ, ತಮಸೋಮಾ ಜ್ಯೋತಿರ್ಗಮಯ ” ಎನ್ನುವ ಉಕ್ತಿಗಳಿಗೆ ಇದೇ ಅರ್ಥ.

ಮನುಷ್ಯ ಮೊದಲಿಗೆ ಪ್ರಾಕೃತನಾಗಿದ್ದ. ಎಲ್ಲ ಪ್ರಾಣಿಗಳಂತೆ ಅವನೂ(ಅವಳೂ, ಸೇರಿ) ಅಲೆಮಾರಿಯಾಗಿ ಸಿಕ್ಕ ಸಿಕ್ಕ ಆಹಾರಗಳನ್ನು ತಿನ್ನುತ್ತಾ, “ನಿದ್ರಾಹಾರಮೈತುನ” ಈ ಮೂರು ಕೆಲಸದಲ್ಲಿ ನಿರತನಾಗಿದ್ದ. ಆದರೆ ಮನುಷ್ಯನಿಗೆ ಯೋಚನಾ ಶಕ್ತಿ ಇದೆ. ಅವನಿಗೆ ಮನದಲ್ಲಿ ಪ್ರಶ್ನೆಗಳು ಉದ್ಭವವಾಗುತಿತ್ತು. ಆ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿ ಮತ್ತಷ್ಟು ಪ್ರಶ್ನೆಗಳು ಉದ್ಭವವಾದವು. ತನ್ನ ವಿಚಾರ ಶಕ್ತಿಯನ್ನು ಉಪಯೋಗಿಸಿ ಅವನು ತನ್ನ ಸುತ್ತಲಿನ ಜಗತ್ತನ್ನು ಅರ್ಥೈಸುವುದಕ್ಕೆ ಪ್ರಯತ್ನಿಸಿದ. ಬೇರೆ ಬೇರೆ ಪ್ರದೇಶಗಳಲ್ಲಿನ ಪರಿಸರಕ್ಕೆ ತಕ್ಕಂತೆ ಅವನ ಸಂದೇಹಗಳಿರುತ್ತಿದ್ದವು. ಅದಕ್ಕೆ ತಕ್ಕಂತೆಯೇ ಅವನಿಗೂ ಉತ್ತರಗಳು ಹೊಳೆಯುತ್ತಿದ್ದವು. ಇದೇ ಪ್ರಕ್ರಿಯೆಯಲ್ಲಿ ಬೆಳೆದದ್ದೇ ನಾಗರೀಕತೆ. ಇಡೀ ಪ್ರಪಂಚದಲ್ಲಿ ಹತ್ತು ಹಲವಾರು ರೀತಿಯ ವೈವಿಧ್ಯಮಯ ನಾಗರೀಕತೆಯ ಬೆಳವಣಿಗೆ.

ಆದರೆ ಸತ್ಯವು ಯಾವಾಗಲೂ ಒಂದೇ ಆಗಿರುತ್ತದೆ. ಯಾವುದೇ ವಿಷಯದಲ್ಲಿ ಎರಡು ಸತ್ಯಗಳು ಇರಲು ಸಾಧ್ಯವಿಲ್ಲ. ಅಂತಹ ಶುದ್ಧ ಸತ್ಯವನ್ನು ಅರಿಯ ಬೇಕು. ಇಂತಹ ಸತ್ಯವನ್ನು ಕಂಡು ಮನಗಾಣಬೇಕು. ಅರಿವಿನಲ್ಲಿ ಗಟ್ಟಿಮಾಡಿಕೊಳ್ಳಬೇಕು ಮತ್ತು ವಿಚಲಿತರಾಗಬಾರದು. ಧರ್ಮವೆಂದರೆ ಸ್ವಭಾವವೆಂದು ಅರ್ಥ. ಗಾಳಿಗೆ ಬೀಸುವುದು, ನೀರಿಗೆ ಹರಿಯುವುದು, ಬೆಂಕಿಗೆ ಸುಡುವುದು, ಮೆಣಸಿನಕಾಯಿ ಖಾರವಾಗಿರುವುದು, ಬೆಲ್ಲ ಸಿಹಿಯಾಗಿರುವುದು, ಮನುಷ್ಯ ಮಾನವತೆಯಿಂದ ಇರುವುದು ಧರ್ಮ. ಇದರಲ್ಲಿ ಏರುಪೇರಾದರೆ ಎಂತಹ ಅನಾಹುತವಾಗುತ್ತದೆಂದು ಸ್ವಲ್ಪ ಯೋಚಿಸಿ ವಾಚಕರೆ. ಆದರೆ ಇಂದಿನ ಪರಿಸ್ಥಿತಿಯನ್ನು ನೋಡಿದರೆ ತೀವ್ರ ದುಃಖವಾಗುತ್ತದೆ.

ಏಕೆಂದರೆ, ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಎಲ್ಲವನ್ನೂ ಸತ್ಯವಾಗಿ ಕಂಡುಕೊಂಡು ಪ್ರಮಾಣಿಸಿ, ಧರ್ಮದ ಪರಿಭಾಷೆಯನ್ನು ಜಗತ್ತಿಗೆ, ವೇದ, ಉಪನಿಷತ್ತು, ಭಗವದ್ಗೀತೆ, ಭಾಗವತ, ಪುರಾಣಗಳು, ನೀತಿಕತೆಗಳು ಮುಂತಾದವುಗಳ ಮೂಲಕ ಜನರನ್ನು ಸುಸಂಸ್ಕೃತರನ್ನಾಗಿಸಲು, ಹೇರಳ ಪ್ರಯತ್ನ ನಡೆದಿದೆ. ಆದರೆ ವಿತಂಡ ವಾದಿಗಳ ಪ್ರಭಾವ, ಪಾಶ್ಚಾತ್ಯ ಜೀವನದ ಪರಿಣಾಮ, ವಿಜ್ಞಾನದ ದುರುಪಯೋಗ, ಮತ್ತು ಜನರಲ್ಲಿ ಮೌಲ್ಯಗಳ ಕುಸಿತದಿಂದ ಇಂದು ” ಸತ್ಯೋರ್ಮಾ ಅಸತ್ಯಂಗಮಯ” ಅಂದರೆ ಸತ್ಯದಿಂದ ಅಸತ್ತಿನೆಡೆಗೆ ಎಂದು ಆಗಿಬಿಟ್ಟಿದೆ. ಇದು ಎಲ್ಲ ಸಜ್ಜನರಿಗೂ ಗೊತ್ತಿರುವ ವಿಷಯವೇ. ಈ ಖಾಯಿಲೆಗೆ ಮದ್ದು ಒಂದು ಸಾಂಸ್ಕೃತಿಕ ಆಂದೋಲನವೇ ಆಗಬೇಕು. ನಮ್ಮ ನಿಮ್ಮಿಂದ ಆಗಬೇಕು. ಬನ್ನಿ ನಾವು ಅದಕ್ಕಾಗಿ ಪ್ರಯತ್ನ ಪಡೋಣ.

ಮೇಯ – ಅಮೇಯ. ರಸಧಾರೆ – 099

ಜಲಧಿತೀರದಿ ನಿಂತು ವೀಕ್ಷಿಸಿಕ್ಕೆಲಗಳಲಿ |

ಚಲವೊಂದಚಲವೊಂದು ಸಮವದಸಮವಿದು ||

ಕಲೆತಿರ್ಪುವಂತು ಮೇಯಾಮೇಯಗಳು ಜಗದಿ |

ಮಿಲಿತತೆಯಿನೇ ರುಚಿಯೋ – ಮಂಕುತಿಮ್ಮ.||

ಮೇಯ = ಅರಿವಿಗೆ ಬರುವಂಥಾದ್ದು, ಅಮೇಯ = ಅರಿವಿಗೆ ಬಾರದ್ದು, ಚಲ = ಚಲಿಸುವುದು, ಅಚಲ = ಚಲನೆ ಇಲ್ಲದ್ದು.

ಜಲದಿ ತೀರದಿ ನಿಂತು ವೀಕ್ಷಿಸಲು ಇಕ್ಕೆಳಗಳಲಿ ಚಲವೊಂದು, ಅಚಲವೊಂದು, ಸಮವದು ಅಸಮವಿದು ಕಲೆತು ಇರ್ಪುವಂತು ಮೇಯ, ಅಮೇಯಗಳು ಜಗದಿ, ಮಿಲಿತತೆ ಯೇ ರುಚಿಯೋ ಮಂಕುತಿಮ್ಮ.

ಸಮುದ್ರದ ತೀರದಲ್ಲಿ ನಿಂತು ಎರಡೂ ಬದಿಯಲ್ಲಿ ನೋಡಿದರೆ ಒಂದು ಕಡೆ ಸಮವಾಗಿರುವ ಕಡಲೂ ಇನ್ನೊಂದು ಬದಿಯಲ್ಲಿ ಅಸಮವಾಗಿರುವ ಭೂಮಿ, ಬೆಟ್ಟ ಗುಡ್ಡಗಳೂ ಕಾಣುತ್ತದೆ. ಇದರಂತೆ ಈ ಜಗತ್ತಿನಲ್ಲಿ ಹಲವು ಸಮವಾಗಿ ಮತ್ತೆ ಹಲವು ಅಸಮವಾಗಿಯೂ ಇವೆ. ಹೀಗೆ ಸಮತೆ ಮತ್ತು ಅಸಮತೆಯಿಂದ ಕೂಡಿ ಇರುವುದೇ ಜಗತ್ತು . ಕೆಲವು ನಮಗೆ ಅರ್ಥವಾಗುತ್ತದೆ. ಕೆಲವು ನಮ್ಮ ಅರಿವಿನ ಪರಿಧಿಯಿಂದಾಚೆಗೆ ಇದೆ. ಹೀಗಿರುವುದೇ, ಈ ಜಗತ್ತಿಗೆ ಸೊಬಗನ್ನು ನೀಡಿದೆಯೋ? ಎಂದು ಕೇಳುತ್ತಾ ಒಂದು ಗಹನವಾದ ವಿಚಾರವನ್ನು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು.

ಈ ಜಗತ್ತು ವೈವಿಧ್ಯತೆಯಿಂದ ಕೂಡಿದೆ. ನೈಸರ್ಗಿಕ ಏರುಪೇರುಗಳು. ಕೆಲವು ಸಮ, ಕೆಲವು ಅಸಮ. ಕೆಲವು ನುಣುಪು, ಕೆಲವು ಒರಟು. ಕೆಲವಕ್ಕೆ ಬೃಹತ್ತಾದ ಗಾತ್ರ ಕೆಲವು ತೀರ ಸಣ್ಣವು. ಕೆಲವು ಒಂದೇ ಬಣ್ಣ ಮತ್ತೆ ಕೆಲವು ಹಲವು ವರ್ಣ ರಂಜಿತ. ಕೆಲವು ಸಾದು ಕೆಲವು ದುಷ್ಟ, ಕೆಲವು ಅಲ್ಪಾಯುಷಿ ಮತ್ತೆ ಕೆಲವು ಧೀರ್ಘಾಯುಷಿ. ಕೆಲವು ಅರ್ಥವಾಗುವುದು ಮತ್ತೆ ಕೆಲವು ಅರ್ಥವೇ ಆಗದು, ಹೀಗೆ ಹತ್ತು ಹಲವಾರು ಸಾವಿರಾರು, ವೈವಿಧ್ಯತೆಯಿಂದ ಕೂಡಿರುವುದೇ ಈ ಜಗತ್ತು. ನಮಗೆ ಚೆನ್ನಾಗಿ ಪರಿಚಯವಿರುವ ಮಾನವ ಪ್ರಪಂಚದಲ್ಲಿಯೇ ಎಷ್ಟೊಂದು ಭೇಧಗಳಿವೆಯಲ್ಲ. ಹೀಗೆ ಸಮ ಮತ್ತು ಅಸಮತೆ, ಮೇಯ ಮತ್ತು ಅಮೇಯಗಳಿಂದ ಕೂಡಿರುವ ಜಗತ್ತನ್ನು ಸೃಜಿಸಿ ಆ ಪರಮಾತ್ಮ , ಇವುಗಳಲ್ಲಿ ಇದ್ದುಕೊಂಡು ಅಥವಾ ಇಷ್ಟೊಂದು ವೈವಿಧ್ಯಮಯ ರೂಪಗಳನ್ನು ಹೊದ್ದುಕೊಂಡು ಪ್ರತಿಯೊಂದು ಬೇಧವನ್ನೂ ಸಂತೋಷದಿಂದ ಅನುಭವಿಸುತ್ತಿದ್ದಾನೆ (ಮಜಾ ಮಾಡ್ತಾ). ಅದು ಅವನದೇ ಸೃಷ್ಟಿ , ತನಗೆ ಹೇಗೆ ಬೇಕೋ ಹಾಗೆ ಮಾಡಿದ ಸೃಷ್ಟಿ, ಮಾಡಿದವನೂ ಅವನೇ ಮತ್ತು ಇರುವುದೂ ಅವನೇ ಮತ್ತು ಅನುಭವಿಸುವವನೂ ಅವನೇ. ಹಾಗೆ ಅವನಿಂದ ಸೃಷ್ಟಿಸಲ್ಪಟ್ಟ ಆ ಜಗತ್ತಿನಲ್ಲಿರುವ ಸಮ – ಅಸಮತೆಯನ್ನು ವೈವಿಧ್ಯತೆಯನ್ನು ಪ್ರಶ್ನಿಸಿದರೆ , ಆ ಸೃಷ್ಟಿಕರ್ತನ ಕ್ರಿಯೆಯನ್ನೇ ಪ್ರಶ್ನಿಸಿದಂತೆ ಆಗುತ್ತದೆ ಅಲ್ಲವೇ?

ನಾವೂ ಸಹ ಆ ಜಗನ್ನಾಟಕ ಸೂತ್ರದಾರಿಯಾದ ಪರಮಾತ್ಮನಿಂದ ಸೃಷ್ಟಿಸಲ್ಪತ್ತಿರುವ ಈ ಜಗತ್ತಿನ ಒಂದು ಅಂಶವಷ್ಟೇ. ಇಂತಹ ಸುಂದರ, ಬಣ್ಣ ಬಣ್ಣದ, ವೈವಿಧ್ಯಮಯ ಸೃಷ್ಟಿಯನ್ನು ನೋಡುತ್ತಾ, ಪರಮಾತ್ಮನ ಸೃಷ್ಟಿಯನ್ನು ಅಭಿನಂದಿಸುತ್ತಾ, ಅನುಭವಿಸುತ್ತಾ, ಕಾಪಾಡಲಾಗದಿದ್ದರೂ, ನಮ್ಮನ್ನು ಇಂತಹ ಒಂದು ಅದ್ಭುತ ಸೃಷ್ಟಿಯ ಭಾಗವನ್ನಾಗಿಸಿದ್ದಕ್ಕೆ ಆ ಪರಮಾತ್ಮನಿಗೆ ಕೃತಜ್ಞತೆ ತೋರುತ್ತಾ, ಇದನ್ನು ಹಾಳುಗೆಡವದೆ, ಟೀಕಿಸದೆ, ” ಎಲ್ಲವೂ ಆ ಪರಮಾತ್ಮನ ಸೃಷ್ಟಿ, ನಾನೂ ಇದರ ಒಂದು ಭಾಗ, ಇದನ್ನು ಹಾಳುಮಾಡಲು ನನಗೇನೂ ಅಧಿಕಾರವಿಲ್ಲ, ಇದನ್ನು ಅನುಭವಿಸುವ ಮತ್ತು ಆನಂದಿಸುವ ಅರ್ಹತೆ ಮಾತ್ರ ನನಗುಂಟು, ಇದನ್ನು ಗೌರವಿಸಬೇಕು, ಇದನ್ನು ಕಾಪಾಡಬೇಕು, ಮುಂದಿನ ಪೀಳಿಗೆಗೆ ಇದನ್ನು ಕೊಡಲು ನಾವು ನಮ್ಮ ಹಿಂದಿನವರಿಂದ ಪಡೆದ ಎರವಲು ಮಾತ್ರ” ಎಂಬ ಅರಿವಿನಿಂದ ಇದ್ದರೆ ಒಳಿತು , ಇಲ್ಲದಿದ್ದರೆ ಕೆಡುಕು.

ವಾಚಕರೆ ನಾವೇನು ಮಾಡಬೇಕು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಹಾಗಾಗಿ ನಮ್ಮ ನಿಮ್ಮ ಪರಿಮಿತ ಮಿತಿಯೊಳಗೆ ಈ ಜಗತ್ತಿನ ವೈವಿಧ್ಯತೆಯನ್ನು ನೋಡಿ ಕೇವಲ ಅನುಭವಿಸಿ , ಅಭಿನಂದಿಸಿ, ಕಾಪಾಡುವ, ಆನಂದಿಸುವ ನಿರ್ಧಾರ ಮಾಡುವ.

ರಸಧಾರೆ – 100

ಅವಿದಿತಾಖಂಡಸತ್ವದಪಾರ ಜಲಧಿಯಲಿ |

ಭುವನದ ದ್ವೀಪ ಕಿಂಚಿನ್ಮಾತ್ರವಿದಿತ ||

ಪವಿತಾಂತರಕ್ಷಿ ಗಾಯೇರಡುವೊಂದೇವಸ್ತು |

ವವಗುಂಠಿತ ಬ್ರಹ್ಮ – ಮಂಕುತಿಮ್ಮ. ||

ಅವಿದಿತಾಖಂಡಸತ್ವದಪಾರ = ಅವಿದಿತ + ಅಖಂಡ + ಸತ್ವದ + ಅಪಾರ/ ಕಿಂಚಿನ್ಮಾತ್ರವಿದಿತ = ಕಿಂಚಿತ್ + ಮಾತ್ರ + ವಿದಿತ, / ಪವಿತಾಂತರಕ್ಷಿ ಗಾಯೇರಡುವೊಂದೇ = ಪವಿತ + ಅಂತರ + ಅಕ್ಷಿಗೆ + ಎರಡು + ಒಂದೇ / ವಸ್ತುವವಗುಂಠಿತ = ವಸ್ತುವು + ಅವಗುಂಠಿತ ಅವಿದಿತ = ನಮಗರಿವಿಲ್ಲದ/ ಅಖಂಡ= ಸಂಪೂರ್ಣವಾದ ತುಂಡರಿಸಲಾಗದ/ ಸತ್ವದ= ಜ್ಞಾನದ/ ಅಪಾರ ಜಲಧಿಯಲಿ = ವಿಶಾಲದವಾದ/ಜಲದಿಯಲಿ = ಸಮುದ್ರದಲಿ/ಭುವನದ = ಈ ಭೂಮಿಯ, ಕಿಂಚಿನ್ಮಾತ್ರವಿದಿತ = ತಿಳಿದಿರುವುದು ಅಲ್ಪಮಾತ್ರ. ಪವಿತಾಂತರಕ್ಷಿ = ಪವಿತ್ರವಾದ, ಶುದ್ಧವಾದ ಒಳಗಣ್ಣು, ಯೇರಡುವೊಂದೇವಸ್ತು = ಎರಡೂ ವಸ್ತುವನ್ನು ಒಂದೇ ಎನ್ನುವ ರೀತಿ. ಒಂದೇ ವಸ್ತುವವಗುಂಠಿತ = ಈ ಎರಡನ್ನೂ ಆವರಿಸಿರುವುದು ಒಂದೇ ವಸ್ತು. ಅದೇ ಬ್ರಹ್ಮ.

ಇಡೀ ಬ್ರಹ್ಮಾಂಡದಲ್ಲಿ ನಮ್ಮ ಭೂಮಿ ಬಹಳ ಸಣ್ಣದು. ಏಕೆಂದರೆ ನಮಗೆ ಕಾಣುವ ಸೂರ್ಯನ ಗಾತ್ರ ಭೂಮಿಯ ಗಾತ್ರಕ್ಕಿಂತ ೧೩ ಲಕ್ಷ ಪಟ್ಟು ದೊಡ್ಡದು. ಅಬ್ಬಾ!!! ನಮ್ಮ ಅರಿವಿಗೆ ನಿಲುಕ್ಕದ್ದು. ಹಾಗಾದರೆ ಇಡೀ ಬ್ರಹ್ಮಾಂಡಕ್ಕೆ ಹೋಲಿಸಿದರೆ ನಮ್ಮ ಭೂಮಿಯೆಷ್ಟರದ್ದು? ಈ ಭೂಮಿಯಮೇಲೂ, ಒಂದು ಪಾಲು ನೆಲ ಮತ್ತು ಮೂರು ಪಾಲು ನೀರು. ಹಾಗಾಗಿ ನಾವು ನಿಂತಿರುವ ನೆಲ ಈ ಜಗತ್ತಿನ ವ್ಯಾಪಕತ್ವಕ್ಕೆ ಹೋಲಿಸಿದರೆ ಒಂದು ಸೂಜಿ ಮೊನೆಯಷ್ಟೂ ಅಲ್ಲ. ಇದನ್ನೇ ನಮಗರಿವಿಲ್ಲದ ಮತ್ತು ಅಖಂಡವಾದ ಇಡೀ ಜಗತ್ತಿನಲ್ಲಿ ಭೂಮಿಯಪಾಲು ಕಿಂಚಿನ್ಮಾತ್ರವೆಂದರು ಮಾನ್ಯ ಗುಂಡಪ್ಪನವರು.

ಹಾಗೆಯೇ “ ಅವಿದಿತಾಖಂಡಸತ್ವದಪಾರ ಜಲಧಿಯಲಿ ” ಎನ್ನುವಾಗ ವಿಶಾಲಜಲದಿಯಲ್ಲಿ ಎಂದರೆ ಅಪಾರವಾದ ಜ್ಞಾನ ಸಮುದ್ರದಲ್ಲಿ ನಮಗೆ ತಿಳಿಯದಿರುವುದೇ ಅಧಿಕ. ಹಾಗೆ ತಿಳಿದಿರುವುದೂ ಸಹ ಕಿಂಚಿನ್ಮಾತ್ರವೇ ಎಂಬುದೂ ಸಹ ಮಾನ್ಯ ಗುಂಡಪ್ಪನವರ ಈ ಕಗ್ಗದ ಹೂರಣ. ಈ ಜಗತ್ತಿನಲ್ಲಿರುವ ಎಲ್ಲ ಜ್ಞಾನದ ವಿಶಾಲತೆ ಮತ್ತು ವ್ಯಾಪಕತೆಯನ್ನು ನೋಡಿದರೆ, ನಮಗೆ ತಿಳಿದಿರುವುದು ಎಷ್ಟು ಎಂದರೆ ಆ ಸೂಜಿಮೊನೆಯನ್ನು ಲಕ್ಷಪಾಲು ಮಾಡಿದರೆ, ಆ ಲಕ್ಷದಲ್ಲಿ ಒಂದೂ ಅಲ್ಲ, ಅಲ್ಲವೇ?

ಆದರೆ ಬ್ರಹ್ಮವೆಂದರೆ ಜ್ಞಾನ ಸ್ವರೂಪ. ಆ ಜ್ಞಾನವನ್ನು ಅರಿಯಬೇಕಾದರೆ ನಾವು ನಮ್ಮ ಅಂತಃಚಕ್ಷುವಿನಿಂದ ನೋಡಬೇಕು. ನೋಡುವ ಚಕ್ಷು ಯಾವುದೇ ರೀತಿಯ ಪೂರ್ವಾಗ್ರಹವಿಲ್ಲದೆ ಶುದ್ಧವಾಗಿರಬೇಕು. ಅಂತಹ ಪವಿತ್ರ ಮತ್ತು ಶುದ್ಧವಾದ ಅಂತಃಕರಣದಿಂದ ನೋಡಿದರೆ ಅರಿವಾಗಬಹುದು. ಆದರೆ ನಮಗೆ ಮಿತಿಗಳುಂಟು. ಭಾಷೆಯ, ಜಾತಿಯ, ಧರ್ಮದ, ಪಂಗಡದ ಹೀಗೆ ಹತ್ತು ಹಲವಾರು ಗೋಡೆಗಳನ್ನು ನಾವು ನಮ್ಮ ಸುತ್ತ ನಿರ್ಮಿಸಿಕೊಂಡಿರುವಾಗ ಆ ಶುದ್ಧ ಮನಸ್ಸೂ ಇರಲು ಸಾಧ್ಯವಿಲ್ಲ ಪರಿಶುದ್ಧಮನಸ್ಸಿಲ್ಲದೆ ಜ್ಞಾನವೂ ದೂರ. ಅದನ್ನು ಪಡೆಯಬೇಕಾದರೆ, ಶುದ್ಧವಾದ ಪ್ರಯತ್ನ ಬೇಕು. ಪ್ರಯತ್ನಕ್ಕೆ ಪೂರಕವಾಗಿ ಗುರುವಿನ ಮಾರ್ಗದರ್ಶನ ಬೇಕು. ಅಹಂಕಾರ ಬಿಡಬೇಕು. ಇದನ್ನೇ

“ಸತ್ಸಂಗತ್ವೆ ನಿಸ್ಸಂಗತ್ವಂ, ನಿಸ್ಸಂಗತ್ವೆ ನಿರ್ಮೋಹತ್ವಂ, ನಿರ್ಮೋಹತ್ವೆ ನಿಶ್ಚಲ ತತ್ವಂ,ನಿಶ್ಚಲ ತತ್ವೆ ಜೀವನ್ಮುಕ್ತಿ: ” ಎಂದಿದ್ದಾರೆ. ಸತ್ಸಂಗದಲ್ಲಿದ್ದರೆ, ಅಸತ್ತಿನ ನಿಸ್ಸಂಗವಾಗುತ್ತದೆ, ನಿಸ್ಸಂಗವಾದರೆ ಮೋಹ ನಶಿಸಿಹೋಗುತ್ತದೆ, ಮೋಹ ಹೋದರೆ ಪರಮಾತ್ಮ ತತ್ವ ಸಂದೇಹ, ಸಂಶಯಗಳಿಲ್ಲದೆ ಗಟ್ಟಿಯಾಗುತ್ತದೆ, ನಿಶ್ಚಲವಾಗುತ್ತದೆ, ನಿಶ್ಚಲವಾದ ತತ್ವಜ್ಞಾನದಿಂದ ಜೀವ, ಬಂದನಗಳಿಂದ ಮುಕ್ತನಾಗುತ್ತಾನೆ. ಈ ವಿಧದಲ್ಲಿ ಜ್ಞಾನಪ್ರಾಪ್ತಿಯಾದರೆ, ಆಗ ಜಡ ಜೀವದಲ್ಲಿ ಅಂದರೆ ವಸ್ತು ಮತ್ತು ಚೇತನದ ನಡುವಿನ ಬೇಧವೂ ಅಳಿಸಿಹೋಗುತ್ತದೆ. ಏಕೆಂದರೆ ಬ್ರಹ್ಮವೇ ಎಲ್ಲವೂ. ಅಖಂಡ ಜ್ಞಾನವೇ ಬ್ರಹ್ಮ. ಎಲ್ಲವೂ ಬ್ರಹ್ಮವೆಂದಾದಮೇಲೆ, ಜಡ ಜೀವಗಳ ಬೇಧ ಅಳಿಸಿಹೋಗಿ ಶುದ್ಧಜ್ಞಾನ ನಮಗೆ ಲಭ್ಯವಾಗುತ್ತದೆ.

ವಾಚಕರೆ, ಈ ಜಗತ್ತಿನಲ್ಲಿ ಯಾರಿಗೆ ಏನು ಬೇಕೋ ಅದೆಲ್ಲವೂ ಇದೆ. ನಮ್ಮ ಆಯ್ಕೆ ಸರಿಯಾಗಿದ್ದರೆ, ನಮಗೆ ಎಲ್ಲವೂ ಸರಿಯಾದದ್ದೇ ಲಭ್ಯವಾಗುತ್ತದೆ. ಆಯ್ಕೆ ಸರಿಯಿಲ್ಲದಿದ್ದರೆ ಯಾವುದೂ ಸಮರ್ಪಕವಾಗಿರುವುದಿಲ್ಲ.

ನಾವು ಒಳ್ಳೆಯ ಆಯ್ಕೆಯಿಂದ ಒಳ್ಳೆಯದನ್ನೇ ಪಡೆಯುವ ಪ್ರಯತ್ನವನ್ನು ಮಾಡೋಣವೆ 

You may Also Like :

 

Leave a Comment